ತಿರುಪತಿ: ಸೂರ್ಯನ ಕುರಿತಾದ ಅಧ್ಯಯನ ನಡೆಸಲು ರವಾನಿಸಲಿರುವ ಆದಿತ್ಯ ಎಲ್1 ಮಿಷನ್ನ ಉಡಾವಣೆಗೆ (ಸೆಪ್ಟೆಂಬರ್ 2)ಮುನ್ನಾದಿನವಾದ ಶುಕ್ರವಾರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಿಜ್ಞಾನಿಗಳು ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ತಿರುಮಲ ಬೆಟ್ಟದಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಶುಕ್ರವಾರ ಬೆಳಿಗ್ಗೆ ತೆರಳಿದ ವಿಜ್ಞಾನಿಗಳ ತಂಡ, ದೇವರ ಆಶೀರ್ವಾದ ಪಡೆದುಕೊಂಡಿತು.
ಚಂದ್ರಯಾನ- 3 ಬಾಹ್ಯಾಕಾಶ ಯೋಜನೆಯ ರಾಕೆಟ್ ಉಡಾವಣೆಗೂ ಮೊದಲು ಇಸ್ರೋ ವಿಜ್ಞಾನಿಗಳು ತಿರುಪತಿಗೆ ತೆರಳಿ ಪೂಜೆ ಸಲ್ಲಿಸಿದ್ದರು.
ಇಸ್ರೋ ವಿಜ್ಞಾನಿಗಳು ಸೂರ್ಯಯಾನದ ಆದಿತ್ಯ- ಎಲ್1 ಬಾಹ್ಯಾಕಾಶ ನೌಕೆಯ ಉಡಾವಣೆಗೆ ಮುನ್ನ ಕೂಡ ತಿರುಪತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಆದಿತ್ಯ ಎಲ್1ರ ಪುಟ್ಟ ಪ್ರತಿಕೃತಿಯನ್ನು ಅವರು ದೇವಸ್ಥಾನಕ್ಕೆ ಕೊಂಡೊಯ್ದಿದ್ದರು.ಸೆಪ್ಟೆಂಬರ್ 2ರ ಬೆಳಿಗ್ಗೆ 11.50ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೆ ಸಿದ್ಧತೆ ನಡೆಸಲಾಗಿದೆ.
ವೀಕ್ಷಣೆ ಹೇಗೆ?
ಆದಿತ್ಯ ಎಲ್1 ನೌಕೆಯ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಶುಕ್ರವಾರ ಮಧ್ಯಾಹ್ನ 12: 10ಕ್ಕೆ ಈ ಪ್ರಕ್ರಿಯೆ ಆರಂಭವಾಗಿದ್ದು, ಉಡಾವಣೆಗೆ ಅಗತ್ಯವಿರುವ ಅಂತಿಮ ಹಂತದ ಎಲ್ಲಾ ತಾಂತ್ರಿಕ ಸಿದ್ಧತೆಗಳು ಶುರುವಾಗಿವೆ. ಭೂಮಿಯ ಮೇಲಿಂದ 15 ಲಕ್ಷ ಕಿಮೀ ದೂರದಲ್ಲಿ ಸೂರ್ಯ ಹಾಗೂ ಭೂಮಿ ನಡುವೆ ಎರಡೂ ಕಡೆಯ ಗುರುತ್ವಾಕರ್ಷಣೆ ಶಕ್ತಿಗೆ ಒಳಗಾಗದಂತಹ ಲಾಂಗ್ರೇಜ್ ಪಾಯಿಂಟ್ನಲ್ಲಿ ಆದಿತ್ಯ ಎಲ್1 ಅನ್ನು ಇಸ್ರೋ ಇರಿಸಲಿದೆ.
ಶನಿವಾರ ಬೆಳಿಗ್ಗೆ ನಡೆಯಲಿರುವ ಉಡಾವಣೆಯನ್ನು ಜನರು ನೇರ ಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ. ಇಸ್ರೋ ವೆಬ್ಸೈಟ್ isro.gov.in, ಇಸ್ರೋದ ಫೇಸ್ಬುಕ್ ಪುಟ facebook.com.ISRO, ಯೂಟ್ಯೂಬ್ ಚಾನೆಲ್ youtube.com/watch?v_IcgGYZTXQw, ಹಾಗೂ ಡಿಡಿ ನ್ಯಾಷನಲ್ ಟಿವಿ ಚಾನೆಲ್ನಲ್ಲಿ ಬೆಳಿಗ್ಗೆ 11:20ರಿಂದ ವೀಕ್ಷಿಸಬಹುದಾಗಿದೆ ಎಂದು ಇಸ್ರೋ ಟ್ವೀಟ್ ಮೂಲಕ ತಿಳಿಸಿದೆ.
ಭಾರತದ ಸೂರ್ಯಯಾನ ಕಾರ್ಯಾಚರಣೆಯ ಆದಿತ್ಯ ಎಲ್1 ಬಾಹ್ಯಾಕಾಶ ನೌಕೆಯು ಸೌರ ಮಾರುತಗಳ ಕುರಿತಾದ ಅಧ್ಯಯನ ಮಾಡಲಿದೆ. ಅಲ್ಲದೆ, ಸೂರ್ಯನ ಕುರಿತಾದ ಹೊಸ ಮಾಹಿತಿಗಳನ್ನು ಹಾಕಲಿದೆ ಎಂದು ನಿರೀಕ್ಷಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ