ಚೆನ್ನೈ: ಜೈಲಿನಲ್ಲಿರುವ ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಅವರನ್ನು ರಾಜ್ಯ ಸಂಪುಟದಿಂದ ವಜಾಗೊಳಿಸಿದ ಗಂಟೆಗಳ ನಂತರ, ಕೇಂದ್ರ ಗೃಹ ಸಚಿವಾಲಯದ ಸಲಹೆಯ ಮೇರೆಗೆ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು ತಮ್ಮ ಆದೇಶವನ್ನು ತಡೆಹಿಡಿದಿದ್ದಾರೆ ಎಂದು ವರದಿಯಾಗಿದೆ.
ರಾಜ್ಯಪಾಲರು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ಗೆ ಪತ್ರವನ್ನೂ ಕಳುಹಿಸಿದ್ದು, ಅವರ ಆದೇಶವನ್ನು ತಡೆಹಿಡಿಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಗೃಹ ಸಚಿವಾಲಯವು ರಾಜ್ಯಪಾಲರನ್ನು ಅಟಾರ್ನಿ ಜನರಲ್ನಿಂದ ಕಾನೂನು ಅಭಿಪ್ರಾಯ ಪಡೆದು ನಂತರ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ. ಬಾಲಾಜಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವ ಆದೇಶವನ್ನು ಮುಂದಿನ ಸಂವಹನದವರೆಗೆ ರಾಜ್ಯಪಾಲರು ಹಿಂಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೂನ್ 14 ರಂದು ಸೆಂಥಿಲ್ ಬಾಲಾಜಿ ಅವರ ಬಂಧನದ ನಂತರ, ಅವರನ್ನು ಸರ್ಕಾರವು ಖಾತೆಯಿಲ್ಲದೆ ಸಚಿವರನ್ನಾಗಿ ಉಳಿಸಿಕೊಂಡಿತು ಮತ್ತು ಅವರು ಹೊಂದಿದ್ದ ಖಾತೆಗಳನ್ನು ಹಣಕಾಸು ಸಚಿವ ತಂಗಂ ತೆನ್ನರಸು (ವಿದ್ಯುತ್) ಮತ್ತು ವಸತಿ ಸಚಿವ ಮುತ್ತುಸಾಮಿ (ಅಬಕಾರಿ) ಅವರಿಗೆ ಹಂಚಲಾಯಿತು.
ಅಟಾರ್ನಿ ಜನರಲ್ ಅವರ ಕಾನೂನು ಅಭಿಪ್ರಾಯ ಬರುವವರೆಗೂ ಸೆಂಥಿಲ್ ಬಾಲಾಜಿ ಅವರನ್ನು ಸಂಪುಟದಿಂದ ವಜಾಗೊಳಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ. ರಾಜಭವನ ಗುರುವಾರ ಅಧಿಕೃತ ಪ್ರಕಟಣೆಯಲ್ಲಿ, “ವಿ ಸೆಂಥಿಲ್ ಬಾಲಾಜಿ ಅವರನ್ನು ಸಚಿವ ಸಂಪುಟದಲ್ಲಿ ಮುಂದುವರಿಸುವುದರಿಂದ ನ್ಯಾಯಯುತ ತನಿಖೆ ಸೇರಿದಂತೆ ಕಾನೂನಿನ ಪ್ರಕ್ರಿಯೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ತಿಳಿಸಿತ್ತು.
ಬಾಲಾಜಿ “ಉದ್ಯೋಗ ನೀಡಲು ಹಣ ತೆಗೆದುಕೊಳ್ಳುವುದು ಮತ್ತು ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವಾರು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಸಚಿವ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ತನಿಖೆಯ ಮೇಲೆ ಪ್ರಭಾವ ಬೀರುತ್ತಿದ್ದಾರೆ ಮತ್ತು ಕಾನೂನು ಮತ್ತು ನ್ಯಾಯದ ಪ್ರಕ್ರಿಯೆಗೆ ಅಡ್ಡಿಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಸೆಂಥಿಲ್ ಬಾಲಾಜಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಚಿವ ಸಂಪುಟದಿಂದ ವಜಾಗೊಳಿಸಿದ್ದಾರೆ” ಎಂದು ಪ್ರಕಟಣೆ ಉಲ್ಲೇಖಿಸಿತ್ತು.
ರಾಜ್ಯಪಾಲರ ನಾಟಕೀಯ ಕ್ರಮಕ್ಕೆ ಪ್ರತಿಕ್ರಿಯಿಸಿದ್ದ ಸ್ಟಾಲಿನ್, ರಾಜ್ಯಪಾಲರಿಗೆ ಸಚಿವರನ್ನು ಸಂಪುಟದಿಂದ ವಜಾಗೊಳಿಸುವ ಅಧಿಕಾರವಿಲ್ಲ ಮತ್ತು ಡಿಎಂಕೆ ಸರ್ಕಾರವು ಈ ನಿರ್ಧಾರವನ್ನು ಕಾನೂನುಬದ್ಧವಾಗಿ ಪ್ರಶ್ನಿಸಲಿದೆ ಎಂದು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ