ಈಗ ಸುಪ್ರೀಂಕೋರ್ಟ್‌ ಮುಂದೆ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಕದನ : ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಏಕನಾಥ್ ಶಿಂಧೆ ಬಣ

ಮುಂಬೈ: ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಶಿವಸೇನೆ ಬಂಡಾಯ ಶಾಸಕರು ಶನಿವಾರ ತಮ್ಮ ವಿರುದ್ಧ ಶಿವಸೇನೆ ತೆಗೆದುಕೊಂಡ ನಿರ್ಧಾರಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.
ಏಕನಾಥ್‌ ಶಿಂಧೆ ಬಣ ಸಲ್ಲಿಸಿರುವ ಎರಡು ಪ್ರತ್ಯೇಕ ಅರ್ಜಿಗಳಿಂದಾಗಿ ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಶಿವಸೇನಾ ಶಾಸಕಾಂಗ ಪಕ್ಷದ ನಾಯಕರಾಗಿ ಅಜಯ್ ಚೌಧರಿ ನೇಮಕವನ್ನು ಪ್ರಶ್ನಿಸಿ ಒಂದು ಅರ್ಜಿಯನ್ನು ಸಲ್ಲಿಸಲಾಗಿದ್ದರೆ ಮತ್ತೊಂದು ಅರ್ಜಿಯು 16 ಬಂಡಾಯ ಶಾಸಕರಿಗೆ ಮಹಾರಾಷ್ಟ್ರ ವಿಧಾನಸಭೆಯ ಉಪ ಸ್ಪೀಕರ್ ನೀಡಿದ ಅನರ್ಹತೆ ನೋಟಿಸನ್ನು ಪ್ರಶ್ನಿಸಿದೆ.
ಬಿಜೆಪಿ ಆಡಳಿತವಿರುವ ಅಸ್ಸಾಂನ ಗುವಾಹತಿ ಹೊಟೇಲ್‌ನಲ್ಲಿ ಬೀಡುಬಿಟ್ಟ ನಂತರ ಮಹಾರಾಷ್ಟ್ರ ರಾಜಕೀಯ ಗೊಂದಲದಲ್ಲಿ ಸಿಲುಕಿದೆ. ಕಾಂಗ್ರೆಸ್ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದೊಂದಿಗೆ ಶಿವಸೇನಾ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಶಿಂಧೆ ಬಣ ಅಸಮಾಧಾನ ವ್ಯಕ್ತಪಡಿಸಿದೆ. ಶಿವಸೇನಾ ಸಂಸ್ಥಾಪಕರಾದ ಬಾಳಾಸಾಹೇಬ್‌ ಠಾಕ್ರೆ ನಂಬಿದ್ದ ತತ್ವಗಳನ್ನು ತಾನು ಪ್ರತಿಪಾದಿಸುತ್ತಿರುವುದಾಗಿ ಹೇಳಿಕೊಂಡಿರುವ ಗುಂಪು ತನ್ನನ್ನು ತಾನು ಶಿವಸೇನಾ ಬಾಳಾಸಾಹೇಬ್‌ ಬಣ ಎಂದು ಕರೆದುಕೊಂಡಿದೆ. ಶಿಂಧೆ ಬದಲಿಗೆ ಅಜಯ್ ಚೌಧರಿ ಅವರನ್ನು ವಿಧಾನಸಭೆಯಲ್ಲಿ ಶಿವಸೇನೆಯ ನಾಯಕನನ್ನಾಗಿ ನೇಮಕ ಮಾಡುವುದನ್ನು ಬಂಡಾಯ ಶಾಸಕರು ವಿರೋಧಿಸುತ್ತಿದ್ದಾರೆ ಮತ್ತು ಉಪಸಭಾಪತಿ ನರಹರಿ ಜಿರ್ವಾಲ್‌ ಅವರು 16 ಬಂಡಾಯ ಶಾಸಕರಿಗೆ ಅನರ್ಹತೆ ನೋಟಿಸ್ ನೀಡಿದ್ದಾರೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪ್ರಸ್ತಾಪವನ್ನು ಜಿರ್ವಾಲ್ ಅನುಸರಿಸಿದ್ದಾರೆ ಎಂದು ಹೇಳಿದ್ದು, ಇದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಶಿಂಧೆ ಪಾಳಯವು ಹಂಗಾಮಿ ಸ್ಪೀಕರ್ ನೇಮಕ ಮಾಡುವಂತೆ ಅಥವಾ ರಾಜ್ಯಪಾಲರಿಗೆ ನಡೆಯುತ್ತಿರುವ ಪ್ರಕ್ರಿಯೆಯ ಸಂಪೂರ್ಣ ಉಸ್ತುವಾರಿಯನ್ನು ನೀಡುವಂತೆ ಕೇಳುವ ನಿರೀಕ್ಷೆಯಿದೆ. ಫೆಬ್ರವರಿ 2021 ರಿಂದ ಕಾಂಗ್ರೆಸ್‌ನ ನಾನಾ ಪಟೋಲೆ ಅವರು ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸ್ಪೀಕರ್ ಇಲ್ಲ.
“ಕಾನೂನು ಆಶ್ರಯವೊಂದೇ ಮುಂದಿನ ದಾರಿ” ಎಂದು ಶಿಂಧೆ ಶಿಬಿರದ ವಕ್ತಾರರು ಹೇಳಿದ್ದಾರೆ. “ಪಕ್ಷದ ಬಹುಪಾಲು ಶಾಸಕರು ಉದ್ಧವ್‌ ಠಾಕ್ರೆ ಅವರಿಂದ ದೂರವಾದರೂ ಶಿವಸೇನೆ ಅಡೆತಡೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಭಾನುವಾರ ಬಂಡಾಯ ಶಾಸಕರ ಗುಂಪನ್ನು ಸೇರಿಕೊಳ್ಳಲು ಗುವಾಹತಿಗೆ ಉದ್ಧವ್‌ ಠಾಕ್ರೆ ಸಂಪುಟದ ಮತ್ತೊಬ್ಬ ಸಚಿವರಾದ ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಉದಯ್ ಸಾಮಂತ್ ತೆರಳಿದ್ದಾರೆ. ಶಿವಸೇನೆಯ 55 ಶಾಸಕರಲ್ಲಿ 39 ಶಾಸಕರು ತಮ್ಮ ಬಳಿ ಇದ್ದಾರೆ ಎಂದು ಶಿಂಧೆ ಬಣ ಹೇಳಿಕೊಂಡಿದೆ. ಈ ಸಂಖ್ಯೆಯನ್ನು ಹೊಂದಿದ್ದರೆ, ಬಂಡುಕೋರರು ಪಕ್ಷಾಂತರ ವಿರೋಧಿ ಕಾನೂನಿನ ನಿಬಂಧನೆಗಳ ಅಡಿಯಲ್ಲಿ ಅನರ್ಹತೆಯಿಂದ ಅವರನ್ನು ರಕ್ಷಿಸುವ ಶಿವಸೇನಾ ಶಾಸಕಾಂಗ ಪಕ್ಷದಲ್ಲಿ ಮೂರನೇ ಎರಡರಷ್ಟು (37) ಮಾರ್ಕ್ ಅನ್ನು ದಾಟುತ್ತಿದ್ದಾರೆ.
ಹಲವಾರು ಸ್ವತಂತ್ರ ಶಾಸಕರು ಶಿಂಧೆಯವರೊಂದಿಗೆ ಇದ್ದಾರೆ, ಇದು ಬಂಡಾಯ ಗುಂಪಿನ ಸಂಖ್ಯೆಯನ್ನು 50 ಕ್ಕೆ ಕೊಂಡೊಯ್ಯುತ್ತದೆ, ಬಿಜೆಪಿಯೊಂದಿಗೆ ಸೇರಿದರೆ ಬಂಡಾಯ ಶಾಸಕರು ಮಹಾರಾಷ್ಟ್ರ ವಿಧಾನಸಭೆಯ ಅರ್ಧದಷ್ಟು ಬಲವನ್ನು ಹೊಂದಿದ್ದಾರೆ. “ಈಗ ನಾವು 50 ಪ್ಲಸ್ ಆಗಿದ್ದೇವೆ” ಎಂದು ಶಿಂಧೆ ಹೇಳಿದ್ದಾರೆ

ಪ್ರಮುಖ ಸುದ್ದಿ :-   ನಟಿ ಸಿದ್ಧಾರ್ಥ- ನಟಿ ಅದಿತಿ ರಾವ್ ಮದುವೆ ಆಗಿಲ್ಲ : ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ; ಸ್ಪಷ್ಟನೆ ನೀಡಿದ ಅದಿತಿ

ಈ ಮಧ್ಯೆ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಭಾನುವಾರ ಕರೆದಿದ್ದ ಮಹಾ ವಿಕಾಸ್ ಅಘಾಡಿಯ ಘಟಕಗಳ ಸಭೆಯಲ್ಲಿ, ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ನಾಯಕರು ತಮ್ಮ ಸಮ್ಮಿಶ್ರ ಸರ್ಕಾರವನ್ನು ಉಳಿಸಲು ಕಾನೂನು ಹೋರಾಟವನ್ನು ಜಂಟಿಯಾಗಿ ನಡೆಸಲು ನಿರ್ಧರಿಸಿದ್ದಾರೆ.
ಗುರುವಾರ, 12 ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಉಪ ಸ್ಪೀಕರ್ ನರಹರಿ ಜಿರ್ವಾಲ್ ಅವರಿಗೆ ಲಿಖಿತವಾಗಿ ಶಿವಸೇನೆ ಮನವಿ ಮಾಡಿತ್ತು. ಶುಕ್ರವಾರ ಇತರ ನಾಲ್ವರು ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿತ್ತು. ಶಿಂಧೆ ಬದಲಿಗೆ ಚೌಧರಿ ಅವರನ್ನು ಶಿವಸೇನಾ ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಿಸಲಾಗಿದೆ ಎಂದು ಅದು ಈ ಹಿಂದೆ ರಾಜ್ಯ ಶಾಸಕಾಂಗ ಕಾರ್ಯದರ್ಶಿಗೆ ತಿಳಿಸಿತ್ತು.
ಶಾಸಕಾಂಗ ಸಚಿವಾಲಯವು ರಾಜ್ಯದ ಅಡ್ವೊಕೇಟ್ ಜನರಲ್ ಅಶುತೋಷ್ ಕುಂಭಕೋಣಿ ಅವರೊಂದಿಗೆ ಸಮಾಲೋಚನೆ ನಡೆಸಿತು ಮತ್ತು ಶನಿವಾರದಂದು ಡೆಪ್ಯುಟಿ ಸ್ಪೀಕರ್ ಅವರು 16 ಶಾಸಕರಿಗೆ ಅನರ್ಹತೆ ನೋಟಿಸ್ ಜಾರಿಗೊಳಿಸಿ ಸೋಮವಾರದೊಳಗೆ ಪ್ರತಿಕ್ರಿಯೆ ಕೋರಿದ್ದಾರೆ.

ಬಂಡಾಯ ಶಾಸಕರಾಗಿರುವ ಒಬ್ಬರಾಗಿರುವ ಹಿರಿಯ ನಾಯಕ ದೀಪಕ್ ಕೇಸರ್ಕರ್, “ಇಂತಹ ನೋಟಿಸ್‌ಗಳಿಗೆ ಉತ್ತರಿಸಲು ಸದಸ್ಯರಿಗೆ ಕಡ್ಡಾಯವಾಗಿ ಏಳು ದಿನಗಳ ಕಾಲಾವಕಾಶ ನೀಡಬೇಕು. ಈ ಕುರಿತು ನ್ಯಾಯಾಲಯದಲ್ಲಿ ಹೋರಾಟ ನಡೆಸಲಿದ್ದೇವೆ’ ಎಂದರು.
ಉಪಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಬಾಕಿಯಿರುವುದರಿಂದ ಸದಸ್ಯರನ್ನು ಅನರ್ಹಗೊಳಿಸುವ ಅಧಿಕಾರ ಚಲಾಯಿಸುವಂತಿಲ್ಲ ಎಂದು ಶಿಂಧೆ ಪಾಳಯವೂ ವಾದಿಸುತ್ತಿದೆ. “ಇಂತಹ ಪರಿಸ್ಥಿತಿಯಲ್ಲಿ, ಸದನದ ಅಧಿವೇಶನವನ್ನು ಕರೆಯಬೇಕು ಮತ್ತು ಅವರು ಅವಿಶ್ವಾಸ ನಿರ್ಣಯವನ್ನು ಎದುರಿಸಬೇಕಾಗುತ್ತದೆ” ಎಂದು ಬಂಡಾಯ ನಾಯಕರೊಬ್ಬರು ಹೇಳಿದರು.
ಶಿವಸೇನೆಯೊಂದಿಗೆ ಕಣಕ್ಕಿಳಿದಿದ್ದ ಮೂವರು ಸ್ವತಂತ್ರರು – ಬಚ್ಚು ಕಾಡು, ರಾಜೇಂದ್ರ ಯಾದವ್ಕರ್ ಮತ್ತು ಶಂಕರರಾವ್ ಗಡಕ್ – ತಮ್ಮ ನಿಷ್ಠೆಯನ್ನು ಶಿಂಧೆಗೆ ಬಣಕ್ಕೆ ತಮ್ಮ ನಿಷ್ಠೆ ಬದಲಾಯಿಸಿದ್ದಾರೆ.
ಮಂತ್ರಿಗಳಲ್ಲಿ ಮುಖ್ಯಮಂತ್ರಿ ಠಾಕ್ರೆ ಅವರೊಂದಿಗೆ ಉಳಿದವರು ಅವರ ಪುತ್ರ ಆದಿತ್ಯ ಠಾಕ್ರೆ, ಸುಭಾಷ್ ದೇಸಾಯಿ ಮತ್ತು ಅನಿಲ್ ಪರಬ್ ಮಾತ್ರ.

ಪ್ರಮುಖ ಸುದ್ದಿ :-   ದೆಹಲಿ ಹೈಕೋರ್ಟ್ ಮರುಮೌಲ್ಯಮಾಪನದ ಅರ್ಜಿ ತಿರಸ್ಕರಿಸಿದ ನಂತರ ಕಾಂಗ್ರೆಸ್ಸಿಗೆ 1700 ಕೋಟಿ ತೆರಿಗೆ ನೋಟಿಸ್ ನೀಡಿದ ಐಟಿ : ಮೂಲಗಳು

ಅನರ್ಹತೆಯ ನಿಯಮಗಳು ಸದನದ ಹೊರಗೂ ಸದಸ್ಯರಿಗೆ ಅನ್ವಯಿಸುತ್ತವೆ ಎಂದು ಶಿವಸೇನೆಯ ವಕೀಲ ದೇವದತ್ ಕಾಮತ್ ಸುದ್ದಿಗಾರರಿಗೆ ತಿಳಿಸಿದರು. ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ರ್ಯಾಲಿಯಲ್ಲಿ ಭಾಗವಹಿಸಿದ್ದಕ್ಕಾಗಿ ಕ್ರಮಕ್ಕೆ ಆಹ್ವಾನಿಸಿದ ಜೆಡಿಯುನ ಶರದ್ ಯಾದವ್ ಅವರ ಪೂರ್ವನಿದರ್ಶನವನ್ನು ಅವರು ಉಲ್ಲೇಖಿಸಿದ್ದಾರೆ.
ಶಿವಸೇನೆಯು ವಿವಿಧ ಸ್ಥಳಗಳಲ್ಲಿ ಹಲವಾರು ಸಭೆಗಳನ್ನು ಕರೆದಿತ್ತು, ಬಂಡಾಯ ಶಾಸಕರು ಭಾಗವಹಿಸಲಿಲ್ಲ. ಅವರು ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಭೇಟಿ ನೀಡುತ್ತಿದ್ದಾರೆ ಮತ್ತು ಬಿಜೆಪಿ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಸರ್ಕಾರವನ್ನು ಉರುಳಿಸುವ ಪ್ರಯತ್ನವು ಬಂಡಅಯ ಶಾಸಕರಿಂದ (ಶಿಸ್ತಿನ) ಉಲ್ಲಂಘನೆಯ ಕ್ರಿಯೆಯಾಗಿದೆ ಎಂದು ಕಾಮತ್ ಹೇಳಿದರು.
ಪಕ್ಷಾಂತರ-ವಿರೋಧಿ ಕಾನೂನಿನ ಕುರಿತು“ಬಂಡಾಯ ಶಾಸಕರ ಗುಂಪು ಮತ್ತೊಂದು ಪಕ್ಷದೊಂದಿಗೆ ವಿಲೀನವಾದರೆ ಮಾತ್ರ ಮೂರನೇ ಎರಡರಷ್ಟು (ಶಿಕ್ಷೆಯಿಂದ ಪಾರಾಗಲು) ಪರಿಕಲ್ಪನೆಯು ಅನ್ವಯಿಸುತ್ತದೆ. ಯಾವುದೇ ವಿಲೀನವಿಲ್ಲದ ಕಾರಣ, ಇದು ಅವರು ಸ್ವಯಂಪ್ರೇರಣೆಯಿಂದ ತಮ್ಮ ಸದಸ್ಯತ್ವವನ್ನು (ಸದನದ) ಬಿಟ್ಟುಕೊಟ್ಟಿದ್ದಕ್ಕೆ ಸಮನಾಗಿರುತ್ತದೆ ಎಂದು ದೇವದತ್ತ ಕಾಮತ್‌ ಹೇಳಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement