ಸರ್ಕಾರದ ವಿರುದ್ಧ 10,000 ಕೋಟಿ ರೂ. ನಷ್ಟ ಪರಿಹಾರದ ದಾವೆ ಹೂಡಿದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಖುಲಾಸೆಗೊಂಡ ವ್ಯಕ್ತಿ

ಇಂದೋರ್‌: ಗ್ಯಾಂಗ್ ರೇಪ್ ಪ್ರಕರಣದಲ್ಲಿ 2022ರ ಅಕ್ಟೋಬರ್‌ನಲ್ಲಿ ಖುಲಾಸೆಗೊಂಡಿದ್ದ ಮಧ್ಯಪ್ರದೇಶದ ರಾಟ್ಲಂನ ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬ, ಮಧ್ಯಪ್ರದೇಶ ಸರ್ಕಾರದ ವಿರುದ್ಧ ದಾವೆ ಹೂಡಿದ್ದಾನೆ.
‘ಸುಳ್ಳು ಆರೋಪ’ಗಳನ್ನು ಹೊರಿಸಿ 666 ದಿನಗಳ ಕಾಲ ಕಂಬಿ ಹಿಂದೆ ಕೂರುವಂತೆ ಮಾಡಿದ್ದಕ್ಕಾಗಿ ಸರ್ಕಾರ ತನಗೆ 10,006 ಕೋಟಿ ರೂ ಪರಿಹಾರ ನೀಡಬೇಕು ಎಂದು ಆತ ಒತ್ತಾಯಿಸಿದ್ದಾನೆ. ತನ್ನ ಸೆರೆವಾಸವು ತನ್ನ ಕುಟುಂಬವನ್ನು ಹಸಿವಿನ ದವಡೆಗೆ ಸಿಲುಕುವಂತೆ ಮಾಡಿದ್ದರಿಂದ ತನಗೆ ಉಂಟಾದ ಮಾನಸಿಕ ಸಂಕಟ”ವನ್ನು ಉಲ್ಲೇಖಿಸಿದ್ದಾನೆ.
ಅಕ್ಟೋಬರ್ 20, 2022 ರಂದು ಸ್ಥಳೀಯ ನ್ಯಾಯಾಲಯವು ಸಾಮೂಹಿಕ ಅತ್ಯಾಚಾರದ ಆರೋಪವನ್ನು ಕೈಬಿಟ್ಟ ನಂತರ ಕಾಂತು, ಅಲಿಯಾಸ್ ಕಾಂತಿಲಾಲ್ ಭೀಲ್ (35) ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಸರ್ಕಾರದ ವಿರುದ್ಧ ದಾವೆ ಹೂಡಿದ್ದಾನೆ ಎಂದು ವಕೀಲ ವಿಜಯ್ ಸಿಂಗ್ ಯಾದವ್ ಹೇಳಿದ್ದಾರೆ. ಮಧ್ಯಪ್ರದೇಶ ಸರ್ಕಾರ ಮತ್ತು ತನಿಖಾಧಿಕಾರಿಗಳ ವಿರುದ್ಧದ ಈ ಪ್ರಕರಣವು ಜನವರಿ 10 ರಂದು ವಿಚಾರಣೆಗೆ ಬರಲಿದೆ.
ಭಾರಿ ಪರಿಹಾರದ ಬಗ್ಗೆ ಕೇಳಲಾದ ಪ್ರಶ್ನೆಗೆ, ವಕೀಲ ಯಾದವ್ ಅವರು, “ಮಾನವ ಜೀವ ಅಮೂಲ್ಯ” ಎಂಬ ಆಧಾರದ ಮೇಲೆ 10,000 ಕೋಟಿ ರೂ. ಕೇಳಲಾಗಿದೆ, ಉಳಿದ 6.02 ಕೋಟಿ ರೂ. ಕಾನೂನು ವೆಚ್ಚಗಳು, ಮಾನಸಿಕ ಸಂಕಟ ಮತ್ತು ಆತನಿಗಾದ ನೋವು ಸೇರಿದಂತೆ ವಿವಿಧ ಕಾರಣಗಳಿಗಾಗಿ ಕೇಳಿದ್ದಾನೆ ಎಂದು ಹೇಳಿದ್ದಾರೆ.

2020ರ ಡಿಸೆಂಬರ್ 23 ರಂದು ಗ್ಯಾಂಗ್ ರೇಪ್ ಪ್ರಕರಣದಲ್ಲಿ ಪೊಲೀಸರು ತನ್ನನ್ನು ಬಂಧಿಸಿದಾಗ ತಾನು ಕುಟುಂಬಕ್ಕೆ ಏಕೈಕ ಆಧಾರವಾಗಿದ್ದೆ ಎಂದು ಭೀಲ್ ತಮ್ಮ ಅರ್ಜಿಯಲ್ಲಿ ಹೇಳಿದ್ದಾನೆ. ತನ್ನ ವಯಸ್ಸಾದ ತಾಯಿ, ಹೆಂಡತಿ ಮತ್ತು ಮೂವರು ಮಕ್ಕಳು ಹಸಿವಿನಿಂದ ನರಳುವಂತಾಯಿತು ಎಂದು ಕಾಂತಿಲಾಲ್‌ ಭೀಲ್‌ ಹೇಳಿದ್ದಾನೆ.
ಎರಡು ವರ್ಷಗಳ ಸೆರೆವಾಸದಲ್ಲಿ ನಾನು ಅನುಭವಿಸಿದ ಕಷ್ಟಗಳನ್ನು ಹೇಳುವುದು ಸಾಧ್ಯವಿಲ್ಲ. ಜೈಲು ವಾಸದಿಂದ ನನಗೆ ಚರ್ಮದ ಕಾಯಿಲೆ ಉಂಟಾಗಿದೆ. ಅಲ್ಲದೆ, ಇನ್ನೂ ಅನೇಕ ಕಾಯಿಲೆಗಳು ಶುರುವಾಗಿವೆ. ಶಾಶ್ವತವಾಗಿ ಅಂಟಿಕೊಂಡಿರುವ ತಲೆನೋವು, ನಾನು ಬಿಡುಗಡೆಯಾದ ಬಳಿಕವೂ ಕಾಡುತ್ತಿದೆ” ಎಂದಿರುವ ಆತ ಆರು ಜನರ ಕುಟುಂಬಕ್ಕೆ ತಾನೊಬ್ಬನೇ ಸಂಪಾದನೆಯ ಆಧಾರ ಎಂದು ಹೇಳಿದ್ದಾನೆ. ನಾನಿಲ್ಲದೆ ಎರಡು ವರ್ಷ ನನ್ನ ಕುಟುಂಬದವರು ಹೇಗೆ ಕಳೆದಿರಬಹುದು ಎಂಬುದನ್ನು ಊಹಿಸಿ” ಎಂದು ತಾನು ಅನುಭವಿಸಿದ ವೇದನೆಯನ್ನು ಹಂಚಿಕೊಂಡಿದ್ದಾನೆ.

ಪ್ರಮುಖ ಸುದ್ದಿ :-   "ನನ್ನ 90 ಸೆಕೆಂಡುಗಳ ಭಾಷಣವು ಕಾಂಗ್ರೆಸ್, ಇಂಡಿಯಾ ಮೈತ್ರಿಕೂಟದಲ್ಲಿ ತಲ್ಲಣ ಮೂಡಿಸಿದೆ" : ಪ್ರಧಾನಿ ಮೋದಿ

ಸಾಮೂಹಿಕ ಅತ್ಯಾಚಾರದ ಸುಳ್ಳು ಆರೋಪಗಳಿಂದಾಗಿ ತಮಗೆ ಮತ್ತು ತಮ್ಮ ಕುಟುಂಬಕ್ಕೆ ನೋವು ಮತ್ತು ಮಾನಸಿಕ ಸಂಕಟ ಆಗಿದ್ದನ್ನು ಉಲ್ಲೇಖಿಸಿ ತಮ್ಮ ಕ್ಷಕಿದಾರರು 10,006.02 ಕೋಟಿ ರೂ.ಗಳನ್ನು ಪರಿಹಾರ ಕೋರಿದ್ದಾನೆ ಎಂದು ಯಾದವ್ ಹೇಳಿದರು.
ತನ್ನ ವಿರುದ್ಧ ‘ಸುಳ್ಳು, ಕಪೋಲಕಲ್ಪಿತ ಹಾಗೂ ಅವಹೇಳನಾಕಾರಿ ಹೇಳಿಕೆ’ಗಳನ್ನು ನೀಡಿದ್ದಾರೆ ಎಂದು ಪೊಲೀಸರ ವಿರುದ್ಧ ಆರೋಪಿಸಿರುವ ಕಾಂತಿಲಾಲ್, ಸುಳ್ಳು ಆರೋಪವು ತನ್ನ ಜೀವನ ಹಾಗೂ ವೃತ್ತಿಯನ್ನು ಹಾಳು ಮಾಡಿದೆ. ತನ್ನ ವ್ಯವಹಾರ ಹಾಗೂ ವೃತ್ತಿಯಲ್ಲಿನ ಪ್ರತಿಯೊಂದು ನಷ್ಟ, ಪ್ರತಿಷ್ಠ ಹಾಗೂ ಗೌರವದ ನಷ್ಟ, ದೈಹಿಕ ಹಾನಿ ಹಾಗೂ ಮಾನಸಿಕ ನೋವಿನ ಪ್ರಮಾಣ, ಕೌಟುಂಬಿಕ ಜೀವನ ನಷ್ಟ ಮತ್ತು ಶಿಕ್ಷಣ ಹಾಗೂ ವೃತ್ತಿ ಅವಕಾಶಗಳ ನಷ್ಟಗಳಿಗಾಗಿ ತಲಾ ಒಂದು ಕೋಟಿ ರೂ ಪರಿಹಾರ ಕೊಡಿಸಬೇಕು ಎಂದಿರುವ ಆತ, 10,000 ಕೋಟಿ ರೂ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದ್ದಾನೆ.

ಪ್ರಕರಣ ಏನು?
2018ರ ಜನವರಿ 18ರಂದು ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ಕಾಂತಿಲಾಲ್ ವಿರುದ್ಧ ಪೊಲೀಸರು ಸಾಮೂಹಿಕ ಅತ್ಯಾಚಾರದ ಪ್ರಕರಣ ದಾಖಲಿಸಿದ್ದರು. ತನ್ನ ಸಹೋದರ ಮನೆಗೆ ಲಿಫ್ಟ್‌ ಕೊಡುವುದಾಗಿ ಹೇಳಿ ಬೈಕ್‌ಗೆ ಹತ್ತಿಸಿಕೊಂಡಿದ್ದ ಕಾಂತಿ ಲಾಲ್, ಕಾಡಿಗೆ ಕರೆದೊಯ್ದು ತನ್ನ ಮೇಲೆ ಅತ್ಯಾಚಾರ ಎಸಗಿದ್ದ ಎಂದು ದೂರಿನಲ್ಲಿ ಹೇಳಲಾಗಿತ್ತು.
ನಂತರ ಮತ್ತೊಬ್ಬ ಆರೋಪಿ ಭೇರು ಅಮ್ಲಿಯಾರ್‌ನಿಗೆ ಮಹಿಳೆಯನ್ನು ಒಪ್ಪಿಸಿದ್ದ. ಕಾರ್ಮಿಕ ಕೆಲಸದ ನೆಪದಲ್ಲಿ ಇಂದೋರ್‌ಗೆ ಆಕೆಯನ್ನು ಕರೆದೊಯ್ದಿದ್ದ ಭೇರು, ಆರು ತಿಂಗಳ ಕಾಲ ಅತ್ಯಾಚಾರ ಎಸಗಿದ್ದ ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು.
2018ರ ಜುಲೈ 20ರಂದು ಕಾಂತಿಲಾಲ್ ಮತ್ತು ಭೇರು ವಿರುದ್ಧ ಐಪಿಸಿ ಸೆಕ್ಷನ್ 366 (ಅಪಹರಣ) ಮತ್ತು 376 ( ಸಾಮೂಹಿಕ ಅತ್ಯಾಚಾರ) ಪ್ರಕರಣಗಳನ್ನು ದಾಖಲಿಸಲಾಗಿತ್ತು. ತಲೆಮರೆಸಿಕೊಂಡಿದ್ದ ಕಾಂತಿಲಾಲ್‌ನನ್ನು 2020ರ ಡಿ. 23ರಂದು ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದರು. ಆದರೆ ಪುರಾವೆಗಳನ್ನು ಪತ್ತೆ ಮಾಡುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಹೇಳಿದ್ದ ಸೆಷನ್ಸ್ ನ್ಯಾಯಾಲಯ, ಇಬ್ಬರೂ ಆರೋಪಿಗಳನ್ನು 2022ರ ಅಕ್ಟೋಬರ್‌ 10ರಂದು ಬಿಡುಗಡೆ ಮಾಡಿತ್ತು.

ಪ್ರಮುಖ ಸುದ್ದಿ :-   100 ವರ್ಷಗಳಲ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮೊದಲ ಮಹಿಳಾ ಉಪಕುಲಪತಿ ನೇಮಕ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement