ರಾಹುಲ್ ಗಾಂಧಿ ‘ಮೋದಿ ಉಪನಾಮ’ ಪ್ರಕರಣ: ಶಿಕ್ಷೆಗೆ ತಡೆ ಕೋರಿ ಸಲ್ಲಿಸಿದ್ದ ಮೇಲ್ಮನವಿಯ ಆದೇಶ ಕಾಯ್ದಿರಿಸಿದ ಸೂರತ್ ಕೋರ್ಟ್

ಸೂರತ್‌ : ತಮ್ಮ ವಿರುದ್ಧ ದಾಖಲಾಗಿರುವ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ವಿಧಿಸಿರುವ ಎರಡು ವರ್ಷಗಳ ಜೈಲು ಶಿಕ್ಷೆಗೆ ತಡೆ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಲ್ಲಿಸಿದ ಮೇಲ್ಮನವಿಯ ಆದೇಶವನ್ನು ಸೂರತ್ ಸೆಷನ್ಸ್ ನ್ಯಾಯಾಲಯ ಗುರುವಾರ ಕಾಯ್ದಿರಿಸಿದೆ.
ರಾಹುಲ್‌ ಗಾಂಧಿ ಮತ್ತು ದೂರುದಾರರಾದ ಬಿಜೆಪಿಯ ಪೂರ್ಣೇಶ ಮೋದಿ ಅವರ ವಾದವನ್ನು ಆಲಿಸಿದ ನ್ಯಾಯಾಧೀಶ ರಾಬಿನ್ ಮೊಗೇರ ಅವರು ಆದೇಶವನ್ನು ಕಾಯ್ದಿರಿಸಿದ್ದು, ಏಪ್ರಿಲ್ 20 ರಂದು ಆದೇಶ ಪ್ರಕಟವಾಗಲಿದೆ.
ಐಪಿಸಿ ಸೆಕ್ಷನ್‌ ಸೆಕ್ಷನ್ 499ಕ್ಕೆ ನೀಡಿರುವ ಎರಡನೇ ವಿವರಣೆ ಪ್ರಕಾರ ವ್ಯಕ್ತಿ, ಕಂಪೆನಿ, ಗುಂಪು ಅಥವಾ ಅವರಿಗೆ ಸಂಬಂಧಪಟ್ಟ ವ್ಯಕ್ತಿಗಳನ್ನು ಅಪಮಾನಗೊಳಿಸಿದ್ದರೆ ಮಾತ್ರ ದೂರು ಸಲ್ಲಿಸಬಹುದು. ಪೂರ್ಣೇಶ್‌ ಮೋದಿ ಅವರಿಗೆ ದೂರು ಸಲ್ಲಿಸಲು ಅವಕಾಶವಿದೆಯೇ ಎಂಬುದನ್ನು ನ್ಯಾಯಾಲಯ ಪರಾಮರ್ಶಿಸಬೇಕು ಎಂದು ರಾಹುಲ್‌ ಪರ ವಕೀಲರಾದ ಆರ್‌ ಎಸ್‌ ಚೀಮಾ ಅವರು ವಾದ ಮಂಡಿಸಿದ್ದಾರೆ.
ಮಾನನಷ್ಟ ಪ್ರಕರಣ ಸೃಷ್ಟಿಸಲೆಂದೇ ಹೇಳಿಕೆಯನ್ನು ಭೂತಗನ್ನಡಿ ಹಿಡಿದು ನೋಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದ ಕಾರಣಕ್ಕಾಗಿ ಈ ದಾವೆ ಹೂಡಲಾಗಿದೆಯೇ ವಿನಃ ಇದರಲ್ಲಿ ಬೇರೇನೂ ಇಲ್ಲ. ರಾಹುಲ್‌ ಅವರ ಇಡೀ ಭಾಷಣವನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ.ರಾಹುಲ್‌ ಭಾಷಣ ಮಾಡಿರುವುದು ಕರ್ನಾಟಕದ ಕೋಲಾರದಲ್ಲಿ. ಆದರೆ ವಿಚಾರಣೆ ನಡೆಸಿದ ಸೂರತ್‌ ನ್ಯಾಯಾಲಯಕ್ಕೆ ವಿಚಾರಣೆ ನಡೆಸಲು ಅಧಿಕಾರ ವ್ಯಾಪ್ತಿ ಇಲ್ಲ. ಮಾನನಷ್ಟ ಕಾನೂನನ್ನು ಅತ್ಯಂತ ನಿಕಟ ಮತ್ತು ಸೂಕ್ಷ್ಮವಾಗಿ ಪರಿಶೀಲಿಸುವ ಅಗತ್ಯವಿದೆ.ವಿಚಾರಣಾ ನ್ಯಾಯಾಲಯ ರಾಹುಲ್‌ ಅವರ ಶಿಕ್ಷೆಯ ಅವಧಿಯನ್ನು ಒಂದು ದಿನ ಮೊಟಕುಗೊಳಿಸಿದ್ದರೂ ರಾಹುಲ್‌ ಲೋಕಸಭಾ ಸದಸ್ಯತ್ವದಿಂದ ಅನರ್ಹರಾಗುತ್ತಿರಲಿಲ್ಲ. ಪೂರ್ಣೇಶ್‌ ಪರ ವಕೀಲರ ವಾದ ಸಂಪೂರ್ಣ ಕ್ಷುಲ್ಲಕತನದಿಂದ ಕೂಡಿದೆ. ರಾಹುಲ್‌ ಕ್ಷಮೆ ಕೇಳಬೇಕು ಎನ್ನುವ ಅವರ ವಾದದಲ್ಲಿ ಹುರುಳಿಲ್ಲ ಎಂದು ಅವರು ವಾದಿಸಿದರು.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ : ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಆಪ್ತ ಸಹಾಯಕನ ಬಂಧನ

ಪೂರ್ಣೇಶ ಅವರ ಪರ ವಾದ ಮಂಡಿಸಿದ ನ್ಯಾಯವಾದಿ ಟೋಲಿಯಾ ಅವರು, ಕಾನೂನಿನ ಪ್ರಕಾರ ಒಬ್ಬನನ್ನು ತಪ್ಪಿತಸ್ಥ ಎಂದು ಘೋಷಿಸಿ ಎರು ವರ್ಷ ಶಿಕ್ಷೆಗೆ ಗುರಿಪಡಿಸಿದ ಕೂಡಲೇ ಆತ ಅಥವಾ ಆಕೆ ಸಂಸದ ಇಲ್ಲವೇ ಶಾಸಕರಾಗಿ ಮುಂದುವರಿಯಲು ಅನರ್ಹರಾಗುತ್ತಾರೆ. ಸಂಸದರು ಹಾಗೂ ದೇಶದ ಎರಡನೇ ಅತಿ ದೊಡ್ಡದ ಪಕ್ಷದ ಅಧ್ಯಕ್ಷರಾಗಿದ್ದ ರಾಹುಲ್‌ ಅವರ ಭಾಷಣ ದೇಶದ ಮೇಲೆ ಭಾರಿ ಪರಿಣಾಮ ಬೀರಿತು. ಅವರು ತಮ್ಮದೇ ಭಾಷಣವನ್ನು ರೋಚಕಗೊಳಿಸಲು ಯತ್ನಿಸಿದರು ಎಂದು ಹೇಳಿದರು.
ರಾಹುಲ್‌ ಭಾಷಣ ಪ್ರಧಾನಿ ಮೋದಿ ಅವರನ್ನು ಟೀಕಿಸುವುದಕ್ಕಷ್ಟೇ ಸೀಮಿತವಾಗಿರಲಿಲ್ಲ. ʼಎಲ್ಲ ಕಳ್ಳರ ಹೆಸರಿನಲ್ಲಿ ಮೋದಿ ಉಪನಾಮ ಏಕೆ ಇದೆ? ಹುಡುಕಿದರೆ ಇನ್ನಷ್ಟು ಮೋದಿಗಳು ಸಿಗಬಹುದು” ಎಂದರು ಇದರಿಂದ ನನ್ನ ಕಕ್ಷೀದಾರ ಪೂರ್ಣೇಶ ಮೋದಿ ಅವರಿಗೆ ಅಪಮಾನವಾಗಿದೆ.
ಸಂಸದರಾದ ಮಾತ್ರಕ್ಕೆ ಅವರು ಶಿಕ್ಷೆಯಿಂದ ಹೊರತಲ್ಲ. ತೀರ್ಪು ನೀಡಿದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ವಿರುದ್ಧ ರಾಹುಲ್‌ ಆರೋಪಗಳನ್ನು ಮಾಡಿದ್ದಾರೆ. ತಮ್ಮ ಹೇಳಿಕೆ ಬಗ್ಗೆ ರಾಹುಲ್‌ ಇದುವರೆಗೂ ಕ್ಷಮೆ ಕೇಳಿಲ್ಲ.ನ್ಯಾಯಾಲಯಕ್ಕೆ ತಮ್ಮ ಪಕ್ಷದ ನಾಯಕರನ್ನು ಕರೆತಂದು ತಮಗೆ ಬೆಂಬಲ ಇರುವುದಾಗಿ ಸಾರ್ವಜನಿಕರಿಗೆ ತೋರಿಸುತ್ತಿದ್ದಾರೆ. ಸಂಸದರಾದವರು ಮೊದಲು ಸಾರ್ವಜನಿಕರ ಸೇವಕರು ನಂತರ ಮತ್ಮ ಪಕ್ಷದ ನಾಯಕರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ವಾದಿಸಿದರು.

ಪ್ರಮುಖ ಸುದ್ದಿ :-   ವೀಡಿಯೊ..| ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯಕುಮಾರಗೆ ಕಪಾಳಮೋಕ್ಷ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement