ಮಹಾರಾಷ್ಟ್ರ ಸರ್ಕಾರ ಪತನ ಸನ್ನಿಹಿತ: ಏಕನಾಥ ಶಿಂಧೆ ಬಣಕ್ಕೆ ಶಿವಸೇನೆಯ 42 ಶಾಸಕರ ಬೆಂಬಲ-ಬಂಡಾಯ ಶಾಸಕರ ಬಣ

ಮುಂಬೈ: ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್​ ಮೈತ್ರಿಯ ಮಹಾ ವಿಕಾಸ್ ಅಘಾಡಿ ಸರ್ಕಾರದ ಪತನ ಬಹುತೇಕ ಸನ್ನಿಹಿತವಾದಂತೆ ಕಾಣುತ್ತಿದೆ.
ಶಿವಸೇನೆಯಮತ್ತೆ ಮೂವರು ಶಾಸಕರು ಗುವಾಹತಿ ತಲುಪಿದ್ದು, ಏಕನಾಥ ಶಿಂಧೆ ಪಾಳಯ ಸೇರಿದ್ದಾರೆ.
ಶಿವಸೇನೆಯ 42 ಶಾಸಕರು ತಮ್ಮ ಬಣಕ್ಕೆ ನಿಷ್ಠೆ ವ್ಯಕ್ತಪಡಿಸಿದ್ದಾರೆ ಎಂದು ಏಕನಾಥ ಶಿಂಧೆ ಹೇಳಿಕೊಂಡಿದ್ದಾರೆ. ಮುಖ್ಯಮಂತ್ರಿ ಉದ್ದವ್ ಠಾಕ್ರೆ (CM ಬೆಂಬಲಕ್ಕೆ ನಿಂತ ಶಾಸಕರ ಸಂಖ್ಯೆ ಕೇವಲ‌ 13ಕ್ಕೆ ಇಳಿದಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ ಅನೇಕ ಲೋಕಸಭಾ ಸದಸ್ಯರು ಸಹ ಶಿವಸೇನೆ ಬಂಡಾಯ ನಾಯಕ ಏಕನಾಥ ಶಿಂಧೆ ಸಂಪರ್ಕದಲ್ಲಿದ್ದಾರೆ ಎಂದೂ ಹೇಳಲಾಗುತ್ತಿದೆ.ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಬುಧವಾರ ರಾತ್ರಿಯೇ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ವರ್ಷ ತೊರೆದಿದ್ದು, ತಮ್ಮ ಕುಟುಂಬದ ಮನೆ ಮಾತೋಶ್ರೀಗೆ ತೆರಳಿದ್ದಾರೆ.

ಉದ್ಧವ್ ಠಾಕ್ರೆ ಅವರು ತಮಗೆ ನಿಷ್ಠರಾಗಿರುವ ಶಾಸಕರ ಸಭೆ ಕರೆದಿದ್ದು, ಬಂಡಾಯ ಶಾಸಕರನ್ನು ಪಕ್ಷದಿಂದ ಉಚ್ಚಾಟಿಸುವ ಸಾಧ್ಯತೆಯಿದೆ. ಏಕನಾಥ ಶಿಂಧೆ ಬಣದಲ್ಲಿರುವ ಶಾಸಕರ ಸಂಖ್ಯೆ ಪಕ್ಷದ ಒಟ್ಟು ಶಾಸಕರ ಮೂರನೇ ಎರಡರಷ್ಟು ಇರುವುದು ದೃಢಪಟ್ಟರೆ ಪಕ್ಷಾಂತರ ನಿಷೇಧ ಕಾಯಿದೆಯಡಿ ಅವರನ್ನು ಅನರ್ಹಗೊಳಿಸಲು ಸಾಧ್ಯವಾಗುವುದಿಲ್ಲ. ಆಗ ಅವರುತಮ್ಮ ಬಣವನ್ನೇ ಅಧಿಕೃತ ಶಿವಸೇನಾ ಪಕ್ಷ ಎಂದು ಮಾನ್ಯತೆ ನೀಡುವಂತೆ ಸ್ಪೀಕರ್ ಮತ್ತು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಬಹುದು. ಶಿವಸೇನಾ ಪಕ್ಷದ ಚುನಾವಣಾ ಚಿಹ್ನೆಯನ್ನೂ ಕೇಳಬಹುದು.
ಹಾಲಿ ಲೆಕ್ಕಾಚಾರದಲ್ಲಿ ಏಕನಾಥ ಶಿಂಧೆ ಬಣದ ಕೈ ಮೇಲಾಗಿದೆ.ಶಿವಸೇನೆಯ 55 ಶಾಸಕರ ಪೈಕಿ 42 ಮಂದಿ ಪ್ರಸ್ತುತ ಏಕನಾಥ ಶಿಂಧೆ ಬಣದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಮಹಾರಾಷ್ಟ್ರದ ವಿಧಾನಸಭೆಯ 106 ಬಿಜೆಪಿ ಶಾಸಕರ ಜೊತೆಗೆ ಏಕನಾಥ ಶಿಂಧೆ ಬಣದ 42 ಮಂದಿ ಬೆಂಬಲ ಸೇರಿದರೇ 148ಕ್ಕೆ ಸಂಖ್ಯಾಬಲ ಹೆಚ್ಚಾಗುತ್ತದೆ. ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 145 ಸದಸ್ಯ ಬಲ ಸಾಕಾಗುತ್ತದೆ. ಆದರೆ ಮಹಾರಾಷ್ಟ್ರದ ವಿಧಾನಸಭೆಯ ಓರ್ವ ಶಾಸಕರು ಮೃತಪಟ್ಟಿದ್ದಾರೆ. ಎನ್​ಸಿಪಿಯ ಅನಿಲ್ ದೇಶಮುಖ್ ಮತ್ತು ನವಾಬ್ ಮಲ್ಲಿಕ್ ಜೈಲುಪಾಲಾಗಿದ್ದಾರೆ.

ಪ್ರಮುಖ ಸುದ್ದಿ :-   ದೆಹಲಿ ಹೈಕೋರ್ಟ್ ಮರುಮೌಲ್ಯಮಾಪನದ ಅರ್ಜಿ ತಿರಸ್ಕರಿಸಿದ ನಂತರ ಕಾಂಗ್ರೆಸ್ಸಿಗೆ 1700 ಕೋಟಿ ತೆರಿಗೆ ನೋಟಿಸ್ ನೀಡಿದ ಐಟಿ : ಮೂಲಗಳು

ಈ ಹಿಂದೆ ರಾಜ್ಯಸಭಾ ಚುನಾವಣೆ, ವಿಧಾನಪರಿಷತ್ ಚುನಾವಣೆ ವೇಳೆಯೂ ಇಬ್ಬರಿಗೆ ಮತ ಚಲಾಯಿಸಲು ಕೋರ್ಟ್ ಅವಕಾಶ ನೀಡಿಲ್ಲ. ಹೀಗಾಗಿ ವಿಶ್ವಾಸಮತ ಯಾಚನೆ ವೇಳೆ ಮತಚಲಾಯಿಸಲು ಇವರಿಬ್ಬರಿಗೂ ಅವಕಾಶ ಸಿಗುವ ಸಾಧ್ಯತೆ ಬಹಳ ಕಡಿಮೆ. ಆಗ ಮಹಾರಾಷ್ಟ್ರದ ವಿಧಾನ ಸಭೆಯ ಒಟ್ಟು ಸಂಖ್ಯಾಬಲ 288ರಿಂದ 285ಕ್ಕೆ ಕುಸಿಯಲಿದೆ.
ಇದಕ್ಕೆ ಅನುಗುಣವಾಗಿ ಸರ್ಕಾರ ರಚಿಸಲು ಬೇಕಿರುವ ಸಂಖ್ಯೆ 143 ಬೇಕಾಗುತ್ತದೆ. ಸದ್ಯ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ ಹಾಗೂ ಎನ್​ಡಿಎ ಮೈತ್ರಿಕೂಟ 113 ಸಂಖ್ಯಾಬಲ ಹೊಂದಿದೆ. ಏಕನಾಥ ಶಿಂಧೆ ಬಣದಲ್ಲಿ ಪಕ್ಷೇತರ ಶಾಸಕರು ಸೇರಿದಂತೆ 48 ಶಾಸಕರು ಗುರುತಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಖ್ಯೆಯನ್ನು ಪರಿಗಣಿಸಿದರೆ ಎನ್​​ಡಿಎ ಮತ್ತು ಏಕನಾಥ ಶಿಂಧೆ‌ ಬಣದ ಶಾಸಕರ ಸಂಖ್ಯೆ 161ಕ್ಕೆ ತಲುಪುತ್ತದೆ. ಅಲ್ಲದೆ, ಹೊತ್ತಿಗೆ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಸಂಖ್ಯಾಬಲವು 124ಕ್ಕೆ ಕುಸಿತ ಕಾಣುತ್ತದೆ. ಈ ಲೆಕ್ಕಾಚಾರ ಗಮನಿಸಿದರೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ಕಾರ ಬಹುಮತ ಕಳೆದುಕೊಳ್ಳುವ ಸಾಧ್ಯತೆ ಕಂಡುಬರುತ್ತಿದೆ.

ಏತನ್ಮಧ್ಯೆ ಬುಧವಾರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಭಾವನಾತ್ಮಕ ಭಾಷಣಕ್ಕೆ ಪ್ರತಿಕ್ರಿಯಿಸಿ ಮೂರು ಪುಟಗಳ ಪತ್ರವನ್ನು ಏಕನಾಥ್ ಶಿಂಧೆ ಟ್ವೀಟ್ ಮಾಡಿದ್ದಾರೆ. ಈಗ ನಡೆಯುತ್ತಿರುವುದು ವಾಸ್ತವ ಮತ್ತು ಶಿವಸೇನೆ ಶಾಸಕರು ಬಯಸಿದ್ದು ಇದನ್ನೇ ಎಂದು ಹೇಳಿದ್ದಾರೆ. ತಾವು ವಾಪಸ್ ಬರುವುದಿಲ್ಲ ಎಂದೂ ಹೇಳಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಅಧಿಕೃತ ನಿವಾಸ ‘ವರ್ಷ’ವನ್ನು ತೊರೆದಿದ್ದಕ್ಕಾಗಿ ಅವರು ಉದ್ಧವ್‌ ಠಾಕ್ರೆ ಅವರನ್ನು ಲೇವಡಿ ಮಾಡಿದ್ದಾರೆ.
ಏತ್ನಮಧ್ಯೆ ಅಸ್ಸಾಂನ ಗುವಾಹತಿ ರಾಡಿಸನ್‌ ಹೋಟೆಲ್‌ನಲ್ಲಿರುವ ಭಿನ್ನಮತೀಯ ಶಿವಸೇನೆ ಶಾಸಕರನ್ನು ಸೇರಿಕೊಳ್ಳಲು ಮತ್ತಷ್ಟು ಶಾಸಕರು ಇಂದು, ಗುರುವಾರ ತೆರಳಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ ಮೂವರು ಶಾಸಕರು ಗುವಾಹತಿ ಹೋಟೆಲ್‌ ತಲುಪಿದ್ದಾರೆ.

ಪ್ರಮುಖ ಸುದ್ದಿ :-   ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ಸಾವು

ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ 42 ಶಾಸಕರು 
ರಿಪಬ್ಲಿಕ್‌ ಟಿವಿ ವರದಿ ಪ್ರಕಾರ, ಶಿವಸೇನೆ ಶಾಸಕರಾದ ಮಹೇಂದ್ರ ಮೋರೆ, ಭರತ್ ಗೊಗಾವಾಲ್, ಮಹೇಂದ್ರ ದಳವಿ, ಅನಿಲ್ ಬಾಬರ್, ಮಹೇಶ ಶಿಂಧೆ, ಶಹಾಜಿ ಪಾಟೀಲ, ಶಂಭುರಾಜೇ ದೇಸಾಯಿ, ದಯಾರಾಜ್ ಚೌಗುಲೆ, ರಮೇಶ ಬೋರ್ನಾರೆ, ತಾನಾಜಿ ಸಾವಂತ್, ಸಂದೀಪನ್ ಬುಮ್ರೆ,
ಅಬ್ದುಲ್ ಸತ್ತಾರ್, ಪ್ರಕಾಶ್ ಸುರ್ವೆ, ಬಾಲಾಜಿ ಕಲ್ಯಾಣಕರ್, ಸಂಜಯ್ ಶಿರ್ಸತ್, ಪ್ರದೀಪ್ ಜೈಸ್ವಾಲ್, ಸಂಜಯ್ ರೈಮುಲ್ಕರ್, ಸಂಜಯ್ ಗಾಯಕ್ವಾಡ್, ಏಕನಾಥ್ ಶಿಂಧೆ, ವಿಶ್ವನಾಥ ಭೋರ್, ಶಾಂತಾರಾಮ್ ಮೋರ್, ಶ್ರೀನಿವಾಸ ವಂಗ, ಪ್ರಕಾಶ್ ಅಭಿತ್ಕರ್, ಚಿಮನರಾವ್ ಪಾಟೀಲ್, ಸುಹಾಸ್ ಕಂಡೆ, ಕಿಶೋರಪ್ಪ ಪಾಟೀಲ್, ಪ್ರತಾಪ್ ಸರ್ನಾಯಕ್, ಯಾಮಿನಿ ಜಾಧವ್, ಲತಾ ಸೋನವಾನೆ, ಬಾಲಾಜಿ ಕಿಣೆಕರ್, ಗುಲಾಬರಾವ್ ಪಾಟೀಲ್, ಯೋಗೇಶ್ ಕದಂ, ಸದಾ ಸರ್ವಂಕರ, ದೀಪಕ್ ಕೇಸರಕರ್, ಮಂಗೇಶ್ ಕುಡಾಳ್ಕರ್ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿದ್ದಾರೆ.
ಸ್ವತಂತ್ರರು ಮತ್ತು ಇತರರಾದ ರಾಜಕುಮಾರ್ ಪಟೇಲ್ (ಪ್ರಹಾರ್ ಸಂಘಟನೆ), ಬಚ್ಚು ಕಾಡು (ಪ್ರಹಾರ ಸಂಘಟನೆ), ನರೇಂದ್ರ ಭೋಂಡೇಕರ್, , ರಾಜೇಂದ್ರ ಪಾಟೀಲ್ ಯಾದವ್ಕರ್ , ಚಂದ್ರಕಾಂತ ಪಾಟೀಲ್ , ಮಂಜುಳಾ ಗಾವಿತ್, ಆಶಿಶ್ ಜೈಸ್ವಾಲ್ ಸಹ ಹೋಟೆಲ್‌ನಲ್ಲಿದ್ದಾರೆ ಎಂದು ವರದಿ ತಿಳಿಸಿದೆ.
ಈ ಮಧ್ಯೆ ಗುವಾಹತಿಯಲ್ಲಿ ಸೇನಾ ಬಂಡಾಯ ಶಾಸಕ ಭರತ್ ಗೊಗವಾಲೆ ಇಂಡಿಯಾ ಟುಡೇ ಜೊತೆ ಮಾತನಾಡಿ, 41 ಶಾಸಕರು ಏಕನಾಥ್ ಶಿಂಧೆ ಅವರನ್ನು ಬೆಂಬಲಿಸುತ್ತಿದ್ದಾರೆ ಮತ್ತು ಅವರು ಶಾಸಕಾಂಗ ಪಕ್ಷದ ಮುಖ್ಯಸ್ಥರಾಗಿ ಶಿಂಧೆ ಅವರ ಸ್ಥಾನಮಾನವನ್ನು ಪ್ರತಿಪಾದಿಸಲು ರಾಜ್ಯಪಾಲರಿಗೆ ಪತ್ರ ಬರೆಯಲಿದ್ದಾರೆ ಎಂದು ಹೇಳಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement