ಮಹದಾಯಿ: ಬಿಜೆಪಿ ರಾಜಕೀಯ ನಾಟಕವನ್ನು ರೈತರು, ಜನರು ನಂಬುವುದಿಲ್ಲ- ಕಾಂಗ್ರೆಸ್

ಹುಬ್ಬಳ್ಳಿ : ಡಿಪಿಆರ್ ಅನುಮೋದನೆಗೊಂಡಿದೆ, ಮಹದಾಯಿ ಜಲ ವಿವಾದ ಸಂಪೂರ್ಣ ಬಗೆಹರಿಸಿದ್ದೇವೆ, ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ, ಮಹದಾಯಿ ನಮ್ಮದೇ ಕೊಡುಗೆ ಎಂದು ಹೇಳುತ್ತಿರುವ ಬಿಜೆಪಿ ನಾಯಕರ ಹೇಳಿಕೆ ಸುಳ್ಳೆಂದು ಜನ ತಿಳಿದುಕೊಂಡಿದ್ದಾರೆ. ಆರಂಭದಿಂದಲೂ ಬಿಜೆಪಿ ಮಹದಾಯಿ-ಕಳಸಾ ಬಂಡೂರಿ ನಾಲಾ ಯೋಜನೆಗೆ ಒಂದಿಲ್ಲ ಒಂದು ಕಾರಣ ಅಡ್ಡಿ ಅಡ್ಡಪಡಿಸುತ್ತಲೇ ಬಂದಿದೆ. ಇಂದಿಗೂ ಅಡ್ಡಪಡಿಸುತ್ತಲಿದೆ ಎಂದು ಕಾಂಗ್ರೆಸ್‌ ರಾಜ್ಯ ಪ್ರಚಾರ ಸಮಿತಿ ಸಂಯೋಜಕರಾದ ವಸಂತ ಲದವಾ ಟೀಕಿಸಿದ್ದಾರೆ.
೧೯೮೦ರಲ್ಲಿ ದಿ. ಗುಂಡೂರಾಯರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮೊದಲ ಬಾರಿಗೆ ಮಹದಾಯಿ ಮಲಪ್ರಭಾ ನದಿ ಜೋಡಣೆ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದರು. ಅಂದಿನಿಂದ ಇಂದಿನ ವರೆಗೆ ಬಿಜೆಪಿ ಸರ್ಕಾರ ಅಡ್ಡಪಡಿಸುತ್ತಿದೆ. ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಎಚ್.ಕೆ. ಪಾಟೀಲ ಅವರು ೨೦೦೧ ರಲ್ಲಿ ಕಳಸಾ ಬಂಡೂರಿ ನಾಲಾ ತಿರುವು ಯೋಜನೆ ಹಮ್ಮಿಕೊಂಡಿದ್ದರು. ದಿನಾಂಕ ೩೦-೦೪-೨೦೦೨ರಂದು ಕಾಂಗ್ರೆಸ್‌ ಸರ್ಕಾರ ಜಲಸಂಪನ್ಮೂಲ ಇಲಾಖೆಯಿಂದ ತಾತ್ವಿಕ ಒಪ್ಪಿಗೆ ಪಡೆದಿತ್ತು. ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್‌ ಸಂಸ್ಥೆಯಿಂದ ಕಾಂಗ್ರೆಸ್‌ ಸರ್ಕಾರ ನಿರಪೇಕ್ಷಣಾ ಪತ್ರ ಪಡೆದಿತ್ತು. ಯೋಜನೆ ಈ.ಐ.ಎ ಅಧಿಸೂಚನೆ ೨೦೦೬ರ ಪೂರಕವಾಗಿದ ಆಡಳಿತಾತ್ಮಕ ಅನುಮೋದನೆ ಸಹ ಪಡೆದುಕೊಳ್ಳಲಾಗಿತ್ತು. ಭಾಗಶಃ ಕಾಮಗಾರಿಯೂ ಕೂಡ ನಡೆದಿತ್ತು. ಆದರೆ ಜುಲೈ ೨೦೦೨ ರಲ್ಲಿ ಇದೇ ಬಿಜೆಪಿ ಸರಕಾರ ಅಡ್ಡಪಡಿಸಿತ್ತು. ಕೇಂದ್ರದ ಇದೇ ಬಿಜೆಪಿ ಸರ್ಕಾರ ಸಪ್ಟೆಂಬರ್‌ ೨ರಂದು ನೀಡಲಾದ ಅನುಮತಿ ಸ್ಥಗಿತಗೊಳಿಸಿತ್ತು. ಅಂದಿನಿಂದ ಇಂದಿನವರೆಗೂ ಬಿಜೆಪಿ ಈ ಯೋಜನೆಗೆ ನಿರಂತರ ಅಡ್ಡಪಡಿಸುತ್ತಿದೆ ಎಂದು ವಸಂತ ಲದವಾ ಆರೋಪಿಸಿದ್ದಾರೆ.
೨೦೦೬ರಲ್ಲಿ ಸರ್ವೋಚ್ಛ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ದಿನಾಂಕ ೧೪-೦೮-೨೦೧೮ರ ಸರ್ವೋಚ್ಛ ನ್ಯಾಯಾಲಯದ ಮಧ್ಯಂತರ ಪರಿಹಾರದ ನಂತರವೂ ಬಿಜೆಪಿ ಅಡ್ಡಪಡಿಸಿತ್ತು. ಮತ್ತೆ ಸರ್ವೋಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿ ಬಿಜೆಪಿ ಅಡ್ಡಪಡಿಸಿತು. ಸತತ ದಶಕಗಳಿಂದ ಈ ಯೋಜನೆಗೆ ಕೇಂದ್ರ ಮತ್ತು ಗೋವಾದ ಬಿಜೆಪಿ ಸರ್ಕಾರಗಳು ಅಡ್ಡಪಡಿಸಿರುವ ಬಗ್ಗೆ ದಾಖಲೆಗಳಿವೆ. ಆದರೆ ಇಂದು ಕೇಂದ್ರ ಸರ್ಕಾರ ಮಹದಾಯಿ ನಮ್ಮದೇ ಕೊಡುಗೆ ಎಂದು ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದ ಎಂದು ಅವರು ಟೀಕಿಸಿದ್ದಾರೆ.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್‌ ಸರ್ಕಾರ ಮಹದಾಯಿ ಯೋಜನೆಗೆ ಸತತ ಪ್ರಯತ್ನಿಸುತ್ತಿದ್ದರೂ ಈವರೆಗಿನ ರಾಜ್ಯದ ಎಲ್ಲ ಬಿಜೆಪಿ ಸರ್ಕಾರಗಳು ಮತ್ತು ಜಗದೀಶ ಶೆಟ್ಟರ ಸಮೇತ ಮುಖ್ಯಮಂತ್ರಿಗಳು, ಯಾವುದೇ ಕ್ರಮ ಕೈಗೊಳ್ಳದಿದ್ದರೂ ಡಿಪಿಆರ್ ಸಿದ್ಧಪಡಿಸಲಾಗಿದೆ. ಕೂಡಲೇ ಕಾಮಗಾರಿ ಪ್ರಾರಂಭಿಸುತ್ತೇವೆ, ಎಲ್ಲ ಬಗೆಹರಿಸಿದ್ದೇವೆಂದು ಸತ್ಯಕ್ಕೆ ದೂರವಾದ ಹೇಳಿಕೆ ಬಿಜೆಪಿ ನಾಯಕರು ಕೊಡುತ್ತಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ಕುಮ್ಮಕ್ಕಿನಿಂದ ಗೋವಾ ಬಿಜೆಪಿ ಸರ್ಕಾರ ಈ ಯೋಜನೆಗೆ ಆತಂಕ ಒಡ್ಡುತ್ತಿದೆ. ಕೇಂದ್ರ ಸರ್ಕಾರ ಇಂದಿಗೂ ಕಳಸಾ ಬಂಡೂರಿ ನಾಲಾ ಯೋಜನೆಗೆ ಪರಿಸರ ಇಲಾಖೆ ಅನುಮೋದನೆ ನೀಡಿಲ್ಲ, ಬಿಜೆಪಿ ಸರಕಾರ ಈ ಯೋಜನೆ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದೆ. ಕೇಂದ್ರ ಬಿಜೆಪಿ ಸರ್ಕಾರ ಮಾತುಕತೆ ಮೂಲಕ ವಿವಾದ ಬಗೆಹರಿಸಬಹುದಾಗಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ನ್ಯಾಯಾಲಯದಲ್ಲಿ ಬಿಜೆಪಿ ನಾಲಾ ಯೋಜನೆ ವಿರುದ್ಧ ಸುದೀರ್ಘ ದೂರು ದಾಖಲಿಸಿದ್ದರೂ ಮುಖ್ಯಮಂತ್ರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ವಸಂತ ಲದವಾ ಆಕ್ಷೇಪಿಸಿದ್ದಾರೆ.
ಬಿಜೆಪಿ ಸರ್ಕಾರಕ್ಕೆ ಕಲ್ಯಾಣ ಕರ್ನಾಟಕದ ಜನರ ನೀರಿನ ಬವಣೆ ನೀಗಿಸುವ ಇಚ್ಛೆ ಇದ್ದಲ್ಲಿ ಇಂದಿಗೂ ಸಂವಿಧಾನದ ಪ್ರಕಾರ ಈ ಸಮಸ್ಯೆಗೆ ಪರಿಹಾರ ಹುಡುಕಬಹುದಾಗಿದೆ. ಸರ್ವೋಚ್ಛ ನ್ಯಾಯಾಲಯದ ೧೯೯೬ರ ಆದೇಶದನ್ವಯ ಕುಡಿಯುವ ನೀರಿನ ಯೋಜನೆಗಳಿಗೆ ಸರ್ವೋಚ್ಛ ಆದ್ಯತೆ ನೀಡಬೇಕಾಗುತ್ತದೆ.ಕೇಂದ್ರ ಜಲ ಆಯೋಗದ ಪ್ರಕಾರ ಮಹದಾಯಿ ಜಲಾನಯನ ಪ್ರದೇಶದಲ್ಲಿ ಒಟ್ಟು ೨೦೨೦ ಟಿ.ಎಂ.ಸಿ. ನೀರಿದೆ. ಆ ಪೈಕಿ ಕರ್ನಾಟಕ ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಪ್ರಕಾರ ೪೪.೭೫ ಟಿಎಂ.ಸಿ. ಸೇರುತ್ತದೆ. ದೇಶದ ಕಾನೂನು ಪ್ರಕಾರ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ನ್ಯಾಯ ಬಗೆಹರಿಸಬಹುದಾಗಿದೆ. ಹಿಂದಿನ ಪ್ರಧಾನ ಮಂತ್ರಿಗಳಾದ ಇಂದಿರಾ ಗಾಂಧಿ ಮಧ್ಯಸ್ಥಿಕೆ ವಹಿಸಿ ನೀರಿನ ವಿವಾದ ಇತ್ಯರ್ಥಪಡಿಸಿದ್ದರು. ಇಂದಿಗೂ ಜನ ಕಲ್ಯಾಣಕ್ಕಾಗಿ ಈ ವಿವಾದ ಇತ್ಯರ್ಥಪಡಿಸಬಹುದಾಗಿದೆ. ಆದರೆ ಬಿಜೆಪಿ ಕೇವಲ ರಾಜಕಾರಣಕ್ಕಾಗಿ ಈ ಯೋಜನೆ ಉಪಯೋಗಿಸುತ್ತಿದೆ ಎಂದು ವಸಂತ ಲದವಾ ಟೀಕಿಸಿದ್ದಾರೆ.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement