ಸಿದ್ದಾಪುರ :ಖ್ಯಾತ ಯಕ್ಷಗಾನ ಭಾಗವತ ಕೆ.ಪಿ.ಹೆಗಡೆಗೆ ʼಅನಂತಶ್ರೀʼ ಪ್ರಶಸ್ತಿ

ಸಿದ್ದಾಪುರ : ಪ್ರಸಿದ್ಧ ಯಕ್ಷಗಾನ ಗುರು, ಹೆಸರಾಂತ ಭಾಗವತರಾದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗೋಳಗೋಡಿನ ಕೆ.ಪಿ.ಹೆಗಡೆ ಅವರಿಗೆ ಯಕ್ಷಗಾನದ ಖ್ಯಾತ ಕಲಾವಿದರಾಗಿದ್ದ ಕೊಳಗಿ ಅನಂತ ಹೆಗಡೆ ಅವರ ಹೆಸರಿನಲ್ಲಿ‌ ನೀಡಲಾಗುವ ‘ಅನಂತಶ್ರೀ’ ಪ್ರಶಸ್ತಿ ಪ್ರಕಟಿಸಲಾಗಿದೆ.
ಈ ವಿಷಯ ತಿಳಿಸಿದ ಶ್ರೀ ಅನಂತ‌ ಯಕ್ಷ ಕಲಾ ಪ್ರತಿಷ್ಠಾನದ ಅಧ್ಯಕ್ಷ ವಿ.ಎಂ.ಭಟ್ಟ ಸಿದ್ದಾಪುರ ಅವರು, ಕಳೆದ ೧೨ ವರ್ಷಗಳಿಂದ ಕೊಳಗಿ ಅನಂತ ಹೆಗಡೆ ಅವರ ನೆನಪಿನಲ್ಲಿ ಪ್ರತಿಷ್ಠಾನ ಆರಂಭಿಸಲಾಗಿದೆ. ಕಳೆದ ಏಳು ವರ್ಷದಿಂದ ಹಿರಿಯ, ಸಾಧಕ ಕಲಾವಿದರನ್ನು ಆಯ್ಕೆ‌‌ ಮಾಡಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ ಎರಡನೇ ವಾರ‌ ಪ್ರಶಸ್ತಿ ‌ಪ್ರದಾನ‌ ಸಮಾರಂಭ ನಡೆಯಲಿದೆ. ಅನಂತ ಹೆಗಡೆ ಅವರ ಒಡನಾಡಿಗಳೂ ಆಗಿದ್ದ ಕೆ‌.ಪಿ.ಹೆಗಡೆ ಅವರನ್ನು ಪ್ರಶಸ್ತಿ‌ಗಾಗಿ ಆಯ್ಕೆ ಮಾಡಲಾಗಿದೆ. ಕಳೆದ ನಾಲ್ಕು ದಶಕಗಳಿಗೂ ಅಧಿಕ ಕಾಲದಿಂದ ಯಕ್ಷಗಾನದ‌ ಬಡಗುತಿಟ್ಟಿನ ಭಾಗವತರಾಗಿ, ಹಂಗಾರಕಟ್ಟೆ ಯಕ್ಷಗಾನ‌ ಕೇಂದ್ರದ‌ ಗುರುಗಳಾಗಿ ಯಕ್ಷಗಾನದ ಕಾರ್ಯ ಮಾಡುತ್ತಿರುವ ಕೃಷ್ಣ ಪರಮೇಶ್ವರ ಹೆಗಡೆ ಅವರನ್ನು ಗೌರವಿಸಲು ತೀರ್ಮಾನಿಸಲಾಗಿದೆ‌. ಕೆ.ಪಿ.ಹೆಗಡೆ ಅವರು ಎಸ್ ಎಸ್ ಎಲ್ ಸಿ ಬಳಿಕ ಎಂ.ನಾರಣಪ್ಪ ಉಪ್ಪೂರು, ಗಣಪತಿ ಹೆಗಡೆ, ಮಂಜುನಾಥ ಭಾಗವತ ಹೊಸ್ತೋಟರ ಶಿಷ್ಯರಾಗಿ‌ ತಮ್ಮ ಕಲಾ ಬದುಕನ್ನು ಆಯ್ಕೆ‌ ಮಾಡಿಕೊಂಡವರು. ಭಾಗವತರಾಗಿ ಕೆ.ಪಿ.ಹೆಗಡೆ ಅವರು ೧೯೭೯ರಲ್ಲಿ ಯಕ್ಷಗಾನ‌ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದವರು. ಕೋಟ, ಪೆರ್ಡೂರು, ಸಾಲಿಗ್ರಾಮ, ಮೂಲ್ಕಿ, ಶಿರಸಿ ಸೇರಿದಂತೆ ಅನೇಕ‌ ಮೇಳದಲ್ಲಿ ಪ್ರಧಾನ ಭಾಗವತರಾಗಿ ಅನುಪಮ‌ ಸೇವೆ ಸಲ್ಲಿಸಿದ್ದಾರೆ.
ಯಕ್ಷಗಾನ‌ ಕಲಿಕಾ‌ ಕೇಂದ್ರದ ಗುರುಗಳಾಗಿ ಕೆಲಸ ಮಾಡಿದ ಕೆ.ಪಿ ಹೆಗಡೆ ಅವರಲ್ಲಿ ಗುರು ನಾರಣಪ್ಪ ಉಪ್ಪೂರರ ಛಾಪು, ಅಪೂರ್ವ ರಂಗತಂತ್ರ, ಏರು ಶೃತಿಯಲ್ಲೂ ಹಾಡ ಬಲ್ಲ‌ ಕಂಠ, ರಾಗ, ತಾಳ, ಲಯದಲ್ಲಿ ಅಪೂರ್ವ ಹಿಡಿತವಿದೆ ಎಂಬುದು ವಿಶೇಷವಾಗಿದೆ.

ಪ್ರಮುಖ ಸುದ್ದಿ :-   ಸಾಹಿತಿ ದೊಡ್ಡರಂಗೇಗೌಡರ ಆರೋಗ್ಯದಲ್ಲಿ ಏರುಪೇರು ; ಆಸ್ಪತ್ರೆಗೆ ದಾಖಲು

3.5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement