ಅಹಮದಾಬಾದ್: ಏಳು ಬಂಡಾಯ ನಾಯಕರ ಮೇಲೆ ಚಾಟಿ ಬೀಸಿದ ಕೆಲವೇ ದಿನಗಳ ನಂತರ, ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಕ್ಕಾಗಿ ಬಿಜೆಪಿ ಮತ್ತೆ 12 ಮಂದಿಯನ್ನು ಅಮಾನತುಗೊಳಿಸಿದೆ.
ಎಲ್ಲ 12 ಬಂಡಾಯ ನಾಯಕರಿಗೆ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಲಾಗಿದೆ. ಡಿಸೆಂಬರ್ 5 ರಂದು ಎರಡನೇ ಹಂತದ ಮತದಾನ ನಡೆಯಲಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಅಧಿಕೃತ ಅಭ್ಯರ್ಥಿಗಳ ವಿರುದ್ಧ ನಾಮಪತ್ರ ಸಲ್ಲಿಸಿದ್ದಾರೆ.
ಶಿಸ್ತು ಕ್ರಮ ಕೈಗೊಂಡಿರುವ ಗುಜರಾತ್ ಬಿಜೆಪಿ ಅಧ್ಯಕ್ಷ ಸಿಆರ್ ಪಾಟೀಲ ಅವರು ಪತ್ರಿಕಾ ಟಿಪ್ಪಣಿಯಲ್ಲಿ 12 ಬಂಡಾಯ ನಾಯಕರನ್ನು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಕಾರಣಕ್ಕಾಗಿ ಆರು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಪಕ್ಷದಿಂದ ಶಿಕ್ಷೆಗೆ ಗುರಿಯಾದ 12 ಮಂದಿಯಲ್ಲಿ ಪಾದ್ರಾದ ಮಾಜಿ ಶಾಸಕ ದಿನು ಪಟೇಲ್ ಮತ್ತು ಬಯಾದ್ನ ಮಾಜಿ ಶಾಸಕ ಧವಲಸಿನ್ಹ ಝಾಲಾ ಕೂಡ ಸೇರಿದ್ದಾರೆ. ಅಲ್ಲದೆ, ಕುಲದೀಪಸಿನ್ಹ ರೌಲ್ (ಸಾವ್ಲಿ), ಖತುಭಾಯಿ ಪಾಗಿ (ಶೆಹ್ರಾ), ಎಸ್ಎಂ ಖಂತ್ (ಲುನವಾಡ), ಜೆಪಿ ಪಟೇಲ್ (ಲುನವಾಡ), ರಮೇಶ ಝಲಾ (ಉಮ್ರೆತ್), ಅಮರ್ಷಿ ಝಲಾ (ಖಂಭತ್), ರಾಮಸಿನ್ಹ್ ಠಾಕೋರ್ (ಖೇರಾಲು), ಮಾವ್ಜಿ ದೇಸಾಯಿ (ಧನೇರಾ) ಮತ್ತು ಲೆಬ್ಜಿ ಠಾಕೋರ್ (ದೀಸಾ ಕ್ಷೇತ್ರ).
ಗುಜರಾತ್ನ ಒಟ್ಟು 182 ವಿಧಾನಸಭಾ ಸ್ಥಾನಗಳ ಪೈಕಿ 89 ಸ್ಥಾನಗಳಿಗೆ ಡಿಸೆಂಬರ್ 1 ರಂದು ಮತ್ತು ಉಳಿದ 93 ಸ್ಥಾನಗಳಿಗೆ ಡಿಸೆಂಬರ್ 5 ರಂದು ಮತದಾನ ನಡೆಯಲಿದೆ. ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ