ಮೈನ್ಪುರಿ (ಯುಪಿ): ಕುಟುಂಬದ ಸದಸ್ಯರು ತಯಾರಿಸಿದ ವಿಷಪೂರಿತ ಚಹಾ ಕುಡಿದು ಇಬ್ಬರು ಮಕ್ಕಳು ಮತ್ತು ಅವರ ತಂದೆ ಸೇರಿದಂತೆ ಒಂದೇ ಕುಟುಂಬದ ಐವರು ಗುರುವಾರ ಇಲ್ಲಿನ ಗ್ರಾಮವೊಂದರಲ್ಲಿ ಮೃತಪಟ್ಟಿದ್ದಾರೆ.
ಮೃತರನ್ನು ಶಿವಾನಂದನ್ (35), ಅವರ ಮಕ್ಕಳಾದ ಶಿವಂಗ್ (6) ಮತ್ತು ದಿವ್ಯಾಂಶ್ (5), ಅವರ ಮಾವ ರವೀಂದ್ರ ಸಿಂಗ್ (55), ಮತ್ತು ನೆರೆಹೊರೆಯವರಾದ ಸೊಬ್ರಾನ್ (42) ಎಂದು ಗುರುತಿಸಲಾಗಿದೆ.
ನಾಗ್ಲಾ ಕನ್ಹೈ ಗ್ರಾಮದ ಶಿವಾನಂದನ್ ಅವರ ಮನೆಯಲ್ಲಿ ತಯಾರಿಸಿದ ಚಹಾ ಸೇವಿಸಿದ ನಂತರ ಐವರೂ ತೀವ್ರ ಅಸ್ವಸ್ಥರಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕಮಲೇಶ್ ದೀಕ್ಷಿತ್ ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಶಿವಾನಂದನ್ ಮಾವ ಬೆಳಿಗ್ಗೆ ಭೇಟಿ ಮಾಡಲು ಅವರ ಮನೆಗೆ ಬಂದಿದ್ದರು. ಅವರ ಪತ್ನಿ ರಾಮಮೂರ್ತಿ ಎಲ್ಲರಿಗೂ ಟೀ ರೆಡಿ ಮಾಡಿ ಅದೇ ಸಮಯಕ್ಕೆ ನೆರೆಮನೆಯ ಸೊಬ್ರಾನ್ ಕೂಡ ಬಂದರು. ಎಲ್ಲರಿಗೂ ಟೀ ನೀಡಲಾಯಿತು. ಕೆಲವು ನಿಮಿಷಗಳ ನಂತರ, ಐದು ಜನರು ಮೊದಲ ಸಿಪ್ ತೆಗೆದುಕೊಂಡಾಗ ಒಬ್ಬರ ನಂತರ ಒಬ್ಬರು ಪ್ರಜ್ಞೆ ಕಳೆದುಕೊಳ್ಳಲು ಪ್ರಾರಂಭಿಸಿದರು. ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದ್ದು, ವೈದ್ಯರು ರವೀಂದ್ರ, ಶಿವಾಂಗ್ ಮತ್ತು ದಿವ್ಯಾಂಶ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದರೆ, ಸೋಬ್ರಾನ್ ಮತ್ತು ಶಿವಾನಂದನ್ ಅವರನ್ನು ಗಂಭೀರ ಸ್ಥಿತಿಯಲ್ಲಿ ಸೈಫೈಗೆ ಕಳುಹಿಸಲಾಗಿದೆ ಎಂದು ಎಸ್ಪಿ ಹೇಳಿದರು. ನಂತರದ ದಿನದಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದರು.
ಶಿವಾನಂದನ್ ಪತ್ನಿಯನ್ನು ವಿಚಾರಣೆಗೆ ಒಳಪಡಿಸಿದಾಗ ಭತ್ತಕ್ಕೆ ಸಿಂಪಡಿಸಿದ ಔಷಧವನ್ನು ಚಹಾ ಎಲೆ ಎಂದು ತಪ್ಪಾಗಿ ಭಾವಿಸಿ ಟೀಗೆ ಹಾಕಿದ್ದು ಬೆಳಕಿಗೆ ಬಂದಿದೆ. ವಿವರವಾದ ತನಿಖೆ ನಡೆಯುತ್ತಿದೆ. ಈ ವಿಚಾರದಲ್ಲಿ ಯಾವುದೇ ಎಫ್ಐಆರ್ ದಾಖಲಾಗಿಲ್ಲ.
ನಿಮ್ಮ ಕಾಮೆಂಟ್ ಬರೆಯಿರಿ