ಧಾರವಾಡದಲ್ಲಿ ವಿಧಿ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಕೇಂದ್ರ ಗೃಹ ಸಚಿವ ಅಮಿತ್​ ಶಾ

ಧಾರವಾಡ: ಧಾರವಾಡದಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಇಂದು, ಶನಿವಾರ ಗೃಹಸಚಿವ ಅಮಿತ್‌ ಶಾ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
“ದೆಹಲಿಯಲ್ಲಿ ಫಾರೆನ್ಸಿಕ್‌ ವಿಶ್ವವಿದ್ಯಾಲಯವಿದೆ. ಕರ್ನಾಟಕದ ವಿದ್ಯಾರ್ಥಿಗಳಿಗೂ ಅನುಕೂಲವಾಗುವಂತೆ ಧಾರವಾಡದಲ್ಲಿಯೂ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ನಿರ್ಮಾಣಗೊಳ್ಳುತ್ತಿದೆ. ಭವಿಷ್ಯದಲ್ಲಿ ಭಾರತವು ಅತಿ ಹೆಚ್ಚು ಫಾರೆನ್ಸಿಕ್‌ ತಜ್ಞರನ್ನು ಹೊಂದಿರುವ ದೇಶವಾಗಲಿದೆ ಎಂದು ಈ ವೇಳೆ ಅಮಿತ್‌ ಶಾ ಹೇಳಿದರು.
ವಿಧಿ ವಿಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಿ ಇದಕ್ಕೆ ಅಡಿಪಾಯ ಹಾಕಿದ್ದು ಎಲ್.ಕೆ. ಅಡ್ವಾಣಿಯವರು. ಅವರು ಗೃಹ ಸಚಿವರಾಗಿದ್ದಾಗಲೇ ವಿಧಿ ವಿಜ್ಞಾನ ವಿಭಾಗವನ್ನು ಆರಂಭಿಸಿದ್ದರು. ಇತ್ತೀಚಿನ ದಿನಗಳಲ್ಲಿ ವಿಧಿ ವಿಜ್ಞಾನದ ಮೂಲಕ ಅಪರಾಧ ಪತ್ತೆ ಮಾಡುವುದು ಮಹತ್ವ ಪಡೆದಿದೆ. ಈ ಕಾರಣದಿಂದ ದೇಶದಲ್ಲಿ ಫಾರೆನ್ಸಿಕ್​ ವಿವಿಯನ್ನು ಮೋದಿಯವರು ಆರಂಭಿಸಿದರು ಎಂದು ಅಮಿತ್ ಶಾ ಹೇಳಿದರು.
ವಿಧಿ ವಿಜ್ಞಾನ ಆರಂಭವಾದ ಐದು ವರ್ಷದಲ್ಲಿಯೇ ಇದಲ್ಲಿ ಕಲಿತವರಿಗೆ ನೌಕರಿ ಸಿಕ್ಕಿದೆ. ಎಸ್‌ಎಸ್‌ಎಲ್‌ಸಿ ಮುಗಿಸಿದ ತಕ್ಷಣವೇ ಫಾರೆನ್ಸಿಕ್ ಕಲಿಯಲು ಆರಂಭಿಸಬಹುದು. ಅಂತಹ ಒಂದು ಅವಕಾಶ ಈಗ ಧಾರವಾಡದ ವಿಧಿ ವಿಜ್ಞಾನ ವಿವಿಯಿಂದ ದೊರೆಯಲಿದೆ ಎಂದು ತಿಳಿಸಿದರು.
ವಿಧಿ ವಿಜ್ಞಾನ ವಿಶ್ವವಿದ್ಯಾಲಯಗಳು ದೇಶದಲ್ಲಿ ಆರಂಭವಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಜಗತ್ತಿನಲ್ಲಿಯೇ ಹೆಚ್ಚು ಫಾರೆನ್ಸಿಕ್ ತಜ್ಞರನ್ನು ಹೊಂದಿದ ದೇಶ ಭಾರತವಾಗಲಿದೆ. ಇವತ್ತು ಅಪರಾಧ ಜಗತ್ತು ಬೇರೆ ಬೇರೆ ಆಯಾಮದಲ್ಲಿ ಬೆಳೆದಿದೆ. ತಂತ್ರಜ್ಞಾನ ಬಳಸಿ ಪೊಲೀಸರು ಅಪರಾಧಿಗಳಿಗಿಂತ ಎರಡು ಹೆಜ್ಜೆ ಮುಂದೆ ಹೋಗಬೇಕಿದೆ. ಅದಕ್ಕಾಗಿ ಇದಕ್ಕಾಗಿ ಈಗ ತಂತ್ರಜ್ಞಾನ ಅಧಾರಿತ ತನಿಖೆ ಅತ್ಯಗತ್ಯವಾಗಿದೆ. ಅಪರಾಧಿಗಳಿಗೆ ಶಿಕ್ಷೆ ಕೊಡಿಸಬೇಕಾದರೆ ಅಪರಾಧ ದೃಢವಾಗಬೇಕು. ಇದಕ್ಕೆ ಫಾರೆನ್ಸಿಕ್ ತಜ್ಞರು ಬೇಕು ಎಂದು ಅಮಿತ್​ ಶಾ ಪ್ರಶಂಸಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ತಂತ್ರಜ್ಞಾನ ಹೆಚ್ಚಾದಂತೆ ಅಪರಾಧಿಗಳು ಸಹ ತಂತ್ರಜ್ಞಾನ ಬಳಸುತ್ತಿದ್ದಾರೆ. 10 ವರ್ಷದ ಹಿಂದೆ ಸೈಬರ್ ಕ್ರೈಂ ಬಗ್ಗೆ ಬಹುತೇಕರು ಕೇಳಿರಲಿಲ್ಲ. ಈಗ ಅದರ ಬಗ್ಗೆಯೇ ಕಾನೂನು ಸಹ ಬಂದಿದೆ. ಇಂತಹ ಅಪರಾಧಗಳ ಕಡಿವಾಣ ಹಾಕಬೇಕಾದರೆ ನಮ್ಮ ತಂತ್ರಜ್ಞಾನ ಮುಂದಿರಬೇಕು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.
ಹೊಸ ರೀತಿಯ ಅಪರಾಧಗಳಾದ ಸೈಬರ್ ಕ್ರೈಮ್, ಡಿಜಿಟಲ್ ಕ್ರೈಮ್, ನಾರ್ಕೋಟಿಕ್ಸ್ ಗಳನ್ನು ನಿಯಂತ್ರಿಸುವ ಅಗತ್ಯವಿದೆ. ಹಿಂದೆಲ್ಲಾ ಎಫ್ಎಸ್ಎಲ್‌ನಿಂದ ವರದಿಗಳು ಬರಲು ವರ್ಷಗಳು ಆಗುತ್ತಿದ್ದವು. ಈ ಅವಧಿಯಲ್ಲಿ ಅಪರಾಧಿಗಳು ತಲೆಮರೆಸಿಕೊಳ್ಳುತ್ತಿದ್ದರು. ಇದಕ್ಕಾಗಿ ನಾನು ಗೃಹ ಸಚಿವನಿದ್ದಾಗ 2 ಪ್ರಾದೇಶಿಕ ಎಫ್ಎಸ್ಎಲ್ ಕೇಂದ್ರಗಳನ್ನು ಕೊಟ್ಟಿದ್ದೇವೆ. ಅಲ್ಲದೆ, ಬೆಂಗಳೂರಿನ ಎಫ್ಎಸ್ಎಲ್ ಪ್ರಯೋಗಾಲಯವನ್ನು 30 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ಬೊಮ್ಮಾಯಿ ಹೇಳಿದರು.
ಭಾರತದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ 180 ಕ್ಕೂ ಹೆಚ್ಚು ಸ್ಪೆಷಲ್ ಆಫೀಸರ್ ಆನ್ ಕ್ರೈಂ ಸೀನ್ ನೇಮಕ ಮಾಡಿಕೊಳ್ಳಲಾಗಿದೆ. 52 ಎಫ್ಎಸ್ಎಲ್ ತಂತ್ರಜ್ಞರಿಗೆ ತರಬೇತಿ ಕೊಟ್ಟು ನೇಮಕ ಮಾಡಿಕೊಳ್ಳಲಾಗಿದೆ.ಈಗ ಎಫ್ಎಸ್ಎಲ್ ವಿಶ್ವ ವಿದ್ಯಾಲಯವೇ ಕರ್ನಾಟಕಕ್ಕೆ ಬಂದಿದೆ. ಇದು ಧಾರವಾಡದಲ್ಲಿ ನೆಲೆಗೊಳ್ಳಲು ಪ್ರಲ್ಹಾದ್ ಜೋಶಿ ಅವರ ಶ್ರಮವಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕರಾದ ಅರವಿಂದ್ ಬೆಲ್ಲದ, ಅಮೃತ ದೇಸಾಯಿ, ಉಪಕುಲಪತಿಗಳಾದ ಜಿ.ಎಂ. ವ್ಯಾಸ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement