ಹುಬ್ಬಳ್ಳಿ: ಆನ್ಲೈನ್ ಗೇಮ್ನಲ್ಲಿ ಹಣ ಗೆದ್ದಿದ್ದ ಹುಬ್ಬಳ್ಳಿಯ ಮಂಟೂರ ರಸ್ತೆಯ ನ್ಯಾಷನಲ್ ಟೌನ್ ನಿವಾಸಿ ಗರೀಬ್ ನವಾಜ್ ಮುಲ್ಲಾ ಅಪಹರಣ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಗರೀಬ್ ನವಾಜ್ ಮುಲ್ಲಾ ಅವರನ್ನು ಆಗಸ್ಟ್ 6 ರಂದು ಅಪಹರಿಸಿ ಒಂದು ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಏಳು ಆರೋಪಿಗಳನ್ನೂ ಹುಬ್ಬಳ್ಳಿ ಪೊಲೀಸರು ಬೆಳಗಾವಿಯ ಕಿತ್ತೂರು ಬಳಿ ಬಂಧಿಸಿದ್ದಾರೆ.
ನಗರದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಗರೀಬ್ ನವಾಜ್ ಹಾಗೂ ಆತನ ಸ್ನೇಹಿತ ದಿಲ್ವಾರ್, ಆನ್ಲೈನ್ ನಲ್ಲಿ ಕ್ಯಾಸಿನೋ ಗೇಮ್ ಆಡಿ, ಕೋಟ್ಯಾಂತರ ಹಣ ಸಂಪಾದಿಸಿದ್ದರು ಎಂದು ಹೇಳಲಾಗಿದೆ. ಅಲ್ಲದೆ, ಅಷ್ಟೊಂದು ಹಣ ತನ್ನಲ್ಲಿ ಇಟ್ಟುಕೊಳ್ಳಲು ಸಮಸ್ಯೆಯಾಗುತ್ತಿದೆ ಎಂದು ಗರೀಬ್ ನವಾಜ್ ಖಾತೆಗೆ ಆತನ ಸ್ನೇಹಿತ ಒಂದಷ್ಟು ಹಣ ವರ್ಗಾಯಿಸಿದ್ ಎಂದು ಹೇಳಲಾಗಿದೆ.
ಈ ವಿಷಯ ತಿಳಿದ ಆರೋಪಿತರು ಗರೀಬ್ ನವಾಜ್ ಸ್ನೇಹಿತ, ಮಹ್ಮದ್ ಆರೀಫ್ ಎಂಬುವವನ ಸಹಾಯ ಪಡೆದು, ಗರೀಬ್ ನವಾಜ್ ನನ್ನು ಗೋಕುಲ ರಸ್ತೆಯ ಡೆಕ್ಲಥಾನ್ ಬಳಿ ಅಪಹರಿಸಿದ್ದರು.
ಅಪಹರಣಕಾರರು ಗರೀಬ್ ನವಾಜ್ ತಂದೆಗೆ ಕರೆ ಮಾಡಿ ಒಂದು ಕೋಟಿ ಬೇಡಿಕೆ ಇಟ್ಟಿದ್ದರು. ಇದಕ್ಕೆ ಒಪ್ಪದಿದ್ದಾಗ 15 ಲಕ್ಷ ನೀಡಬೇಕು, ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಅವರು ಈ ಕುರಿತು ಗರೀಬ್ ನವಾಜ್ ಅಪಹರಣ ಆಗಿರುವ ಕುರಿತು ಆಗಸ್ಟ್ 6ರಂದು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಅವರ ತಂದೆ ದೂರು ದಾಖಲಿಸಿದ್ದರು.
ಕಮಿಷನರ್ ಲಾಭೂರಾಮ್ ನೇತೃತ್ವದಲ್ಲಿ ನಾಲ್ಕು ಪ್ರತ್ಯೇಕ ತನಿಖಾ ತಂಡಗಳನ್ನು ರಚಿಸಲಾಗಿತ್ತು. ಆರೋಪಿಗಳ ಮೊಬೈಲ್ ನೆಟ್ವರ್ಕ್ ಜಾಡು ಹಿಡಿದು ಅಪಹರಣಕಾರರನ್ನು ಬಂಧಿಸಲಾಗಿದೆ.
ನಗರದ ಮಹ್ಮದ್ ಆರಿಫ್, ಇಮ್ರಾನ್, ಅಬ್ದುಲ್ ಕರೀಮ್, ಹುಸೇನ್ ಸಾಬ್, ಇಮ್ರಾನ್ ಮದರಲಿ, ತೌಸಿಫ್ ಮತ್ತು ಮಹಮ್ಮದ್ ರಜಾಕ್ ಎಂಬುವವರು ಬಂಧಿತ ಆರೋಪಿಗಳಾಗಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ