ಹಿಂದುತ್ವ ಪ್ರತಿಪಾದಕ ಪಕ್ಷವಾದ ಬಿಜೆಪಿ ಈಶಾನ್ಯ ಭಾರತದ ರಾಜ್ಯಗಳಲ್ಲಿ ಜನಪ್ರಿಯವಾಗಿದ್ದು ಹೇಗೆ…?

ಮೂರು ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶಗಳು ಗುರುವಾರ ಬರಲು ಆರಂಭವಾಗುತ್ತಿದ್ದಂತೆಯೇ ಕಳೆದ ಸಲಕ್ಕಿಂತ ಕಡಿಮೆ ಸ್ಥಾನಗಳಿಸಿದರೂ ತ್ರಿಪುರವನ್ನು ಬಿಜೆಪಿ ಮೈತ್ರಿಕೂಟ ಉಳಿಸಿಕೊಳ್ಳುವುದು ಸ್ಪಷ್ಟವಾಯಿತು. ನಾಗಾಲ್ಯಾಂಡ್‌ನಲ್ಲಿ, ಬಿಜೆಪಿ-ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್‌ಡಿಪಿಪಿ) ನೇತೃತ್ವದ ಆಡಳಿತಾರೂಢ ಒಕ್ಕೂಟ ಅಧಿಕಾರಕ್ಕೆ ಬೇಕಾದ ಬಹುಮತ ಪಡೆಯಲು ಯಶಸ್ವಿಯಾಯಿತು. ಮೇಘಾಲಯದಲ್ಲಿಯೂ ಬಿಜೆಪಿ ಕಿರಿಯ ಪಾಲುದಾರ, ಆಡಳಿತಾರೂಢ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಯೊಂದಿಗೆ ಚುನಾವಣೆ ಮೊದಲು ಬೇರ್ಪಟ್ಟರೂ ಫಲಿತಾಂಶದ ನಂತರ ಅತಂತ್ರ ಸ್ಥಿತಿಯಲ್ಲಿ ಎನ್‌ಪಿಪಿಗೆ ಮತ್ತೆ ಬೆಂಬಲ ನೀಡುವುದಾಗಿ ಪ್ರಕಟಿಸಿದೆ.
ಬಿಜೆಪಿಯ ಸಾಧನೆ ಈಶಾನ್ಯದ ಈ ಮೂರು ರಾಜ್ಯಗಳಿಗೆ ಸೀಮಿತವಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ, ಪಕ್ಷವು ಅಸ್ಸಾಂನಿಂದ ಅರುಣಾಚಲ ಪ್ರದೇಶ, ಮಣಿಪುರದ ವರೆಗೆ ಈಶಾನ್ಯ ರಾಜ್ಯಗಳಲ್ಲಿ ಗಮನಾರ್ಹವಾಗಿ ಸಾಧನೆ ಮಾಡಿದೆ.
2016ರಲ್ಲಿ ಅಸ್ಸಾಂ ಚುನಾವಣೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಜಯಭೇರಿ ಬಾರಿಸುವ ಮೂಲಕ ರಾಜ್ಯದಲ್ಲಿ 15 ವರ್ಷಗಳ ಕಾಂಗ್ರೆಸ್ ಆಡಳಿತವನ್ನು ಕೊನೆಗೊಳಿಸಿತು. ಅದೇ ವರ್ಷದಲ್ಲಿ, ಮೂಲತಃ ಕಾಂಗ್ರೆಸ್ಸಿಗರಾಗಿದ್ದ ಮುಖ್ಯಮಂತ್ರಿ ಪೆಮಾ ಖಂಡು ಅವರು ಬಿಜೆಪಿ ಸೇರ್ಪಡೆಗೊಂಡ ನಂತರ ಕೇಸರಿ ಪಕ್ಷವು ಅರುಣಾಚಲ ಪ್ರದೇಶಕ್ಕೂ ಆಗಮನವಾಯಿತು. 2017ರಲ್ಲಿ ಬಿಜೆಪಿ ಮಣಿಪುರವನ್ನು ಗೆದ್ದು ಮಾಜಿ ಕಾಂಗ್ರೆಸ್ಸಿಗ ಎನ್ ಬಿರೇನ್ ಸಿಂಗ್ ಮುಖ್ಯಮಂತ್ರಿಯಾದರು. ನಂತರ 2018ರ ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು ರಾಜ್ಯದಲ್ಲಿ 25 ವರ್ಷಗಳ ಎಡಪಂಥೀಯ ಆಡಳಿತವನ್ನು ಕೊನೆಗೊಳಿಸಿತು.

ಅದೇ ವರ್ಷದಲ್ಲಿ, ಕೇಸರಿ ಪಕ್ಷವು ಕಿರಿಯ ಪಾಲುದಾರನಾಗಿ, ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಸಮ್ಮಿಶ್ರ ಸರ್ಕಾರಗಳನ್ನು ರಚಿಸಿತು. 2019 ರ ಅರುಣಾಚಲ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 60 ಸ್ಥಾನಗಳಲ್ಲಿ 41 ಸ್ಥಾನಗಳನ್ನು ಗೆದ್ದು ರಾಜ್ಯವನ್ನು ಉಳಿಸಿಕೊಂಡಿತು. 2021ರಲ್ಲಿ ಕೇಸರಿ ಪಕ್ಷವು ಅಸ್ಸಾಂ ಅನ್ನು ಉಳಿಸಿಕೊಂಡಿದೆ. 2022ರಲ್ಲಿ ಬಿಜೆಪಿ ಮತ್ತೆ ಮಣಿಪುರ ಗೆದ್ದಿತು. ಸಿಕ್ಕಿಂ ಮತ್ತು ಮಿಜೋರಾಂನಲ್ಲಿ ಪ್ರಾದೇಶಿಕ ಪಕ್ಷಗಳು ರಾಜ್ಯಗಳನ್ನು ಆಳುತ್ತಿವೆ.
bimba pratibimbaಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಯ ಈ ಓಟಕ್ಕೆ ಕಾರಣವೇನು..? ಯಾಕೆಂದರೆ ಅಸ್ಸಾಂ, ತ್ರಿಪುರಾ ಹಿಂದೂ ಬಹುಸಂಖ್ಯಾತ ರಾಜ್ಯಗಳು. ಮಣಿಪುರದಲ್ಲಿ ಹಿಂದೂಗಳು ದೊಡ್ಡ ಪ್ರಮಾಣದಲ್ಲಿದ್ದರೂ ಬುಡಕಟ್ಟುಗಳು ಹಾಗೂ ಕ್ರೈಸ್ತರು ಸಹ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈಶಾನ್ಯದ ಉಳಿದ ಭಾಗಗಳಲ್ಲಿ ಆದಿವಾಸಿಗಳು ಮತ್ತು ಕ್ರಿಶ್ಚಿಯನ್ನರು ಬಹುಸಂಖ್ಯಾತರಾಗಿದ್ದಾರೆ, ಅವರಲ್ಲಿ ಹಲವರು ಗೋಮಾಂಸವನ್ನು ತಿನ್ನುತ್ತಾರೆ, ಬಿಜೆಪಿ ಗೋಮಾಂಸ ಭಕ್ಷಣೆ ವಿರುದ್ಧ ಪ್ರಚಾರ ಮಾಡುತ್ತದೆ. ಆದರೂ ಭಾರತದ ಈಶಾನ್ಯದಲ್ಲಿ ಕೇಸರಿ ಪ್ರಾಬಲ್ಯ ಹೇಗಾಯಿತು ಎಂಬುದು ಪ್ರಶ್ನೆ.
ಈಶಾನ್ಯದಲ್ಲಿ ಬಿಜೆಪಿಯ ಮೊದಲ ಗೆಲುವು (ಅಸ್ಸಾಂ, 2016) ಮೋದಿ ಸರ್ಕಾರವು ಕೇಂದ್ರದಲ್ಲಿ ಮೊದಲು ಅಧಿಕಾರಕ್ಕೆ ಬಂದ ಎರಡು ವರ್ಷಗಳ ನಂತರ ಬಂದಿದೆ. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರವು ಈಶಾನ್ಯ ರಾಜ್ಯಗಳ ಅಭಿವೃದ್ಧಿಗೇ ಮೀಸಲಾದ ಪ್ರತ್ಯೇಕ ಕೇಂದ್ರ ಸಚಿವಾಲಯವನ್ನು ರಚಿಸಿತ್ತು. ಆಗಿನಿಂದ ಬಿಜೆಪಿ ಬಗ್ಗೆ ಈಶಾನ್ಯದಲ್ಲಿ ಸದ್ಭಾವನೆ ಬೆಳೆಯಲು ಆರಂಭವಾಯಿತು. ಈಗ, ಹೊಸ ಯೋಜನೆಗಳನ್ನು ರೂಪಿಸಲಾಗಿದೆ, ಹಳೆಯವುಗಳನ್ನು ತ್ವರಿತಗೊಳಿಸಲಾಗಿದೆ, ಹೆಚ್ಚಿನ ಯೋಜನೆಗಳಿಗೆ ಹಣವನ್ನು ಬಿಡುಗಡೆ ಮಾಡಲಾಗಿದೆ.

2015 ರಲ್ಲಿ, ಒಂದು ಮಹತ್ವದ ಘಟನೆ ಸಂಭವಿಸಿತು. ಕಾಂಗ್ರೆಸ್‌ನ ಸೋನಿಯಾ ಮತ್ತು ರಾಹುಲ್ ಗಾಂಧಿ ವಿರುದ್ಧ ಅಸಮಾಧಾನಗೊಂಡ ಯುವ ಮತ್ತು ಪ್ರಭಾವಿ ಕಾಂಗ್ರೆಸ್ ನಾಯಕ ಅಸ್ಸಾಂನ ಹಿಮಂತ ಬಿಸ್ವಾ ಶರ್ಮಾ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದರು. ಅವರು ಮೂಲತಃ ಅಸ್ಸಾಂ ಗಣ ಸಂಗ್ರಾಮ ಪರಿಷತ್‌ ಮೂಲಕ ರಾಜಕೀಯಕ್ಕೆ ಬಂದವರು. ಈಗ ಅವರು ಅಸ್ಸಾಂ ಮುಖ್ಯಮಂತ್ರಿ, ಶರ್ಮಾ ನೇತೃತ್ವದಲ್ಲಿ ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು (NEDA) ರಚಿಸಲಾಯಿತು, ಇದರಿಂದಾಗಿ ಪ್ರಾದೇಶಿಕ ಶಕ್ತಿಗಳೊಂದಿಗೆ ಕೆಲಸ ಮಾಡುವಾಗ ಬಿಜೆಪಿಯು ಈ ಪ್ರದೇಶಕ್ಕೆ ಕಾಲಿಡಬಹುದು ಮತ್ತು ಕಾಂಗ್ರೆಸ್ ಮತ್ತು ಇತರ ಪಕ್ಷಗಳಲ್ಲಿ ಅತೃಪ್ತರನ್ನು ಬಿಜೆಪಿಗೆ ತರಬಹುದು ಎಂಬುದು ಇದರ ಹಿಂದಿನ ಲೆಕ್ಕಾಚಾರವಾಗಿದೆ.
ಈ ಪ್ರದೇಶದ ವಿಭಿನ್ನ ಸಾಮಾಜಿಕ-ರಾಜಕೀಯ ಸಂಸ್ಕೃತಿ ಮತ್ತು ಆಕಾಂಕ್ಷೆಗಳು ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟ(NEDA) ರಚನೆಯನ್ನು ಸಮರ್ಥಿಸುತ್ತವೆ. ಜೊತೆಗೆ ದೆಹಲಿ ಅಬ್‌ ದೂರ ನಹೀ ಹೈ (ಈಗ ದೆಹಲಿ ದೂರವಿಲ್ಲ) ಎಂಬ ಸಂದೇಶವನ್ನು ಇದೇ ವೇಳೆ ರವಾನಿಸಲಾಯಿತು. ಜೊತೆಗೆ ಬಿಜೆಪಿಯು ಎಲ್ಲ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ನಾಯಕರ ಜೊತೆ ಸಮನ್ವಯ ಸಾಧಿಸುವ ಜವಾಬ್ದಾರಿಯನ್ನೂ ಹಿಮಂತ ಬಿಸ್ವ ಶರ್ಮಾ ಅವರಿಗೆ ವಹಿಸಲಾಯಿತು. ಕಾಂಗ್ರೆಸ್‌ನಿಂದ ಹಿಮಂತ ಬಿಸ್ವ ಶರ್ಮಾ ಅವರಂತಹ ಅನೇಕ ಪ್ರಾದೇಶಕ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಮಣಿಪುರದ ಎನ್. ಬಿರೇನ್ ಸಿಂಗ್ ಮತ್ತು ಅರುಣಚಲ ಪ್ರದೇಶದ ಪೆಮಾ ಖಂಡು ಅವರಂಥ ನಾಯಕರ ನಿರ್ಗಮನಗಳು ಕಾಂಗ್ರೆಸ್ ಅವನತಿಗೆ ಪ್ರಮುಖ ಕಾರಣಗಳಲ್ಲೊಂದು ಎನ್ನಬಹುದು. ಉದಾಹರಣೆಗೆ, 2003 ರವರೆಗೆ ನಾಗಾಲ್ಯಾಂಡ್ ಅನ್ನು ಆಳಿದ ಕಾಂಗ್ರೆಸ್‌ ಪಕ್ಷಕ್ಕೆ 2023 ರ ಚುನಾವಣೆಯಲ್ಲಿ ಒಬ್ಬರೇ ಒಬ್ಬರನ್ನೂ ಗೆಲ್ಲಿಸಲು ಸಾಧ್ಯವಾಗಲಿಲ್ಲ.

ಆದರೆ ಹಿಮಂತ ಬಿಸ್ವ ಶರ್ಮಾ ಅವರಿಗಿಂತ ಮುಂಚೆಯೇ, ಬಿಜೆಪಿಯ ಸೈದ್ಧಾಂತಿಕ ಪೋಷಕರಾದ ಆರ್‌ಎಸ್‌ಎಸ್‌ನ ರಾಮ್ ಮಾಧವ ಹಲವಾರು ವರ್ಷಗಳ ಕಾಲ ಈಶಾನ್ಯದಲ್ಲಿ ಕೆಲಸ ಮಾಡಿದರು. ವಾಸ್ತವವಾಗಿ, ಭಾರತವು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯುವ ಮೊದಲೇ ಆರ್‌ಎಸ್‌ಎಸ್ ಈ ಪ್ರದೇಶದಲ್ಲಿ ಕೆಲಸ ಮಾಡುತ್ತಿದೆ. ಮತ್ತು ಇದು ಪ್ರದೇಶದಲ್ಲಿ ತನ್ನ ಕೆಲಸವನ್ನು ಸಂದರ್ಭೋಚಿತಗೊಳಿಸಿತು. ಹಿಂದಿನ ಸರ್ಕಾರಗಳ ಆಧುನಿಕ ದೃಷ್ಟಿಕೋನದಿಂದ ಆದಿವಾಸಿಗಳು ಪರಕೀಯರಾಗಿದ್ದಾರೆ ಎಂದು ಭಾವಿಸಿದರೆ, ಅವರನ್ನು ತಮ್ಮಂತೆಯೇ ಸ್ವೀಕರಿಸಲು ಇಲ್ಲಿ ಒಂದು ಸಂಘಟನೆ ಹಾಗೂ ಶಕ್ತಿ ಸಿದ್ಧವಾಗಿದೆ ಎಂಬ ಸಂದೇಶವನ್ನು ಆರ್‌ಎಸ್‌ಎಸ್ ಅವರಿಗೆ ರವಾನಿಸಿತು.
ಆರ್‌ಎಸ್‌ಎಸ್ ಈ ಪ್ರದೇಶವನ್ನು ಪಂಜಾಬ್ ಮತ್ತು ಉತ್ತರ ಪ್ರದೇಶವಲ್ಲ ಎಂದು ಅರ್ಥಮಾಡಿಕೊಂಡಿದೆ. ಆದ್ದರಿಂದ, ಗೋಮಾಂಸ ಭಕ್ಷಣೆ ವಿರುದ್ಧ ಪ್ರಚಾರ ಮಾಡುವುದನ್ನು ಪ್ರಬಲವಾಗಿ ಪ್ರತಿಪಾದನೆ ಮಾಡುವುದಿಲ್ಲ, ಬಹುಶಃ ಅಸ್ಸಾಂ ಮತ್ತು ತ್ರಿಪುರವನ್ನು ಹೊರತುಪಡಿಸಿ ಈಶಾನ್ಯ ರಾಜ್ಯಗಳಲ್ಲಿ ಬುಡಕಟ್ಟು ಮತ್ತು ಕ್ರಿಶ್ಚಿಯನ್ ಜನಸಂಖ್ಯೆಯ ಉಪಸ್ಥಿತಿಯನ್ನು ಗಮನಿಸಿದರೆ ಅಂತಹ ಪ್ರತಿಪಾದನೆಯನ್ನು ಕೆಲಕಾಲವಾದರೂ ಕೈಬಿಡಬೇಕಾಗುತ್ತದೆ. ಕೆಲವು ದಿನಗಳ ಹಿಂದೆ, ಮೇಘಾಲಯ ಬಿಜೆಪಿ ಮುಖ್ಯಸ್ಥ ಅರ್ನೆಸ್ಟ್ ಮಾವ್ರಿ ಅವರು ತಾನು ಗೋಮಾಂಸ ತಿನ್ನುತ್ತೇನೆ, ಗೋಮಾಂಸ ತಿನ್ನುವುದು ರಾಜ್ಯದ ಜೀವನಶೈಲಿಯ ಭಾಗವಾಗಿದೆ, ಆದರೂ ನಾನು ಬಿಜೆಪಯಲ್ಲಿದ್ದೇನೆ ಹಾಗೂ ಇದರಿಂದ ನನಗೇನು ತೊಂದರೆಯಾಗಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯು ಈಶಾನ್ಯದ ಕೆಲ ರಾಜ್ಯಗಳ ಬಗ್ಗೆ ತಿಳಿದವರನ್ನು ಆಶ್ಚರ್ಯಗೊಳಿಸಲಿಲ್ಲ.

ಅಲ್ಲದೆ, ಅಲ್ಲಿನ ಪ್ರಾದೇಶಿಕ ಭೌಗೋಳಿಕತೆ ಗಮನದಲ್ಲಿಟ್ಟುಕೊಂಡು ಈಶಾನ್ಯದ ಪ್ರಾದೇಶಿಕ ಪಕ್ಷಗಳು ಕೇಂದ್ರದ ಸಹಾಯಕ್ಕಾಗಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಒಲವು ತೋರುತ್ತವೆ. ಮತ್ತು 2014 ರಿಂದ ಬಿಜೆಪಿಯು ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಇದು ಪ್ರಾದೇಶಕ ಪಕ್ಷಗಳ ಜೊತೆ ಉತ್ತಮ ಸಂವಹನ ನಡೆಸಲು ಬಿಜೆಪಿಗೆ ಸಹಾಯ ಮಾಡಿದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಬಿಜೆಪಿಗೆ ಹಿಂದಿಯ ಭಾಗವನ್ನು ಮೀರಿ ಬೆಳೆಯಬೇಕಾದರೆ ಮತ್ತು ಕೇಂದ್ರದಲ್ಲಿ ಹೆಚ್ಚು ಕಾಲ ಅಧಿಕಾರದಲ್ಲಿ ಇರಬೇಕಾದರೆ ಈಶಾನ್ಯ ರಾಜ್ಯಗಳನ್ನು ಅದಕ್ಕೆ ಟ್ಯಾಪ್ ಮಾಡಬೇಕಾಗಿತ್ತು. ಅಮಿತ್ ಶಾ ಅವರು ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ, ಅವರು ಈಶಾನ್ಯದ ಮಹತ್ವವನ್ನು ಒತ್ತಿ ಹೇಳಿದರು. 2019 ರ ಲೋಕಸಭಾ ಚುನಾವಣೆಯು ಬಿಜೆಪಿಯ ಯೋಜನೆಗಳು ರಾಜ್ಯ ರಾಜಕೀಯದ ಡೈನಾಮಿಕ್ಸ್ ಅನ್ನು ಮೀರಿ ಕಾರ್ಯನಿರ್ವಹಿಸುತ್ತಿವೆ ಎಂದು ತೋರಿಸಿದೆ.
ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಕಳೆದ ಲೋಕಸಭಾ ಚುನಾವಣೆಯಲ್ಲಿ ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದವು. ಬಿಜೆಪಿ 14 ಸ್ಥಾನಗಳನ್ನು ಮತ್ತು ಅದರ ಮಿತ್ರಪಕ್ಷಗಳು ನಾಲ್ಕು ಸ್ಥಾನಗಳನ್ನು ಗೆದ್ದವು, ಇದರಿಂದಾಗಿ ಎನ್‌ಡಿಎ ಈಶಾನ್ಯ ರಾಜ್ಯಗಳ ಒಟ್ಟು 25 ಲೋಕಸಭಾ ಕ್ಷೇತ್ರಗಳಲ್ಲಿ 18 ಸ್ಥಾನಗಳನ್ನು ಗಳಿಸಿತು. ಇತ್ತೀಚಿನ ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದಿಂದ ಬಿಜೆಪಿ ಬಹಳಷ್ಟು ಸಾಧಿಸಿದೆ. ಈ ರಾಜ್ಯಗಳು 2024 ರಲ್ಲಿ ಪ್ರಧಾನಿ ಮೋದಿ ತಮ್ಮ ಮೂರನೇ ಅವಧಿ ಬಯಸಿದಾಗ ಈ ಪ್ರದೇಶವು ಮತ್ತೊಮ್ಮೆ ನಿರ್ಣಾಯಕ ಪಾತ್ರವನ್ನು ವಹಿಸಲಿದೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement