ನವದೆಹಲಿ: ಕಲ್ಲಿದ್ದಲು ಗಣಿಗಾರಿಕೆ, ಸರ್ಕಾರಿ ಗುತ್ತಿಗೆ ಹಾಗೂ ಕಬ್ಬಿಣ ಅದಿರು ವ್ಯಾಪಾರೋದ್ಯಮಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡವು ಜಾರ್ಖಂಡ್ನ ಇಬ್ಬರು ಕಾಂಗ್ರೆಸ್ ಶಾಸಕರು ಹಾಗೂ ಅವರ ಸಹವರ್ತಿಗಳ ನಿವಾಸ ಮತ್ತು ಉದ್ಯಮಗಳ ಮೇಲೆ ದಾಳಿ ನಡೆಸಿದ್ದು, 100 ಕೋಟಿ ರೂ. ಮೌಲ್ಯದ ಅಕ್ರಮ ಸಂಪತ್ತನ್ನು ಪತ್ತೆ ಹಚ್ಚಿರುವುದಾಗಿ ಹೇಳಿದೆ.
ಜಾರ್ಖಂಡ್ನ ರಾಂಚಿ, ಗೊಡ್ಡಾ, ಬೆರ್ಮೊ, ಧುಮ್ಕಾ, ಜೆಮ್ಶೆಡ್ಪುರ, ಬಿಹಾರದ ಪಟ್ನಾ, ಹರಿಯಾಣದ ಗುರುಗ್ರಾಮ, ಸೇರಿದಂತೆ ಒಟ್ಟು 50 ಕಡೆ ತೆರಿಗೆ ಇಲಾಖೆ ಅಧಿಕಾರಿಗಳ ತಂಡವು ನವೆಂಬರ್ 4 ರಂದು ಶೋಧ ನಡೆಸಿತ್ತು. ಮಂಗಳವಾರ ಶೋಧ ಮುಂದುವರಿಸಿತ್ತು.
ದಾಳಿ ವೇಳೆ ಬೆರ್ಮೊ ಕ್ಷೇತ್ರದ ಕುಮಾರ್ ಜಯಮಂಗಲಾ ಅನೂಪ್ ಸಿಂಗ್ ಮತ್ತು ಪೊರಿಯಾಹಾತ್ ಕ್ಷೇತ್ರದ ಪ್ರದೀಪ್ ಯಾದವ್ ಅವರ ನಿವಾಸದಲ್ಲಿ 100 ಕೋಟಿ ರೂ.ಗೂ ಅಧಿಕ ಮೊತ್ತದ ದಾಖಲೆಗಳಿಲ್ಲದ ವಹಿವಾಟು ಪತ್ತೆಯಾಗಿದ್ದು, ಅದರ ಮೂಲವನ್ನು ಜಾಲಾಡಲಾಗುತ್ತಿದೆ. ಇದುವರೆಗೂ 2 ಕೋಟಿ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಡಿಟಿ ಪ್ರಕಟಣೆ ತಿಳಿಸಿದೆ.
ಕೆಲ ದಿನಗಳ ಹಿಂದೆ ಶಾಸಕ ಅನೂಪ್ ಸಿಂಗ್ ಐಟಿ ತನ್ನನ್ನು ಮತ್ತು ತನ್ನ ಕುಟುಂಬವನ್ನು ಗೃಹ ಬಂಧನದಲ್ಲಿ ಇರಿಸಿದೆ ಎಂದು ಆರೋಪಿಸಿದ್ದರು. ಅವರನ್ನು ಹೊರಗೆ ಹೋಗಲು ಬಿಡಲಿಲ್ಲ. ದಾಳಿ ನಡೆಸಿದ ನಂತರ, ಅವರ ನಿವಾಸದಿಂದ ಯೌುದೂ ದೊಡ್ಡ ಮೊತ್ತ ವಶಪಡಿಸಿಕೊಳ್ಳಲಾಗಿಲ್ಲ ಹಾಗೂ ತಾನು ಎಲ್ಲಾ ವಹಿವಾಟುಗಳು ಮತ್ತು ಹೂಡಿಕೆಗಳನ್ನು ವಿವರಿಸಿರುವುದಾಗಿ ಹೇಳಿದ್ದರು.
ಅನೂಪ್ ಸಿಂಗ್ ಮತ್ತು ಪ್ರದೀಪ್ ಯಾದವ್ ಇಬ್ಬರೂ ಬಿಜೆಪಿಯ ಆದೇಶಗಳಿಗೆ ಮಣಿಯಲು ನಿರಾಕರಿಸಿದ್ದರಿಂದ ಕೇಂದ್ರ ಏಜೆನ್ಸಿಯ ದಾಳಿಗೆ ಕಾರಣವಾಯಿತು ಎಂದು ಆರೋಪಿಸಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ