ಕನ್ನಡಕ್ಕೆ ಸ್ಪಂದಿಸದ ಬ್ಯಾಂಕ್‍ಗಳನ್ನು, ಸಂಘ-ಸಂಸ್ಥೆಗಳನ್ನು ಧಿಕ್ಕರಿಸಿ : ಹಾವೇರಿ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ

ಹಾವೇರಿ: ಕನ್ನಡ ಭಾಷೆಯಲ್ಲಿ ಕಾರ್ಯನಿರ್ವಹಿಸದ ಬ್ಯಾಂಕುಗಳು, ಸರ್ಕಾರಿ ಉದ್ಯಮಗಳು, ಖಾಸಗಿ ಸಂಸ್ಥೆಗಳನ್ನು ಧಿಕ್ಕರಿಸಬೇಕು. ಹಾಗಿದ್ದರೆ ಮಾತ್ರ ಮಾತೃಭಾಷೆ ಉಳಿಯಲು ಸಾಧ್ಯ ಎಂದು 86ನೇ ಅಖಿಲ ಭಾರತ ಸಮ್ಮೇಳನದ ಅಧ್ಯಕ್ಷರಾದ ಸಾಹಿತಿ ಡಾ. ದೊಡ್ಡರಂಗೇಗೌಡ ಕರೆ ನೀಡಿದ್ದಾರೆ.
ಕನಕದಾಸ- ಶ ರೀಫ- ಸರ್ವಜ್ಞ ವೇದಿಕೆಯಲ್ಲಿ ಶುಕ್ರವಾರ ಆರಂಭವಾದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ನಾಟಕದೆಲ್ಲೆಡೆ ಕನ್ನಡದಲ್ಲೇ ಸೇವೆ ನೀಡುವಂತೆ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಬಲವಾಗಿ ಆಗ್ರಹಿಸಿದರೆ ಉದ್ಯೋಗಗಳಲ್ಲಿ ಕನ್ನಡಿಗರ ಸಂಖ್ಯೆ ಖಾಸಗಿವಲಯದಲ್ಲೂ ಗಣನೀಯ ಹೆಚ್ಚಳವಾಗುತ್ತದೆ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ವಿಧಾನಮಂಡಲದಲ್ಲಿ ಇತ್ತೀಚೆಗೆ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ – 2022 ಅನ್ನು ಮಂಡಿಸಲಾಗಿದೆ. ಕನ್ನಡವನ್ನು ಅಧಿಕೃತ ರಾಜ್ಯಭಾಷೆಯಾಗಿ ತೀರ್ಮಾನಿಸುವ, ಅಡಳಿತ ಮತ್ತು ನ್ಯಾಯಾಂಗದಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸುವ ಅಂಶಗಳೂ ಸೇರಿದಂತೆ ಹಲವು ಉತ್ತಮ ಅಂಶಗಳಿವೆ. ಈ ಮಸೂದೆಯನ್ನು ಕಾಯಿದೆಯಾಗಿ ಸಮರ್ಥವಾಗಿ ಅನುಷ್ಠಾನಗೊಳಿಸಬೇಕೆಂದು ಅವರು ಕರೆ ನೀಡಿದರು.
ಕರ್ನಾಟಕ ಬಹುರಾಷ್ಟ್ರೀಯ ಸಂಸ್ಥೆಗಳ ನವೋದ್ಯಮಗಳ ತವರಾಗಿದೆ. ಆದರೆ ಬಹುರಾಷ್ಟ್ರೀಯ ಸಂಸ್ಥೆಗಳು ಕನ್ನಡಿಗರಿಗೆ ಹೆಚ್ಚು ಉದ್ಯೋಗಗಳನ್ನು ನೀಡುತ್ತಿಲ್ಲ ಎಂದರು.ಕನ್ನಡದಲ್ಲಿ ವಿವಿಧ ಬಗೆಯ ಸೇವೆಯನ್ನು ಒದಗಿಸುವ ನವೋದ್ಯಮಗಳಿಗೆ ಸರ್ಕಾರವು ವಿಶೇಷ ಪ್ರೋತ್ಸಾಹವನ್ನು ನೀಡಬೇಕು. ಅಲ್ಲದೇ, ಆಂಗ್ಲ ಭಾಷೆಯಲ್ಲಿ ಮಾತ್ರವೇ ಸೇವೆಯನ್ನು ಒದಗಿಸುತ್ತಿರುವ ವಿವಿಧ ಆನ್‌ಲೈನ್‌ ಸೇವಾ ಉದ್ಯಮಗಳಿಗೆ ಕನ್ನಡದಲ್ಲಿ ಸೇವೆ ಒದಗಿಸಲು ವಿಶೇಷ ಉತ್ತೇಜನಗಳನ್ನು ನೀಡಬೇಕು. ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಕನ್ನಡವನ್ನು ವ್ಯಾಪಿಸಲು ಸರ್ಕಾರವು ವಿಶೇಷ ನೀತಿ ರೂಪಿಸಬೇಕೆಂದು ಅವರು ಸಲಹೆ ನೀಡಿದರು.

ಪ್ರಮುಖ ಸುದ್ದಿ :-   2 ಕ್ಷೇತ್ರಗಳಲ್ಲಿ ಒಂದೇ ಪಕ್ಷದ ತಲಾ ಇಬ್ಬರು ಅಭ್ಯರ್ಥಿಗಳಿಂದ ನಾಮಪತ್ರ ;ತಾವೇ ಅಧಿಕೃತ ಅಭ್ಯರ್ಥಿಗಳೆಂದು ಹಕ್ಕು ಮಂಡನೆ...!

ತಮ್ಮ ಭಾಷಣದಲ್ಲಿ ಡಾ. ದೊಡ್ಡರಂಗೇಗೌಡರು ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ವಿವಾದವನ್ನು ಪ್ರಸ್ತಾಪಿಸಿ, ಬೆಳಗಾವಿ ಎಲ್ಲಿಗೆ ಸೇರಬೇಕು ಎಂಬ ವಿಷಯಗಳು ಬಂದಾಗ ಕರ್ನಾಟಕದ ಜನ ಒಟ್ಟಾಗಿ ಉತ್ತರ ಕೊಟ್ಟಿದ್ದಾರೆ. ಕನ್ನಡದ ಒಂದು ಅಂಗುಲ ನೆಲವನ್ನೂ ಬೇರೆಯವರಿಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಕೆ ನೀಡಿದರು.
ನಮ್ಮ ಅಭಿಮಾನದ ನಾಡು, ನುಡಿಗೆ ಅನ್ಯಾಯವಾಗಲು ನಾವು ಕನ್ನಡಿಗರು ಬಿಡುವುದಿಲ್ಲ. ನಮ್ಮಲ್ಲಿ ಒಗ್ಗಟು ಇದೆ; ಪರಾಕ್ರಮವೂ ಇದೆ. ಎದುರಿಸುವ ಕೆಚ್ಚೂ ನೆಚ್ಚೂ ಆತ್ಮವಿಶ್ವಾಸವಿದೆ. ಬೆಳಗಾವಿಯನ್ನು ಯಾವ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ. ಇದು ನಮ್ಮ ಇಚ್ಛೆ ಇದು ನಮ್ಮ ಹೃದಯಂತರಾಳದ ವಾಂಛೆ! ನಮ್ಮದಲ್ಲದ ನೆಲವನ್ನು ನಾವು ಅಪೇಕ್ಷಿಸುವುದಿಲ್ಲ. ನಮ್ಮ ರಾಜ್ಯದ ಸ್ವತ್ತನ್ನು ನಮ್ಮ ಸರ್ಕಾರ ಕೂಡ ಬಿಟ್ಟು ಕೊಡುವುದಿಲ್ಲ. ಇದು ಸತ್ಯದ ಮಾತು ! ಇದು ಪ್ರತಿನಿತ್ಯದ ಮಾತು ಎಂದು ದೃಢವಾಗಿ ಹೇಳಿದರು.
ಕಾಸರಗೋಡಿನಲ್ಲಿ ಕನ್ನಡ ಕಲೆ, ಸಂಸ್ಕೃತಿ, ಭಾಷೆಯ ಉಳಿವಿಗೆ ಹೆಚ್ಚಿನ ಗಮನವನ್ನು ಕೊಡಬೇಕಾಗಿದೆ ಅಲ್ಲಿ ಮಲೆಯಾಳೀಕರಣ ಭರದಿಂದ ನಡೆದಿದೆ. ಕನ್ನಡ ವಿದ್ಯಾರ್ಥಿಗಳು ಕನ್ನಡ ಬಾರದ ಅಧ್ಯಾಪಕರಿಂದ ಪಾಠ ಕೇಳಬೇಕಾದ ವಿಪರ್ಯಾಸದ ಪರಿಸ್ಥಿತಿ ಅಲ್ಲಿದೆ. ಈ ಬಗ್ಗೆ ಗಮನಹರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಂಡರು.

ಕರ್ನಾಟಕದಲ್ಲಿ ಬೇರೆ ರಾಜ್ಯಗಳಿಂದ ಬಂದ ವಲಸಿಗರ ಸಮಸ್ಯೆ ಉಲ್ಬಣವಾಗುತ್ತಿದೆ. ಕನ್ನಡೇತರರು ಇಲ್ಲಿಗೆ ಕೆಲಸ ಅರಸಿ ಬಂದು ಇಲ್ಲಿ ನೆಲೆ ನಿಂತರೆ ಹಾಗೆ ನೆಲೆಗೊಂಡವರು ಕನ್ನಡವನ್ನು ಪ್ರೀತಿಯಿಂದ ಕಲಿಯಬೇಕು, ಅವರಿಗೆ ಇಲ್ಲಿಯ ನೆಲ ಬೇಕು; ಇಲ್ಲಿಯ ಜಲ ಬೇಕು. ಇಲ್ಲಿಯ ಸಕಲ ಸಂಪನ್ಮೂಲ ಬೇಕು, ಅದರೆ ಅಂಥವರಿಗೆ ಕನ್ನಡ ಬೇಕಾಗಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ಅನೇಕರು ಇನ್ನೂ ಆಂಗ್ಲ ಭಾಷೆಯಲ್ಲೇ ಟಿಪ್ಪಣಿ ಬರೆಯುತ್ತಾರೆ. ಅವರಿಗೆ ಕನ್ನಡಿಗರ ಎಚ್ಚರಿಕೆಯ ಮಾತು ಇಷ್ಟೇ; ನಿಯತ್ತಿನಿಂದ ಕನ್ನಡ ಕಲಿತು ಆಡಳಿತ ನಡೆಸಿ. ಕನ್ನಡ ನಾಡಲ್ಲಿ ಕನ್ನಡವೇ ಸಾರ್ವಭೌಮ, ಕನ್ನಡಕ್ಕೇ ಆದ್ಯತೆ! ಇಲ್ಲಿ ಕನ್ನಡಕ್ಕೆ ಮೊದಲ ಮಣೆ ಸಂದಾಯ ಆಗಬೇಕು. ಇನ್ನೆಲ್ಲವೂ ಗೌಣ. ಕನ್ನಡ ಕಲಿಯುವುದೆಂದರೆ ಕರ್ನಾಟಕದ ದೇಸಿ ಭಾಷೆಯ ಆಳ ಅಗಲಗಳ ಅರಿಯುವುದು. ಕನ್ನಡ ಸಂಸ್ಕೃತಿ ತಿಳಿಯುವುದು ಎಂದು ಒತ್ತಿ ಹೇಳಿದರು.
ಐದನೇ ತರಗತಿವರೆಗೆ ಕನ್ನಡ ಕಲಿಕೆಯನ್ನು ಸರ್ಕಾರ ಕಡ್ಡಾಯ ಗೊಳಿಸಬೇಕು, ಆ ಮೇಲೆ ಆ ಮಗುವಿನ ಬೌದ್ಧಿಕ ಸಾಮರ್ಥ್ಯದ ಮೇಲೆ ಎಷ್ಟು ಭಾಷೆಗಳನ್ನಾದರೂ ಕಲಿಯಲಿ. ನಮ್ಮ ವಿರೋಧವಿಲ್ಲ. ಇದು ಸೈದ್ಧಾಂತಿಕ ತರ್ಕ. ಆಗಲೇ ಬೇಕಾದ ಕಾರ್ಯ. ಈ ಬಗ್ಗೆ ಗಮನಕೊಡಲಿ ಎಂದು ಹೇಳಿದರು. ನಮ್ಮ ನಲ್ಮೆಯ ಸರ್ಕಾರ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ನಿಮ್ಮವನಾಗಿದ್ದೆ...ಯಾವಾಗಲೂ ನಿಮ್ಮವನಾಗಿಯೇ ಇರ್ತೇನೆ..: ಬಿಜೆಪಿ ಟಿಕೆಟ್ ನಿರಾಕರಣೆ ನಂತ್ರ ಪಿಲಿಭಿತ್‌ ಜನತೆಗೆ ʼಹೃದಯಸ್ಪರ್ಶಿʼ ಪತ್ರ ಬರೆದ ವರುಣ ಗಾಂಧಿ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement