ಭೋಪಾಲ್: ಬುಡಕಟ್ಟು ಯುವಕ ದಶಮತ್ ರಾವತ್ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪ ಹೊತ್ತಿರುವ ಪ್ರವೇಶ ಶುಕ್ಲಾ ಎಂಬಾತನನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ ಅವರು ದಶಮತ್ ರಾವತ್ ಅವರನ್ನು ಭೇಟಿ ಮಾಡಿದ್ದಾರೆ ಹಾಗೂ ಭೋಪಾಲದ ಮುಖ್ಯಮಂತ್ರಿ ಭವನದಲ್ಲಿ ಪಾದ ತೊಳೆದಿದ್ದಾರೆ.
ವೈರಲ್ ವೀಡಿಯೊದಲ್ಲಿ, ಶುಕ್ಲಾ ದಶಮತ್ ರಾವತ್ ಅವರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವುದು ಕಂಡುಬಂದಿದ್ದು, ಮುಖ್ಯಮಂತ್ರಿ ಸೇರಿದಂತೆ ಹಲವು ರಾಜಕೀಯ ಮುಖಂಡರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಜುಲೈ 5 ರಂದು ಪ್ರವೇಶ ಶುಕ್ಲಾನನ್ನು ಬಂಧಿಸಲಾಯಿತು ಮತ್ತು ರಾಜ್ಯಾಡಳಿತವು ಆತನ ಒಡೆತನದ ಆಸ್ತಿಯನ್ನು “ಅತಿಕ್ರಮಣ” ಎಂದು ಆರೋಪಿಸಿ ನೆಲಸಮಗೊಳಿಸಿತು.
ಗುರುವಾರದ ದೃಶ್ಯಗಳು ಮುಖ್ಯಮಂತ್ರಿ ಚೌಹಾಣ ಅವರು ದಶಮತ್ ರಾವತ್ ಅವರ ಪಾದಗಳನ್ನು ತೊಳೆದು ಹಾರವನ್ನು ನೀಡುತ್ತಿರುವುದನ್ನು ತೋರಿಸಿದೆ. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಚೌವಾಣ, ವೀಡಿಯೋ ನೋಡಿ ನನಗೆ ನೋವಾಯಿತು. ನಾನು ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ. ಜನರು ನನಗೆ ದೇವರಂತೆ…” ಎಂದು ಹೇಳಿದ್ದಾರೆ.
ಶಿವರಾಜ್ ಸಿಂಗ್ ಚೌಹಾಣ ಅವರು ಆರೋಪಿಯನ್ನು ಬಿಡುವುದಿಲ್ಲ ಮತ್ತು ಆತನಿಗೆ “ಕಠಿಣ ಶಿಕ್ಷೆ” ನೀಡಲಾಗುವುದು ಎಂದು ಹೇಳಿದರು.
ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 294 (ಅಶ್ಲೀಲ ಕೃತ್ಯಗಳು) ಮತ್ತು 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶಪೂರ್ವಕ ಅವಮಾನ) ಮತ್ತು SC/ST ಕಾಯಿದೆಯ ಅಡಿಯಲ್ಲಿ ಶುಕ್ಲಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಅಲ್ಲದೆ ಆರೋಪಿಯ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿಯಲ್ಲಿ ಆರೋಪವನ್ನೂ ಹೊರಿಸಲಾಗಿದೆ.
ಘಟನೆಯನ್ನು ಖಂಡಿಸಿ ಪರಿಶಿಷ್ಟರು ಮತ್ತು ಬುಡಕಟ್ಟು ಜನಾಂಗದವರು ಮಧ್ಯಪ್ರದೇಶದ ಇಂದೋರ್ನಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಅಖಿಲ ಭಾರತೀಯ ಬಲೈ ಮಹಾಸಂಘದ ಬ್ಯಾನರ್ ಅಡಿಯಲ್ಲಿ ಪ್ರತಿಭಟನಾಕಾರರು, ರಾಜ್ಯದಲ್ಲಿ ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್ಟಿ) ಸಮುದಾಯಗಳ ಸದಸ್ಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು ಮತ್ತು ಫಲಕಗಳನ್ನು ಪ್ರದರ್ಶಿಸಿದರು.
ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಹಾಸಂಘದ ಅಧ್ಯಕ್ಷ ಮನೋಜ ಪರ್ಮಾರ ಅವರು, ಸಿಧಿ ಜಿಲ್ಲೆಯಲ್ಲಿ ಆದಿವಾಸಿ ಯುವಕನ ಮೇಲೆ ಮೂತ್ರ ವಿಸರ್ಜನೆ ಮಾಡುವ ಮೂಲಕ ಪ್ರವೇಶ ಶುಕ್ಲಾ ಇಡೀ ದೇಶಕ್ಕೆ ನಾಚಿಕೆಯಾಗುವಂತೆ ಮಾಡಿದ್ದಾರೆ. ಶುಕ್ಲಾಗೆ ಕಠಿಣ ಶಿಕ್ಷೆಯಾಗಬೇಕು. ಸಾಧ್ಯವಾದರೆ, ಅವನನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ