ಅಂಕೋಲಾ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದರಾದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ವಿಠೋಬ ನಾಯಕ ವಂದಿಗೆ (88) ಅವರು ಗುರುವಾರ ನಿಧನರಾಗಿದ್ದಾರೆ.
ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಸುಮಾರು 50 ವರ್ಷಗಳಿಗೂ ಹೆಚ್ಚಿನ ಕಾಲ ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಲವಾರು ಪಾತ್ರಗಳಿಗೆ ಜೀವಂತಿಕೆ ತುಂಬಿದ್ದರು. ಅವರು ತಮ್ಮ ಗಂಭೀರ ಪಾತ್ರನಿರ್ವಹಣೆ, ಮನೋಜ್ಞ ಅಭಿನಯ, ಅದ್ಭುತ ಮಾತುಗಾರಿಕೆ ಮೂಲಕ ಹೆಸರಾಗಿದ್ದರು.
ಗದಾಯುದ್ಧದ ಭೀಮ, ರಾವಣ, ಯಮ, ಘಟೋದ್ಗಜ ಇವೇ ಮೊದಲಾದ ಗಂಭೀರ ಪಾತ್ರಗಳಲ್ಲಿ ರೌದ್ರ ಅಭಿನಯದಿಂದ ಮನೆಮಾತಾದ ವಿಠೋಬ ನಾಯಕ ಅವರಿಗೆ ಯಕ್ಷರಂಗದ ಸೇವೆಗಾಗಿ 2011 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿತ್ತು.
ಯಕ್ಷದಿಗ್ಗಜ ವಿಠೋಬ ನಾಯಕ ಅವರ ನಿಧನಕ್ಕೆ ಯಕ್ಷರಂಗದ ಅನೇಕ ಹಿರಿ ಕಿರಿಯ ಕಲಾವಿದರು, ಯಕ್ಷರಂಗದ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ