ಮಹಾರಾಷ್ಟ್ರದ ಇಬ್ಬರು ಸಚಿವರು ಡಿಸೆಂಬರ್ 3ರಂದು ಬೆಳಗಾವಿಗೆ ಭೇಟಿ : ಸಿಎಂ ಬೊಮ್ಮಾಯಿಗೆ ಬೆಳಗಾವಿಯ ಕನ್ನಡಪರ ಹೋರಾಟಗಾರ ಬರೆದ ಪತ್ರದಲ್ಲಿ ಏನಿದೆ ?

ಬೆಳಗಾವಿ : ಮಹಾರಾಷ್ಟ್ರದ ಇಬ್ಬರು ಗಡಿ ಉಸ್ತುವಾರಿ ಸಚಿವರು ಡಿಸೆಂಬರ್ 3ರಂದು ಬೆಳಗಾವಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ
ಇಬ್ಬರು ಹಿರಿಯ ಸಚಿವರನ್ನು ಮಹಾರಾಷ್ಟ್ರದ ಜತ್ತ, ಅಕ್ಕಲಕೋಟ ಹಾಗೂ ದಕ್ಷಿಣ ಸೋಲ್ಲಾಪುರ ಪ್ರದೇಶಗಳಿಗೆ ಕಳುಹಿಸಬೇಕು ಎಂದು ಬೆಳಗಾವಿಯ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಪ್ರಕರಣವು ಸುಪ್ರೀಂಕೋರ್ಟ್‌ನಲ್ಲಿ ಅಂತಿಮ ವಿಚಾರಣೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಗಡಿ ಭಾಗದಲ್ಲಿ ಸೌಹಾರ್ದ ವಾತಾವರಣವನ್ನು ಹದಗೆಡಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಹಾರಾಷ್ಟ್ರ ಬೆಂಬಲಿತ ಶಕ್ತಿಗಳು ನಡೆಸುತ್ತಿವೆ. ಇದರ ಭಾಗವಾಗಿ ಮಹಾರಾಷ್ಟ್ರದ ಇಬ್ಬರು ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ ಪಾಟೀಲ ಹಾಗೂ ಶಂಭುರಾಜೆ ದೇಸಾಯಿ ಅವರು ಇದೇ ಶನಿವಾರ ಡಿಸೆಂಬರ್ 3 ರಂದು ಬೆಳಗಾವಿಗೆ ಬರಲಿದ್ದು ಇಲ್ಲಿಯ ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಶಿವಸೇನೆಯ ಪ್ರಮುಖರು ಮತ್ತು ಕಾರ್ಯಕರ್ತರೊಂದಿಗೆ ಚರ್ಚಿಸಲಿದ್ದಾರೆ. ಇಂತಹ ವಾತಾವರಣದಲ್ಲಿ ಸಚಿವದ್ವಯರು ಬೆಳಗಾವಿಗೆ ಆಗಮಿಸುತ್ತಿರುವುದು ಅತ್ಯಂತ ಗಂಭೀರ ವಿಷಯವಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಏಪ್ರಿಲ್‌ 18, 19ರಂದು ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

ಮಹಾರಾಷ್ಟ್ರದ ಅಚ್ಚ ಕನ್ನಡ ಪ್ರದೇಶಗಳಾದ ಜತ್ತ, ಅಕ್ಕಲಕೋಟ, ದಕ್ಷಿಣ ಸೊಲ್ಲಾಪುರ ಮತ್ತು ಪಂಢರಪುರ ಕನ್ನಡಿಗರು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕಹಳೆ ಊದಿದ್ದು ಕರ್ನಾಟಕಕ್ಕೆ ಸೇರುವ ತಮ್ಮ ಪ್ರಬಲವಾದ ಇಚ್ಛೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅವರಿಗೆ ಕರ್ನಾಟಕ ಸರ್ಕಾರ ಎಲ್ಲ ರೀತಿಯ ಬೆಂಬಲ ನೀಡಬೇಕು. ನೈತಿಕ ಸ್ಥೈರ್ಯ ತುಂಬಬೇಕು. ಈ ದಿಸೆಯತ್ತ ತಾವು ಈ ಕೂಡಲೇ ಇಬ್ಬರು ಹಿರಿಯ ಸಚಿವರನ್ನು ಆ ಪ್ರದೇಶಗಳ ಕನ್ನಡಿಗರ ಭೇಟಿಗೆ ಹಾಗೂ ಚರ್ಚೆಗಾಗಿ ಕಳುಹಿಸಬೇಕು. ಇಂತಹ ಕ್ರಮವು ಮಾತ್ರ ಮಹಾರಾಷ್ಟ್ರಕ್ಕೆ ತಕ್ಕ ಉತ್ತರವಾದೀತು ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನದ ವೇಳೆ ಭಾಷಾ ಸೌಹಾರ್ದವನ್ನು ಹದಗೆಡಿಸುವ ಪ್ರಯತ್ನಗಳು ನಡೆಯುತ್ತಲಿವೆ. ಆದ್ದರಿಂದ ತಾವು ಸಾಧ್ಯವಿರುವ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಕೊಳ್ಳಬೇಕೆಂದು ಎಂದು ಅಶೋಕ ಚಂದರಗಿ ಅವರು ಮನವಿ ಮಾಡಿದ್ದಾರೆ.

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement