ಪಾಟ್ನಾ: ಬಿಹಾರದ ಹಾಜಿಪುರದ ಬ್ಯಾಂಕ್ನಲ್ಲಿ ಮೂವರು ಶಸ್ತ್ರಸಜ್ಜಿತ ದರೋಡೆಕೋರರು ಬುಧವಾರ ಬ್ಯಾಂಕ್ಗೆ ಬಲವಂತವಾಗಿ ನುಗ್ಗಲು ಪ್ರಯತ್ನಿಸಿದಾಗ ಕಾವಲು ಕಾಯುತ್ತಿದ್ದ ಇಬ್ಬರು ಮಹಿಳಾ ಪೊಲೀಸ್ ಕಾನ್ಸ್ಟೇಬಲ್ಗಳು ಧೈರ್ಯದಿಂದ ಹೋರಾಡಿ ಅವರನ್ನು ಹಿಮ್ಮೆಟ್ಟಿಸಿದ ಘಟನೆ ನಡೆದಿದೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ.
ಜೂಹಿ ಕುಮಾರಿ ಮತ್ತು ಶಾಂತಿ ಕುಮಾರ ಎಂಬ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ಗಳು ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಸೆಂಡುರಿ ಚೌಕ್ನಲ್ಲಿರುವ ಉತ್ತರ ಬಿಹಾರ ಗ್ರಾಮೀಣ ಬ್ಯಾಂಕ್ನ ಲೂಟಿಗೆಂದು ಬಂದ ಮೂವರು ಶಸ್ತ್ರಸಜ್ಜಿತ ದರೋಡೆಕೋರರನ್ನು ಪ್ರವೇಶದ್ವಾರದಲ್ಲಿ ಎದುರಿಸಿದ್ದಾರೆ ಹಾಗೂ ಅವರ ಜೊತೆ ಹೋರಾಡಿದ್ದಾರೆ. ದರೋಡೆಕೋರರು ನಂತರ ಪಲಾಯನ ಮಾಡಿದ್ದಾರೆ. ಘಟನೆಯು ಬ್ಯಾಂಕಿನ ಭದ್ರತಾ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬ್ಯಾಂಕಿಗೆ ಬಂದ ಅವರಿಗೆ ತಮ್ಮ ದಾಖಲೆಗಳನ್ನು ತೋರಿಸಲು ಕೇಳಿದಾಗ, ಒಬ್ಬ ವ್ಯಕ್ತಿ ಪಿಸ್ತೂಲ್ ತೆಗೆದು ಅವರತ್ತ ಗುರಿ ಇಟ್ಟಿದ್ದಾನೆ. ಆದರೆ ಜೂಹಿ ಮತ್ತು ಶಾಂತಿ ಇಬ್ಬರೂ ಮಹಿಳಾ ಪೊಲೀಸ್ ಪೇದೆಗಳು ಹೆದರದೆ ದರೋಡೆಕೋರರಿಗೇ ಸವಾಲು ಹಾಕಿದರು.
“ಮೂವರಿಗೂ ಬ್ಯಾಂಕ್ನಲ್ಲಿ ಕೆಲಸವಿದೆಯೇ ಎಂದು ನಾನು ಕೇಳಿದೆ ಮತ್ತು ಅವರು ಹೌದು ಎಂದು ಹೇಳಿದರು. ಪಾಸ್ಬುಕ್ ತೋರಿಸಲು ನಾನು ಅವರನ್ನು ಕೇಳಿದೆ ಮತ್ತು ಆಗ ಅವರು ಬಂದೂಕನ್ನು ಹೊರತೆಗೆದು ಗುರಿ ಇಟ್ಟರು ಎಂದು ಜೂಹಿ ಹೇಳಿದ್ದಾರೆ.
ನಂತರ ದರೋಡೆಕೋರರೊಂದಿಗೆ ನಡೆದ ಹೋರಾಟದಲ್ಲಿದರೋಡೆಕೋರರು ಹೆದರಿದರು ಮತ್ತು ಅಲ್ಲಿಂದ ತಪ್ಪಿಸಿಕೊಂಡು ಪಲಾಯನ ಮಾಡಿದರು. ಆದರೆ ಮಹಿಳಾ ಪೊಲೀಸ್ ಜೂಹಿ ಗಾಯಗೊಂಡರು.
“ಅವರು ನಮ್ಮ ರೈಫಲ್ಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು, ಆದರೆ ಬ್ಯಾಂಕನ್ನು ದೋಚಲು ಅಥವಾ ನಮ್ಮ ಶಸ್ತ್ರಾಸ್ತ್ರವನ್ನು ಕಸಿದುಕೊಳ್ಳಲು ಬಿಡಬಾರದು ಎಂದು ನಿರ್ಧರಿಸಿದೆವು ಹಾಗೂ ಅವರ ಜೊತೆ ಹೋರಾಟಕ್ಕೆ ಇಳಿದೆವು. ಜೂಹಿ ಅವರು ದರೋಡೆಕೋರರ ಮೇಲೆ ಬಂದೂಕಿನಿಂದ ಗುಂಡು ಹಾರಿಸಲು ಮುಂದಾದಾಗ ಅವರು ಓಡಿಹೋದರು ಎಂದು ಶಾಂತಿ ಹೇಳಿದರು. ಪೊಲೀಸರು ಇದೀಗ ವ್ಯಕ್ತಿಗಳ ಪತ್ತೆಗೆ ಮುಂದಾಗಿದ್ದು, ದರೋಡೆ ಯತ್ನದ ಕುರಿತು ತನಿಖೆ ನಡೆಸುತ್ತಿದ್ದಾರೆ.
“ಮೂರು ಜನರು ಸೆಂಡುವರಿಯಲ್ಲಿ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಬ್ಯಾಂಕ್ ಅನ್ನು ದರೋಡೆ ಮಾಡಲು ಪ್ರಯತ್ನಿಸಿದರು. ನಮ್ಮ ಮಹಿಳಾ ಕಾನ್ಸ್ಟೇಬಲ್ಗಳು ಅಸಾಧಾರಣ ಧೈರ್ಯವನ್ನು ಪ್ರದರ್ಶಿಸಿದರು ಮತ್ತು ಅವರನ್ನು ಹೆದರಿಸುವಲ್ಲಿ ಯಶಸ್ವಿಯಾದರು. ಗುಂಡಿನ ದಾಳಿ ನಡೆದಿಲ್ಲ. ಕಾನ್ಸ್ಟೇಬಲ್ಗಳಿಗೆ ಬಹುಮಾನ ನೀಡಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಓಂ ಪ್ರಕಾಶ್ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ