ಇಸ್ರೋ ಬೇಹುಗಾರಿಕೆ ಪ್ರಕರಣ: ಆರೋಪಿಗಳಿಗೆ ಕೇರಳ ಹೈಕೋರ್ಟ್‌ ಮಂಜೂರು ಮಾಡಿದ್ದ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ; ಬೇಹುಗಾರಿಕೆ ಪ್ರಕರಣದಲ್ಲಿ ಇಸ್ರೊ ವಿಜ್ಞಾನಿ ನಂಬಿ ನಾರಾಯಣನ್‌ ಅವರನ್ನು ಸಿಲುಕಿಸುವ ಪಿತೂರಿ ಪ್ರಕರಣದಲ್ಲಿ ಗುಪ್ತಚರ ಇಲಾಖೆಯ ಪೊಲೀಸ್‌ ಅಧಿಕಾರಿಗಳಾದ ಆರ್‌. ಬಿ. ಶ್ರೀಕುಮಾರ, ಪಿ.ಎಸ್‌. ಜಯಪ್ರಕಾಶ, ಥಂಪಿ ಎಸ್‌ ದುರ್ಗಾದತ್‌ ಮತ್ತು ವಿಜಯನ್‌ ಅವರಿಗೆ ಕೇರಳ ಹೈಕೋರ್ಟ್‌ ಮಂಜೂರು ಮಾಡಿದ್ದ ನಿರೀಕ್ಷಣಾ ಜಾಮೀನು ಆದೇಶವನ್ನು ಶುಕ್ರವಾರ ಸುಪ್ರೀಂ ಕೋರ್ಟ್‌ ಬದಿಗೆ ಸರಿಸಿದೆ.
ಕೇರಳ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಕೇಂದ್ರಿಯ ತನಿಖಾ ದಳ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಂ ಆರ್‌ ಶಾ ಮತ್ತು ಸಿ ಟಿ ರವಿಕುಮಾರ್‌ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.
ನಿರೀಕ್ಷಣಾ ಜಾಮೀನು ಕೋರಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್‌ ಆದೇಶವನ್ನು ವಜಾ ಮಾಡಿ, ಬದಿಗೆ ಸರಿಸಲಾಗಿದೆ. ನಾವು ವ್ಯಕ್ತಪಡಿಸಿರುವ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಹೊಸದಾಗಿ ಪ್ರಕರಣವನ್ನು ನಿರ್ಧರಿಸಲು ಅದನ್ನು ಕೇರಳ ಹೈಕೋರ್ಟ್‌ಗೆ ಹಿಂತಿರುಗಿಸುತ್ತಿದ್ದೇವೆ. ಎರಡೂ ಪಕ್ಷಗಳ ಅರ್ಹತೆಯ ಮೇಲೆ ಏನನ್ನೂ ಗಮನಿಸಿಲ್ಲ. ನಾಲ್ಕು ವಾರಗಳಲ್ಲಿ ಪ್ರಕರಣವನ್ನು ಇತ್ಯರ್ಥಪಡಿಸಬೇಕು ಎಂದು ಪೀಠವು ತನ್ನ ಆದೇಶದಲ್ಲಿ ಹೇಳಿದೆ.

ಆರೋಪಿಗಳು ತನಿಖೆಗೆ ಸಹರಿಸುವುದರ ಷರತ್ತಿಗೆ ಒಳಪಟ್ಟು ಮುಂದಿನ ಐದು ವಾರಗಳವರೆಗೆ ಅವರನ್ನು ಬಂಧಿಸುವಂತಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ. ಮಧ್ಯಂತರ ರಕ್ಷಣೆ ಒದಗಿಸಿರುವ ವಿಚಾರವು ನಿರೀಕ್ಷಣಾ ಜಾಮೀನು ಅರ್ಜಿಯನ್ನು ನಿರ್ಧರಿಸುವುದರ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.
ಕೇರಳ ಹೈಕೋರ್ಟ್‌ ನಾಲ್ವರು ಆರೋಪಿಗಳಿಗೆ ಕಳೆದ ವರ್ಷದ ಆಗಸ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. 1990ರ ದಶಕದಲ್ಲಿ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್‌ ಅವರ ವಿರುದ್ಧ ಕೇರಳ ಪೊಲೀಸರು ಬೇಹುಗಾರಿಕಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭಿಸಿದ್ದ ಕಾನೂನು ಪ್ರಕ್ರಿಯೆಯು ದುರುದ್ದೇಶಪೂರಿತವಾಗಿದ್ದು, ಅದಕ್ಕಾಗಿ 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ 2018ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆಗೆ ಗುಲಾಂ ನಬಿ ಆಜಾದ್ ಸ್ಪರ್ಧಿಸಲ್ಲ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement