ಶಿಮ್ಲಾ: ಹಿಮಾಚಲ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ನಾಳೆ ಬುಧವಾರ ( ಅಕ್ಟೋಬರ್ 5) ಭೇಟಿ ನೀಡುವ ಉದ್ದೇಶಿತ ವರದಿಗಾಗಿ ಪತ್ರಕರ್ತರಿಗೆ “ಕ್ಯಾರೆಕ್ಟರ್ ಸರ್ಟಿಫಿಕೇಟ್” ನೀಡುವಂತೆ ಬಿಲಾಸಪುರ ಪೊಲೀಸ್ ವರಿಷ್ಠಾಧಿಕಾರಿ ಹೊರಡಿಸಿದ್ದ ವಿವಾದಾತ್ಮಕ ಆದೇಶವನ್ನು ಹಿಮಾಚಲ ಪ್ರದೇಶ ಸರ್ಕಾರ ಮಂಗಳವಾರ ಹಿಂತೆಗೆದುಕೊಂಡಿದೆ.
ಬಿಲಾಸಪುರದಲ್ಲಿ ಏಮ್ಸ್ ಉದ್ಘಾಟಿಸಿದ ನಂತರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ ಮತ್ತು ರಾಜ್ಯಕ್ಕೆ ಭೇಟಿ ನೀಡಿದಾಗ ಪ್ರಸಿದ್ಧ ಕುಲು ದಸರಾ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ. 3,650 ಕೋಟಿಗೂ ಅಧಿಕ ಮೊತ್ತದ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಹಿಮಾಚಲ ಪ್ರದೇಶಕ್ಕೆ ಪ್ರಧಾನಿ ಮೋದಿ ಅವರ ದಿನದ ಭೇಟಿಗೆ ಮುಂಚಿತವಾಗಿ, ಬಿಲಾಸಪುರದ ಜಿಲ್ಲಾಡಳಿತವು ಎಲ್ಲಾ ಪತ್ರಕರ್ತರಿಗೆ ನೋಟಿಸ್ ನೀಡಿದೆ. ಪ್ರಧಾನಿ ಮೋದಿ ಅವರ ಭೇಟಿ ಮತ್ತು ರ್ಯಾಲಿಯನ್ನು ವರದಿ ಮಾಡಲು ಬಯಸುವ ಎಲ್ಲಾ ಪತ್ರಕರ್ತರು ಕ್ಯಾರೆಕ್ಟರ್ ಸರ್ಟಿಫಿಕೇಟ್ ಹಾಜರುಪಡಿಸಬೇಕು ಎಂದು ನೋಟಿಸ್ನಲ್ಲಿ ತಿಳಿಸಲಾಗಿತ್ತು.
ಖಾಸಗಿ ಒಡೆತನದ ಮುದ್ರಣ, ಡಿಜಿಟಲ್ ಮತ್ತು ದೂರದರ್ಶನದಿಂದ ಹಿಡಿದು ಆಲ್ ಇಂಡಿಯಾ ರೇಡಿಯೋ (AIR) ಮತ್ತು ದೂರದರ್ಶನ ಸೇರಿದಂತೆ ಸರ್ಕಾರಿ ಮಾಧ್ಯಮದ ಪ್ರತಿನಿಧಿಗಳವರೆಗೆ ಎಲ್ಲಾ ಪತ್ರಕರ್ತರು ಈ ಪ್ರಮಾಣಪತ್ರಗಳನ್ನು ತರಲು ಸೂಚನೆ ಹೇಳಿತ್ತು.
ಸೆಪ್ಟೆಂಬರ್ 29 ರಂದು ಪೊಲೀಸರು ಹೊರಡಿಸಿದ ನೋಟೀಸ್, ದೂರದರ್ಶನ ಮತ್ತು ಎಐಆರ್ನ ಎಲ್ಲಾ ಪತ್ರಿಕಾ ವರದಿಗಾರರು, ಛಾಯಾಗ್ರಾಹಕರು, ವಿಡಿಯೋಗ್ರಾಫರ್ಗಳು ಮತ್ತು ತಂಡಗಳ ಪಟ್ಟಿಯನ್ನು “ಕ್ಯಾರೆಕ್ಟರ್ ಸರ್ಟಿಫಿಕೇಟ್ ಒದಗಿಸುವಂತೆ ಜಿಲ್ಲಾ ಸಾರ್ವಜನಿಕ ಸಂಪರ್ಕ ಅಧಿಕಾರಿ (ಡಿಪಿಆರ್ಒ) ಅವರಿಗೆ ಸೂಚಿಸಿದೆ ಎಂದು ಅನೇಕ ಮಾಧ್ಯಮ ವರದಿಗಳು ಹೇಳಿವೆ.
“ಕ್ಯಾರೆಕ್ಟರ್ ಸರ್ಟಿಫಿಕೇಟ್ ಅಕ್ಟೋಬರ್ 1, 2022 ರೊಳಗೆ ಉಪ ಪೊಲೀಸ್ ವರಿಷ್ಠಾಧಿಕಾರಿ, ಸಿಐಡಿ, ಬಿಲಾಸ್ಪುರ ಕಚೇರಿಗೆ ಸರಬರಾಜು ಮಾಡಬಹುದು ಎಂದು ಹೇಳಲಾಗಿದೆ ಎಂದು ವರದಿಗಳು ತಿಳಿಸಿವೆ. ರ್ಯಾಲಿ ಅಥವಾ ಸಭೆಯೊಳಗೆ ಅವರ ಪ್ರವೇಶವನ್ನು ಈ ಕಚೇರಿ ನಿರ್ಧರಿಸುತ್ತದೆ” ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಈ ನೋಟೀಸ್ ರಾಜಕಾರಣಿಗಳು ಮತ್ತು ಪತ್ರಕರ್ತರ ನಡುವೆ ಚರ್ಚೆಗೆ ಕಾರಣವಾಯಿತು.ಹಿಮಾಚಲ ಕಾಂಗ್ರೆಸ್ ಸಮಿತಿಯ ಮುಖ್ಯ ವಕ್ತಾರ ನರೇಶ್ ಚೌಹಾಣ್ ಈ ಬೇಡಿಕೆಯನ್ನು ಖಂಡಿಸಿದ್ದು, ಈ ನಡೆ ಮಾಧ್ಯಮ ಸ್ವಾತಂತ್ರ್ಯದ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ಬಿಲಾಸ್ಪುರದ ಡಿಆರ್ಪಿಒ ಅವರು ಪತ್ರಕರ್ತರಿಗೆ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕಡ್ಡಾಯ ಎಂದು ಹೇಳಿದ್ದಾರೆ ಮತ್ತು ಪತ್ರಕರ್ತರ ಡಿಜಿಟಲ್ ಐಡಿ ಕಾರ್ಡ್ಗಳ ಮೇಲೆ ಅಧಿಕೃತ ಮುದ್ರೆ ಹಾಕುವಂತೆ ಒತ್ತಾಯಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಮಂಗಳವಾರ ಈ ಆದೇಶದ ಹಿಂಪಡೆಯಲಾಗಿದೆ. ಹಿಮಾಚಲ ಪ್ರದೇಶದ ಪೊಲೀಸ್ ಮಹಾನಿರ್ದೇಶಕ ಸಂಜಯ್ ಕುಂದು ಪ್ರಕಟಣೆ ನೀಡಿ, ಈ ವಿಷಯದ ಬಗ್ಗೆ ವಿಷಾದಿಸುತ್ತೇವೆ. ಅಕ್ಟೋಬರ್ 5ರಂದು ಹಿಮಾಚಲ ಪ್ರದೇಶಕ್ಕೆ ಪ್ರಧಾನ ಮಂತ್ರಿಯವರ ಭೇಟಿಯ ಸುದ್ದಿ ಪ್ರಸಾರಕ್ಕಾಗಿ ಪೋಲೀಸ್ ಇಲಾಖೆಯು ಎಲ್ಲ ಪತ್ರಕರ್ತರನ್ನು ಸ್ವಾಗತಿಸುತ್ತದೆ. ವರದಿ ಮಾಡಲು ಅನುಕೂಲವಾಗುವಂತೆ ನೋಡಿಕೊಳ್ಳುವುದಾಗಿ ಪೋಲೀಸ್ ಇಲಾಖೆಯು ಭರವಸೆ ನೀಡುತ್ತದೆ ಎಂದು ಹೇಳಿದ್ದಾರೆ,
ನಿಮ್ಮ ಕಾಮೆಂಟ್ ಬರೆಯಿರಿ