ಕರ್ನಾಟಕ ಚುನಾವಣೆ 2023 : ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ

ನವದೆಹಲಿ:  ಮೇ 10ರಂದು ನಡೆಯಲಿರುವ ಕರ್ನಾಟಕದ ವಿಧಾನಸಬೆ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) 23 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇನ್ನೂ 12 ಅಭ್ಯರ್ಥಿಗಳ ಹೆಸರನ್ನು ಪಕ್ಷ ಬಿಡುಗಡೆ ಮಾಡಬೇಕಿದೆ. ಇತ್ತೀಚೆಗಷ್ಟೇ ಬಿಜೆಪಿ ಸೇರಿದ ಕಾಂಗ್ರೆಸ್ ಮುಖಂಡ ನಾಗರಾಜ ಛಬ್ಬಿ ಅವರಿಗೆ ಕಲಘಟಗಿ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ.
ಬಿಜೆಪಿ ಮೊದಲ ಪಟ್ಟಿಯನ್ನು ಮಂಗಳವಾರ ರಾತ್ರಿ ಬಿಡುಗಡೆ ಮಾಡಿತ್ತು. ಮೊದಲ ಪಟ್ಟಿಯಲ್ಲಿ 189 ಮಂದಿ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಲಾಗಿತ್ತು. 52 ಹೊಸ ಮುಖಗಳಿಗೆ ಟಿಕೆಟ್ ನೀಡಲಾಗಿತ್ತು. ಒಬಿಸಿಯ 32, ಎಸ್​ಸಿ 30, ಎಸ್​ಟಿ 16 ಹಾಗೂ 9 ವೈದ್ಯರು, ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಟಿಕೆಟ್ ನೀಡಲಾಗಿತ್ತು. 8 ಮಂದಿ ಮಹಿಳೆಯರು, ಐವರು ವಕೀಲರು, ಮೂವರು ಶಿಕ್ಷಕರು, 9 ಸ್ನಾತಕೋತ್ತರ ಪದವೀಧರರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಲಾಗಿತ್ತು.
ಕ್ಷೇತ್ರ – ಅಭ್ಯರ್ಥಿ
ದೇವರಹಿಪ್ಪರಗಿ – ಸೋಮನಗೌಡ ಪಾಟೀಲ್ (ಸಾಸನೂರು)
ಬಸವನಬಾಗೇವಾಡಿ – ಎಸ್​ಕೆ ಬೆಳ್ಳುಬ್ಬಿ
ಇಂಡಿ – ಕಾಸಗೌಡ ಬಿರದಾರ್
ಗುರುಮಿಟ್ಕಲ್ – ಲಲಿತ ಅನಾಪುರ್
ಬೀದರ – ಈಶ್ವರ ಸಿಂಗ್ ಠಾಕೂರ್
ಬಾಲ್ಕಿ- ಪ್ರಕಾಶ್ ಖಂಡ್ರೆ
ಗಂಗಾವತಿ – ಪ್ರಸನ್ನ ಮುನವಳ್ಳಿ
ಕಲಘಟಗಿ – ನಾಗರಾಜ್ ಛಬ್ಬಿ
ಹಾನಗಲ್ಲ – ಶಿವರಾಜ ಸಜ್ಜನರ
ಹಾವೇರಿ (ಎಸ್​ಸಿ) – ಗವಿಸಿದ್ದಪ್ಪ ದ್ಯಾಮಣ್ಣನವರ
ಹರಪ್ಪನಹಳ್ಳಿ – ಕರುಣಾಕರ ರೆಡ್ಡಿ
ದಾವಣಗೆರೆ ಉತ್ತರ – ಲೋಕಿಕೆರೆ ನಾಗರಾಜ
ದಾವಣಗೆರೆ ದಕ್ಷಿಣ – ಅಜಯ್ ಕುಮಾರ
ಮಾಯಕೊಂಡ (ಎಸ್​ಸಿ) – ಬಸವರಾಜ ನಾಯ್ಕ್
ಚನ್ನಗಿರಿ – ಶಿವಕುಮಾರ
ಬೈಂದೂರು – ಗುರುರಾಜ್ ಗಂಟಿಹೊಳೆ
ಮೂಡಿಗೆರೆ (ಎಸ್​ಸಿ) – ದೀಪಕ ದೊಡ್ಡಯ್ಯ
ಗುಬ್ಬಿ – ಎಸ್.​ಡಿ. ದಿಲೀಪಕುಮಾರ
ಶಿಡ್ಲಘಟ್ಟ – ರಾಮಚಂದ್ರ ಗೌಡ
ಕೆಜಿಎಫ್ (ಎಸ್​ಸಿ) – ಅಶ್ವಿನಿ ಸಂಪಂಗಿ
ಶ್ರವಣಬೆಳಗೊಳ- ಚಿದಾನಂದ
ಅರಸಿಕೆರೆ- ಜಿವಿ ಬಸವರಾಜು
ಹೆಗ್ಗಡದೇವನಕೋಟೆ- ಕೃಷ್ಣ ನಾಯ್ಕ

ಪ್ರಮುಖ ಸುದ್ದಿ :-   ದಾಂಡೇಲಿ : ಗಂಡ ಹೆಂಡತಿಯ ಜಗಳ ; ಕೋಪದಲ್ಲಿ ಮಗುವನ್ನೇ ಮೊಸಳೆಗಳಿರುವ ನಾಲೆಗೆ ಎಸೆದ ತಾಯಿ

ಎರಡನೇ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೆಸರು ಇಲ್ಲ.. ಹಾಲಿ ಬಿಜೆಪಿ ಶಾಸಕ ಜಗದೀಶ ಶೆಟ್ಟರ್ ಮತ್ತೆ ಸ್ಪರ್ಧಿಸಲು ಬಯಸಿರುವ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯನ್ನು ಪ್ರಕಟಿಸದೆ ಕಾಯ್ದಿರಿಸಿದೆ. ರಾಮದಾಸ್‌ ಸ್ಪರ್ಧಿಸುವ ಮೈಸೂರಿನ ಕ್ಷೇತ್ರದ ಟಿಕೆಟ್‌ ಘೋಷಣೆಯಾಗಿಲ್ಲ.  ಮೂಡಿಗೆರೆಯಲ್ಲಿ ಹಾಲಿ ಶಾಸಕ ಎಂಪಿ ಕುಮಾರಸ್ವಾಮಿ ಅವರಿಗೆ ಟಿಕೆಟ್‌ ನೀಡಿಲ್ಲ.
ಕೋಲಾರ ಚಿನ್ನ ಗಣಿ ಕ್ಷೇತ್ರದಿಂದ ಸ್ಪರ್ಧಿಸಲಿರುವ ಅಶ್ವಿನಿ ಸಂಪಂಗಿ ಸೇರಿದಂತೆ 23 ಅಭ್ಯರ್ಥಿಗಳ ಪಟ್ಟಿಯಲ್ಲಿ ಇಬ್ಬರು ಮಹಿಳೆಯರಿದ್ದಾರೆ.
ವರುಣಾದಲ್ಲಿ ಕಾಂಗ್ರೆಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿರುವ ವಿ ಸೋಮಣ್ಣ ಅವರು ಗುಬ್ಬಿಯಿಂದ ತಮ್ಮ ಪುತ್ರನಿಗೆ ಟಿಕೆಟ್ ನೀಡುವಂತೆ ಕೋರಿದ್ದರು. ಆದರೆ ಗುಬ್ಬಿ ಕ್ಷೇತ್ರದಿಂದ ಎಸ್‌.ಡಿ. ದಿಲೀಪಕುಮಾರ ಅವರನ್ನು ಪಕ್ಷ ಕಣಕ್ಕಿಳಿಸಿದೆ. ಬಿಜೆಪಿಯಿಂದ ಕಣಕ್ಕಿಳಿಯುವ ಅಭ್ಯರ್ಥಿಗಳ 2ನೇ ಪಟ್ಟಿಯಲ್ಲಿ ಅಚ್ಚರಿ ಎಂಬಂತೆ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅಳಿಯ ರಾಮಚಂದ್ರಗೌಡ ಅವರಿಗೆ ಶಿಡ್ಲಘಟ್ಟ ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಣೆಯಾಗಿದೆ. ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಅವರನ್ನು ಕೈಬಿಟ್ಟು ಗುರುರಾಜ ಗಂಟಿಹೊಳೆ ಅವರಿಗೆ ಟಿಕೆಟ್‌ ನೀಡಿದೆ. ಭ್ರಷ್ಟಾಚಾರ ಆರೋಪದ ಮೇಲೆ ಬಂಧಿತರಾಗಿರುವ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರಿಗೆ ಚನ್ನಗಿರಿ ಕ್ಷೇತ್ರದಲ್ಲಿ ಕೈಬಿಡಲಾಗಿದ್ದು, ಅವರ ಬದಲಿಗೆ ಶಿವಕುಮಾರ ಎಂಬವರಿಗೆ ಟಿಕೆಟ್‌ ನೀಡಲಾಗಿದೆ.
ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ರವೀಂದ್ರನಾಥ ಮತ್ತು ಹಾವೇರಿ ಶಾಸಕ ನೆಹರು ಓಲೇಕಾರ ಅವರನ್ನೂ ಕೈಬಿಟ್ಟು ಕ್ರಮವಾಗಿ ಲೋಕಿಕೆರೆ ನಾಗರಾಜ ಮತ್ತು ಗವಿಸಿದ್ದಪ್ಪ ದ್ಯಾಮಣ್ಣನವರ ಅವರಿಗೆ ಟಿಕೆಟ್‌ ನೀಡಲಾಗಿದೆ.

ಪ್ರಮುಖ ಸುದ್ದಿ :-   ಮಹಿಳೆ ಅಪಹರಣ ಪ್ರಕರಣ ; ಎಚ್‌.ಡಿ. ರೇವಣ್ಣ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿ ವಜಾ : ಬಂಧನದ ಭೀತಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement