೬೭ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ: ಕರ್ನಾಟಕ ರಾಜ್ಯದ ರಚನೆಯ ಶ್ರೀಕಾರ ಆಗಿದ್ದು ಉತ್ತರ ಕರ್ನಾಟಕದಲ್ಲಿ

ಕರ್ನಾಟಕ ಉದಯವಾಗಿ (ನವೆಂಬರ್ ೧) ೬೭ ವರ್ಷವಾಯಿತು. ಕನ್ನಡಿಗರ ಸ್ವಾಭಿಮನದ ಸಂಕೇತವಾದ ರಾಜ್ಯೋತ್ಸವ ಮತ್ತು ಕರುನಾಡಿನ ಏಕೀಕರಣದ ಕಥೆಯೇ ಭಾರೀ ರೋಚಕವಾಗಿದೆ. ಈಗ ಕರ್ನಟಕವೆಂದು ಕರೆಯಲ್ಪಡುವ ರಾಜ್ಯ ಸುಮಾರು ಆರು ದಶಕಗಳ ಹಿಂದೆ, ೨೦ ವಿವಿಧ ಪ್ರಾಂತ್ಯಗಳಾಗಿ ಹರಿದು ಹಂಚಿ ಹೋಗಿತ್ತು. ನಮ್ಮ ಅಸ್ತಿತ್ವ ಮತ್ತು ಸ್ವಂತಿಕೆ ಎನ್ನುವುದು ಕನಸಿನ ಮಾತಾಗಿತ್ತು. ವಿಜಯನಗರ ಕಾಲದವರೆಗೂ ದೊಡ್ಡ ಸಾಮ್ರಾಜ್ಯವಾಗಿದ್ದ ಈ ಕರುನಾಡು ನಂತರ ಬ್ರಿಟಿಷರ ಒಡೆದಾಳುವ ನೀತಿಯಿಂದ ಅನೇಕ ಪ್ರಾಂತ್ಯಗಳಲ್ಲಿ ಹರದು ಹಂಚಿಹೋಗಿತ್ತು.
ಕನ್ನಡ ಭಾಷಿಕರಿಗೆ ನಮ್ಮ ನೆಲ ಮತ್ತು ಪ್ರದೇಶ ಎಂದು ಹೇಳಿಕೊಳ್ಳಲು ಮೈಸೂರು ಸಂಸ್ಥಾನ ಹೊರತು ಪಡಿಸಿದರೆ ಯಾವುದೇ ನಿರ್ದಿಷ್ಟ ಪ್ರದೇಶ ಇರಲಿಲ್ಲ. ಮಿಕ್ಕ ಪ್ರಾಂತಗಳಲ್ಲಿ ಕನ್ನಡಿಗರಿಗೆ ಮತ್ತು ಅವರ ಭಾಷೆಗೆ ಪ್ರಾಧಾನ್ಯತೆ ಇರಲಿಲ್ಲ. ಜೊತೆಗೆ ಪ್ರಾದೇಶಿಕ ಪ್ರಗತಿಯಲ್ಲಿಯೂ ಸಮಾನತೆ ಇರಲಿಲ್ಲ. ಇದರಿಂದಾಗಿ ಕನ್ನಡ ನಾಡಿನಲ್ಲಿ ಕನ್ನಡಿಗರು ಪರಕೀಯರಂತೆ ಅಸಹನೀಯ ಬದುಕು ನಡೆಸುವ ಪರಿಸ್ಥಿತಿ ಇತ್ತು. ಇಂತಹ ಪರಿಸ್ಥಿತಿಯಲ್ಲಿ ಹರಿದು ಹೋದ ನಾಡನ್ನು ಒಂದು ಗೂಡಿಸಲು ಅಂದಿನ ನಾಯಕರು ಅಗ್ರಹಿಸಿ, ಆಂದೋಲನ ಆರಂಭಿಸಿದರು.
ಆಂದೋಲನದ ಶ್ರೀಕಾರ ಉತ್ತರ ಕರ್ನಾಟಕದಲ್ಲಿ ಆಯಿತು. ಆಲೂರು ವೆಂಕಟರಾಯರು, ಹುಯಿಲಗೋಳ ನಾರಾಯಣರಾಯರು, ಅಂದಾನಪ್ಪ ದೊಡ್ಡಮೇಟಿ, ಅದರಗುಂಚಿ ಶಂಕರಗೌಡ ಪಾಟೀಲರು, ರಂಜಾನಸಾಬ್ ಪಿಂಜಾರ, ಉತ್ತಂಗಿ ಚನ್ನಪ್ಪ, ಎಸ್. ಆರ್ . ಕಂಠಿ, ಗಳಗನಾಥ, ಡಿ.ಪಿ. ಕರ್ಮರಕರ್, ಗುದ್ಲೆಪ್ಪ ಹಳ್ಳಿಕೇರಿ, ಗದಿಗೆಯ್ಯ ಹೊನ್ನಾಪುರಮಠ, ಕೇರೂರ ವಾಸುದೇವಾಚಾರ್ಯ, ಬಿ.ಡಿ. ಜತ್ತಿ, ಜಯದೇವಿತಾಯಿ ಲಿಗಾಡೆ, ಎಸ್.ಸಿ. ನಂದಿಮಠ, ಡಾ. ಪಾಟೀಲ ಪುಟ್ಟಪ್ಪ, ಸಿ.ಸಿ. ಬಸವನಾಳ ಮುಂತಾದ ಮಹನೀಯರು ಹೋರಾಟದಲ್ಲಿ ಭಾಗವಹಿಸಿ, ಅನೇಕ ಕಷ್ಟಗಳನ್ನು ಅನುಭವಿಸಿ ಹೋರಾಟಕ್ಕೆ ಕೊಡುಗೆಗಳನ್ನು ನೀಡಿದ್ದು ಸ್ಮರಣೀಯ.

೧೯೪೭ರಲ್ಲಿ ಭಾರತ ಸ್ವಾತಂತ್ರ್ಯ ಪಡೆದ ನಂತರ ಮೈಸೂರು ಸಂಸ್ಥಾನದ ದೊರೆಗಳು ಭಾರತದ ಭಾಗವಾಗಿ ವಿಲೀನಿಕರಣದ ಒಪ್ಪಂದಕ್ಕೆ ಸಮ್ಮತಿಸಿದರು. ೧೯೫೦ರಲ್ಲಿ ಮೈಸೂರು ಸ್ವತಂತ್ರ ಭಾರತದ ರಾಜ್ಯವಾಗಿ ಉದಯಿಸಿತು. ಹಾಗೂ ಅಂದಿನ ಮೈಸೂರು ದೊರೆಗಳಾದ ಜಯಚಾಮರಾಜೇಂದ್ರ ಒಡೆಯರು ಮೈಸೂರು ರಾಜ್ಯದ ರಾಜ್ಯಪಾಲರಾದರು. ಆದಾಗ್ಯೂ ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ ಎಂದು ಹರಿದು ಹಂಚಿಹೋಗಿದ್ದ ಆ ಕಾಲಘಟ್ಟದಲ್ಲಿ ಉಲ್ಲೇಖಿತ ಮಹನೀಯರ ಸಾಂಗತ್ಯದಲ್ಲಿ ಕನ್ನಡ ನಾಡಿನ ಏಕೀಕರಣದ ಚಳುವಳಿ ೧೯ನೇ ಶತಮಾನದ ೨ನೇ ಭಾಗದಲ್ಲಿ ಪ್ರಾರಂಭಯಿತು. ೧೯೫೬ ರಾಜ್ಯ ಪುನರ್ ಸಂಘಟಿತ ಕಾಯಿದೆಯಿಂದ ಮೈಸೂರು ರಾಜ್ಯದಿಂದ ಹೊರಗೆ ಹಂಚಿಹೋಗಿದ್ದ ಪ್ರದೇಶಗಳನ್ನು ಮೈಸೂರು ರಾಜ್ಯಕ್ಕೆ ಸೇರ್ಪಡೆ ಮಾಡಿ ನವಂಬರ್ ೧, ೧೯೫೬ ರಂದು ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವೆಂದು ಪುನರ್ ನಾಮಕರಣ ಮಾಡಲಾಯಿತು. ಹೀಗೆ ಕರ್ನಾಟಕ ರಾಜ್ಯ ರೂಪುಗೊಂಡಾಗ ೧೯ ಜಿಲ್ಲೆಗಳನ್ನು ಹೊಂದಿತ್ತು. ಅಂದಿನಿಂದ ನವೆಂಬರ್ ೧ರಂದು ಕರ್ನಾಟಕ ರಾಜ್ಯೋತ್ಸವ ವೆಂದು ಆಚರಿಸಲಾಗುತ್ತಿದೆ. ಇಂದು ರಾಜ್ಯ ಜಿಲ್ಲೆಗಳನ್ನು ೩೧ ಜಿಲ್ಲೆಗಳನ್ನು ಹೊಂದಿದೆ.

ಪ್ರಮುಖ ಸುದ್ದಿ :-   ಶ್ರೀರಂಗಪಟ್ಟಣ: ಐಸ್‌ ಕ್ರೀಂ ತಿಂದ ಬಳಿಕ ಅವಳಿ ಮಕ್ಕಳ ಸಾವು

ಕರ್ನಾಟಕ ಹೆಸರು :
ಪ್ರಾಚೀನ ಕಾಲದ ಮಹಾಭಾರತ, ರಾಮಾಯಣ, ಮೃಚ್ಛಟಿಕಾ ಗ್ರಂಥಗಳಲ್ಲಿ ಕರ್ನಾಟಕ ಎಂಬ ಹೆಸರು ಉಲ್ಲೇಖಗೊಂಡಿದೆ. ಕರ್ನಾಟಕ ಎಂಬ ಪದದ ಮೂಲದ ಬಗ್ಗೆ ಅನೇಕ ಅಭಿಪ್ರಾಯಗಳಿದ್ದರೂ ಕೂಡ ಸಾಮಾನ್ಯವಾಗಿ “ಕರು ಮತ್ತು ನಾಡು” ಎಂಬ ಪದಗಳು ಸೇರಿ ಕರುನಾಡು ಎಂಬ ಪದವಾಗಿದೆ. ಕರುನಾಡು ಎಂದರೆ “ಎತ್ತಂದ ಭೂಮಿ” ಕಪ್ಪು ಮಣ್ಣಿನ ನಾಡು, ಎಂದೂ ಹೇಳಲಾಗುತ್ತದೆ. ನಮ್ಮ ರಾಜ್ಯದ ಬಾವುಟ ಹಳದಿ ಮತ್ತು ಕೆಂಪು ಬಣ್ಣದಿಂದ ಕೂಡಿದ್ದು, ಭುವನೇಶ್ವರಿ ದೇವಿಯು ನಮ್ಮ ನಾಡಿನ ಅಧಿದೇವತೆಯಾಗಿದ್ದಾಳೆ.

ಬಾವುಟದ ಇತಿಹಾಸ
ಕರ್ನಾಟಕ ರಾಜ್ಯಕ್ಕೆ ತನ್ನದೇ ಆದ ಪ್ರತ್ಯೇಕ ಬಾವುಟವಿದೆ. ಕನ್ನಡಕ್ಕೊಂದು ಪ್ರತ್ಯೇಕ ಬಾವುಟದ ಅವಶ್ಯಕತೆಯನ್ನು ಮನಗಂಡ ಕನ್ನಡ ನಾಡು-ನುಡಿಯ ಸುಪ್ರಸಿದ್ಧ ಹೋರಾಟಗಾರರಾದ ಎಂ. ರಾಮಮೂರ್ತಿ ಧ್ವಜ ಸೂಚಿಸಿದರು. ಮೂಲತಃ ಹಳದಿ ಬಣ್ಣ ಶಾಂತಿ ಸೌಹಾರ್ದತೆ ಸೂಚಿಸಿದರೆ, ಕೆಂಪು ಬಣ್ಣದ ಕ್ರಾಂತಿಯ ಸಂದೇಶ ನೀಡುತ್ತದೆ. ಕನ್ನಡಿಗರು ಶಾಂತಿಗೂ ಬದ್ಧ ಮತ್ತು ಸಮರಕ್ಕೂ ಸಿದ್ಧ ಎಂಬ ಸಂದೇಶ ನೀಡುತ್ತಿದೆ. ಜೊತೆಗೆ ಈವೆರಡು ಬಣ್ಣಗಳು ಅರಿಶಿಣ ಮತ್ತು ಕುಂಕಮವನ್ನು ಸೂಚಿಸುತ್ತದೆ. ಆರಂಭದಲ್ಲಿ ಈ ಬಾವುಟವನ್ನು ಕೂಡಿಸಿದಾಗ ಬಾವುಟದ ನಡುವೆ ಕರ್ನಾಟಕದ ಭೂಪಟ ಮತ್ತು ಅದರ ನಡುವಿನಲ್ಲಿ ಏಳು ಕವಲುಗಳುಳ್ಳ, ತೆನೆಯ ಚಿತ್ರವಿತ್ತು ಮುದ್ರಿಸಲು ಸ್ವಲ್ಪ ಕಷ್ಟವಾಗುತ್ತಿದ್ದರಿಂದ ಅದನ್ನು ತೆಗೆದು ಕೇವಲ ಕೆಂಪು ಮತ್ತು ಹಳದಿ ಬಣ್ಣವನ್ನು ಮಾತ್ರ ಉಳಿಸಿಕೊಳ್ಳಲಾಯಿತು.

ಆಚರಣೆಯ ಮಹತ್ವ :
ಕರ್ನಾಟಕದ ಜನನಕ್ಕೆ ಕಾರಣರಾದ ಕನ್ನಡ ಕುಲಪುರೋಹಿತ ಎಂದೇ ಹೆಸರಾದ ಆಲೂರು ವೆಂಟಕರಾವ್ ಅವರೂ ಭಾರತಕ್ಕೆ ಸ್ವಾತಂತ್ರ್ಯಕ್ಕೆ ಲಭಿಸುವ ಮುನ್ನವೇ ೧೯೦೫ ರಲ್ಲಿ ಕರ್ನಾಟಕ ಏಕೀಕರಣ ಚಳುವಳಿ ಪ್ರಾರಂಭಿಸಿದರು. ಭಾರತ ೧೯೪೭ ಆಗಸ್ಟ್‌ ೧೫ರಂದು ಸ್ವತಂತ್ರಗೊಂಡು, ೧೯೫೦ ರಲ್ಲಿ ಗಣರಾಜ್ಯವಾದ ನಂತರ ಭಾಷಾವಾರು ಪ್ರದೇಶಗಳು ವಿಂಗಡಣೆಯ ಸಮಿತಿಯ ಶಿಫಾರಿಸನ ಮೇರೆಗೆ ೧೯೫೬ ನವಂಬರ್ ೧ ರಂದು ಮೈಸೂರು ರಾಜ್ಯವಾಗಿ ಉದಯವಾಯಿತು. ೧೯೭೩ರಲ್ಲಿ ಜುಲೈನಲ್ಲಿ ಮತ್ತೊಮ್ಮೆ ಮೈಸೂರಿನ ಬದಲಾಗಿ ಕರ್ನಾಟಕವೆಂದು ನಾಮಕರಣದ ಮಾಡಬೇಕೆಂಬ ಹೋರಾಟ ತೀವ್ರಗೊಂಡು ಸಾಕಷ್ಟು ದೀರ್ಘಾವಧಿಯ ಚರ್ಚೆಗಳ ನಂತರ ರಾಜ್ಯ ವಿಧಾನಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಮಾಡಲಾಯಿತು.
ಅಂದಿನ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು ಅವರು ಕರ್ನಾಟಕವೆಂದು ಪುನರ್ ನಾಮಕರಣ ಮಾಡಿದರು. ಕನ್ನಡ ಇತಿಹಾಸ, ಮಹತ್ವ, ಹೋರಾಟಗಳ ಬಗ್ಗೆ ಇಂದಿನ ಪೀಳಿಗೆಗೆ ಅರಿವನ್ನುಂಟು ಮಾಡುವ ಉದ್ದೇಶದಿಂದ ಕನ್ನಡ ರಾಜ್ಯೋತ್ಸವ ಮಹತ್ವ ಪಡೆದಿದೆ. ಅಲ್ಲದೇ ನಾಡಿಗಾಗಿ ಕನ್ನಡಕ್ಕಾಗಿ ಸೇವೆ ಸಲ್ಲಿಸಿದ ಮಹನೀಯರಿಗೆ, ಗೌರವಿಸುವ ಮೂಲಕ ನಾಡಿನ ಸೇವೆಯನ್ನು ಮಾಡಲು ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ. ಈ ಮಹತ್ವವನ್ನು ಅರಿತಾಗ ಮಾತ್ರ ಕನ್ನಡ ರಾಜ್ಯೋತ್ಸವದ ಆಚರಣೆ ಸಾರ್ಥಕವಾಗುತ್ತದೆ. ದೇಶದ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಕೂಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಹಾಗೂ ನವೆಂಬರ್‌ ಮಾಸದಾದ್ಯಂತ ಕನ್ನಡ ಭಾಷೆ, ನಾಡು, ನುಡಿಯ ಕುರಿತಾದ ಕಾರ್ಯಕ್ರಮಗಳು ರಾಜ್ಯ ಸರ್ಕಾರ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ನಡೆಯುತ್ತಿವೆ. ಕನ್ನಡ ನಾಡು ನುಡಿಗೆ ಶ್ರಮಿಸಿದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು, ಸಂಘ ಸಂಸ್ಥೆಗಳನ್ನು ಗುರುತಿಸಿ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡುತ್ತಿದೆ.

ಪ್ರಮುಖ ಸುದ್ದಿ :-   ಏಪ್ರಿಲ್‌ 20ರಂದು ಕರ್ನಾಟಕಕ್ಕೆ ಪ್ರಧಾನಿ ಮೋದಿ, ಎರಡು ಚುನಾವಣಾ ಸಮಾವೇಶದಲ್ಲಿ ಭಾಗಿ

ಜ್ಞಾನಪೀಠ ಪುರಸ್ಕೃತರಾದ ಕುವೆಂಪು, ಡಾ. ದ.ರಾ. ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ, ಶಿವರಾಮ ಕಾರಂತ, ಡಾ. ವಿ. ಕೆ. ಗೋಕಾಕ, ಡಾ. ಯು. ಅರ್. ಅನಂತಮೂರ್ತಿ, ಗಿರೀಶ ಕಾರ್ನಾಡ, ಡಾ. ಚಂದ್ರಶೇಖರ ಕಂಬಾರ, ಸಾಹಿತಿಗಳು, ಕವಿಗಳು, ಲೇಖಕರು, ಪ್ರಕಾಶಕರು, ಕಲಾವಿದರು, ಚಲನಚಿತ್ರಗಳು, ಪತ್ರಿಕೆ ಮತ್ತು ನಿಯತಕಾಲಿಕೆಗಳು ಕನ್ನಡ ಸಾಹಿತ್ಯವನ್ನು ಇಂದು ಶ್ರೀಮಂತಗೊಳಿಸಿವೆ. ಮಾಹಿತಿ ತಂತ್ರಜ್ಞಾನದ ಪ್ರಭಾವದಿಂದಾಗಿ, ಸಾಮಾಜಿಕ ಜಾಲತಾಣಗಳಾದ ಯ್ಯೂ-ಟ್ಯೂಬ್, ವ್ಯಾಟ್‌ಸಪ್, ಫೇಸ್ ಬುಕ್, ಟ್ವೀಟ್ವರ, ವೆಬ್‌ಸೈಟ್‌ಗಳಲ್ಲಿ ಕನ್ನಡ ಬೆಳೆಯುತ್ತಿದೆ.
ಎರಡೂವರೆ ಸಾವಿರ ವರುಷಗಳ ಭವ್ಯ ಇತಿಹಾಸ ಹೊಂದಿರುವ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆಯಾಗಿದೆ. ಇದು ವಿಶ್ವದ ಪ್ರಾಚೀನ ಭಾಷೆಗಳಲ್ಲಿ ಒಂದು. ಇಂದಿನ ಪೋಷಕರು ಮತ್ತು ಮಕ್ಕಳು ನಾಡಿನ ಭಾಷೆ ಮತ್ತು ಸಂಸ್ಕೃತಿಯ ಬಗಗೆ ಕಾಳಜಿ ವಹಿಸಬೇಕು. ಭವಿಷ್ಯಕ್ಕಾಗಿ ಇಂಗ್ಲಿಷ್‌ ಸಂಪರ್ಕ ಭಾಷೆಯಾದರೂ ಕನ್ನಡವನ್ನು ಕಡೆಗಣಿಸುವುದು ಸಲ್ಲದು. ಮನೆಗಳಲ್ಲಿ ಮಕ್ಕಳಿಗೆ ಮಾತೃ ಭಾಷೆಯ ಅಧ್ಯಯನದ ಮಹತ್ವದ ಬಗ್ಗೆ ಹೇಳಬೇಕಿದೆ. ಕನ್ನಡ ಪರ ಸಂಘಟನೆಗಳು ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗದೇ ವರ್ಷದುದ್ದಕ್ಕೂ ಕನ್ನಡ ಅಭಿವೃದ್ಧಿ ಕುರಿತಾದ ಕಾರ್ಯಕ್ರಮಗಳನ್ನು ಆಯೋಜಿಸಿ, ಯುವ ಪೀಳಿಗೆಗೆ ಕನ್ನಡದ ಮಹತ್ವದ ಕುರಿತು ಅರಿವು ನೀಡಿದಲ್ಲಿ ಕನ್ನಡ ರಾಜ್ಯೋತ್ಸವ ಅರ್ಥ ಪೂರ್ಣವೆನಿಸುತ್ತದೆ.
-ಡಾ.ಬಿ. ಎಸ್. ಮಾಳವಾಡ, ನಿವೃತ್ತ ಗ್ರಂಥಪಾಲಕರು

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement