ಈರುಳ್ಳಿ ಮಾರಾಟಕ್ಕೆ ಬೆಂಗಳೂರಿಗೆ ಪ್ರಯಾಣಿಸಿದ ಗದಗ ರೈತ : 205 ಕೆಜಿ ಈರುಳ್ಳಿಗೆ ಕೈಗೆ ಸಿಕ್ಕಿದ್ದು ಮಾತ್ರ 8.36 ರೂ…!

ಗದಗ: ಕೃಷಿ ಬೆಳೆಗಳ ಬೆಲೆಯಲ್ಲಿ ವಿಪರೀತ ಏರಿಳಿತವಿದ್ದರೂ, ವರದಿಯಾದ ಈ ಘಟನೆ ಮಾತ್ರ ಸಾಕಷ್ಟು ಆಘಾತಕಾರಿಯಾಗಿದೆ. ಗದುಗಿನ ರೈತರೊಬ್ಬರು ಬೆಂಗಳೂರಿನ ಯಶವಂತಪುರ ಮಾರುಕಟ್ಟೆಯಲ್ಲಿ 205 ಕೆಜಿ ಈರುಳ್ಳಿ ಮಾರಾಟ ಮಾಡಿ 8.36 ರೂ. ಪಡೆದಿದ್ದಾರೆ ಎಂದು ವರದಿಯಾಗಿದೆ…! ಇದರಿಂದ ಕಂಗೆಟ್ಟ ರೈತ ತನ್ನ ಉತ್ಪನ್ನಗಳನ್ನು ಬೆಂಗಳೂರಿಗೆ ತರದಂತೆ ಇತರ ರೈತರಿಗೆ ಎಚ್ಚರಿಕೆ ನೀಡಲು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ಆ ರಸೀದಿ ಈಗ ವೈರಲ್ ಆಗಿದೆ.
ರೈತನಿಗೆ ಬಿಲ್ ನೀಡಿರುವ ಸಗಟು ವ್ಯಾಪಾರಿ, ಈರುಳ್ಳಿ ಕ್ವಿಂಟಲ್ ಗೆ 200 ರೂ. ವಿಧಿಸಿದ್ದಾನೆ. ಆದರೆ ಹಮಾಲಿ ಶುಲ್ಕವಾಗಿ 24 ರೂ., ಸರಕು ಸಾಗಣೆಗೆ 377.64 ರೂ.ಗಳನ್ನು ಕಡಿತಗೊಳಿಸಿ ತಿಮ್ಮಾಪುರ ಗ್ರಾಮದ ರೈತ ಪವಾಡೆಪ್ಪ ಹಳ್ಳಿಕೇರಿ ಎಂಬುವರಿಗೆ ಕೇವಲ 8.36 ರೂ.ಪಾವತಿಸಿದ್ದಾನೆ ಎಂಬುದು ವೈರಲ್‌ ಆದ ಬಿಲ್‌ನಲ್ಲಿ ಕಂಡುಬರುತ್ತದೆ.
ಬೆಂಗಳೂರಿನ ಯಶವಂತಪುರ ಮಾರುಕಟ್ಟೆಗೆ ಹೋಗಲೆಂದು 415 ಕಿ.ಮೀ.ಗೂ ಹೆಚ್ಚು ದೂರ ಈರುಳ್ಳಿ ಸಾಗಾಟ ಮಾಡಿ ಮಾರಾಟ ಮಾಡಲು ತೆರಳಿದ್ದ ಗದಗದ ಸುಮಾರು 50 ರೈತರು ಕೆಲ ದಿನಗಳ ಹಿಂದೆ ಕ್ವಿಂಟಾಲ್‌ಗೆ 200 ರೂ.ಗಳನ್ನು ಪಡೆದಿದ್ದಾರೆ ಎಂದು ಹೇಳಲಾಗಿದೆ. ಕೆಲ ದಿನಗಳ ಹಿಂದೆ ಈರುಳ್ಳಿ ದರ ಕ್ವಿಂಟಲ್‌ಗೆ 500 ರೂ.ಗಳಿದ್ದವು.

ಪ್ರಮುಖ ಸುದ್ದಿ :-   ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ

ಈ ಹಾಸ್ಯಾಸ್ಪದ ಬೆಲೆಯಿಂದ ಸಿಟ್ಟಿಗೆದ್ದ ರೈತರು ಇದೀಗ ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆ ಬಗ್ಗೆ ಯೋಜಿಸುತ್ತಿದ್ದಾರೆ. ಗದಗದ ರೈತರು ಈ ವರ್ಷ ನಿರಂತರ ಮಳೆಯಿಂದ ಹಾನಿಗೊಳಗಾಗಿದ್ದೇವೆ ಮತ್ತು ನಾವು ಬೆಳೆದ ಈರುಳ್ಳಿ ಗಾತ್ರದಲ್ಲಿ ಚಿಕ್ಕದಾಗಿದೆ ಎಂದು ಪವಾಡೆಪ್ಪ ಹೇಳಿದ್ದಾರೆ ಎಂದು ಅವರನ್ನು ಉಲ್ಲೇಖಿಸಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.
ವರದಿ ಪ್ರಕಾರ, ಈರುಳ್ಳಿಗೆ ಶೀಘ್ರವೇ ಕನಿಷ್ಠ ಬೆಂಬಲ (ಎಂಎಸ್‌ಪಿ) ಬೆಲೆ ಘೋಷಣೆ ಮಾಡಬೇಕೆಂದು ರೈತರು ಆಗ್ರಹಿಸಿದ್ದಾರೆ. ಪುಣೆ ಮತ್ತು ತಮಿಳುನಾಡಿನ ರೈತರು ತಮ್ಮ ಉತ್ಪನ್ನಗಳನ್ನು ಯಶವಂತಪುರಕ್ಕೆ ತರುತ್ತಾರೆ, ಅವರ ಬೆಳೆ ಉತ್ತಮವಾಗಿರುವುದರಿಂದ ಉತ್ತಮ ಬೆಲೆ ಸಿಗುತ್ತಿದೆ. ಆದರೆ, ಇಷ್ಟು ಕಡಿಮೆ ಬೆಲೆ ಬರುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ’ ಎಂದು ಪವಾಡೆಪ್ಪ ಹೇಳಿದ್ದಾರೆ.

ಗದಗ ಮತ್ತು ಉತ್ತರ ಕರ್ನಾಟಕದ ಈರುಳ್ಳಿ ಬೆಳೆಗೆ ಉತ್ತಮ ಬೆಲೆ ಸಿಗದ ಹಿನ್ನೆಲೆಯಲ್ಲಿ ಯಶವಂತಪುರ ಮಾರುಕಟ್ಟೆಗೆ ಬರುವುದನ್ನು ತಪ್ಪಿಸಲು ಇತರ ರೈತರನ್ನು ಎಚ್ಚರಿಸಲು ರಸೀದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದೇನೆ. ಬೆಳೆ ಬೆಳೆದು ಮಾರುಕಟ್ಟೆಗೆ ಸಾಗಿಸಲು 25 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿದ್ದೇನೆ ಎಂದು ಹೇಳಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಬಾಬರಿ ಅವರು, ಸತತ ಮಳೆಯಿಂದ ಇಡೀ ವರ್ಷ ರೈತರು ನಷ್ಟ ಅನುಭವಿಸಿದ್ದು, ಆದಷ್ಟು ಬೇಗ ಕನಿಷ್ಠ ಬೆಂಬಲ ಬೆಲೆ ಘೋಷಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಯಾವುದೇ ನಿರ್ಧಾರ ತೆಗೆದುಕೊಳ್ಳದಿದ್ದರೆ ಡಿಸೆಂಬರ್ ಮೊದಲ ವಾರದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement