ನವದೆಹಲಿ : ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್ ಜೈಶಂಕರ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ವಿರುದ್ಧ ನಿಷೇಧಿತ ಅಮೆರಿಕ ಮೂಲದ ಖಲಿಸ್ತಾನಿ ಸಂಘಟನೆ ಸಿಖ್ಸ್ ಫಾರ್ ಜಸ್ಟಿಸ್ (ಎಸ್ಎಫ್ಜೆ) ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್ ಜೀವ ಬೆದರಿಕೆ ಹಾಕಿದ್ದಾನೆ.
ಭಾನುವಾರ ಕೆನಡಾದಲ್ಲಿ 5,000-7,000 ಜನರು ಭಾಗವಹಿಸಿದ್ದ ಸಭೆಯಲ್ಲಿ ಪ್ರತ್ಯೇಕತಾವಾದಿ ನಾಯಕ ಮಾತನಾಡುವಾಗ ಬೆದರಿಕೆ ಹಾಕಿದ್ದಾನೆ.
ಜಿ20 ಶೃಂಗಸಭೆಯಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರೊಂದಿಗೆ ಮಾತುಕತೆಯ ಸಂದರ್ಭದಲ್ಲಿ ಕೆನಡಾದಲ್ಲಿನ ಖಲಿಸ್ತಾನಿಗಳು ಭಾರತ ವಿರೋಧಿ ಚಟುವಟಿಕೆಗಳ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪಿಸಿದ ನಂತರ ಭಾರತದ ಉನ್ನತ ನಾಯಕರಿಗೆ ಈ ಬೆದರಿಕೆ ಬಂದಿದೆ.
ಇದು ಹರ್ದೀಪ್ ಸಿಂಗ್ ನಿಜ್ಜರ್ ಅವರನ್ನು ಹತ್ಯೆ ಮಾಡಿದವರಿಗೆ ಸಂದೇಶವಾಗಿದೆ. ನಿಮ್ಮ ನಿರ್ಣಾಯಕ ಸಾವಿಗೆ ನಾವು ಕರೆ ನೀಡುತ್ತಿದ್ದೇವೆ. ಮೋದಿ, ಅಮಿತ್ ಶಾ, ಜೈಶಂಕರ, ಅಜಿತ್ ದೋವಲ್ ನಾವು ನಿಮಗಾಗಿ ಬರುತ್ತಿದ್ದೇವೆ ಎಂದು ಪನ್ನು ಹೇಳಿರುವುದಾಗಿ ವರದಿಯಾಗಿದೆ.
ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಈ ವರ್ಷದ ಜೂನ್ನಲ್ಲಿ ಕೆನಡಾದ ಸರ್ರೆಯಲ್ಲಿ ಗುಂಡಿನ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದ. ಹರ್ದೀಪ್ ಸಿಂಗ್ ನಿಜ್ಜರ್ ಗುರುನಾನಕ್ ಸಿಖ್ ಗುರುದ್ವಾರ ಸಾಹಿಬ್ ಮುಖ್ಯಸ್ಥ ಮತ್ತು ಪ್ರತ್ಯೇಕತಾವಾದಿ ಸಂಘಟನೆ ಖಲಿಸ್ತಾನಿ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥನಾಗಿದ್ದ.
ಜಿ20 ಶೃಂಗಸಭೆಯಲ್ಲಿ ಪ್ರಧಾನಿ ಜಸ್ಟಿನ್ ಟ್ರುಡೊ ಅವರೊಂದಿಗೆ ಪ್ರಧಾನಿ ಮೋದಿ ಕೆನಡಾದಲ್ಲಿ ಖಲೀಸ್ತಾನಿ ಉಗ್ರ ಚಟುವಟಿಕೆಗಳ ಬಗ್ಗೆ ಚರ್ಚಿಸಿದರು.
‘ ಕೆನಡಾದಲ್ಲಿ ಉಗ್ರಗಾಮಿಗಳು ಭಾರತ ವಿರೋಧಿ ಚಟುವಟಿಕೆಗಳನ್ನು ಮುಂದುವರೆಸುವ ಬಗ್ಗೆ ಪ್ರಧಾನಿ ಮೋದಿ ಕಳವಳವನ್ನು ವ್ಯಕ್ತಪಡಿಸಿದ್ದರು. ಖಲೀಸ್ತಾನಿಗಳು ಪ್ರತ್ಯೇಕತಾವಾದವನ್ನು ಉತ್ತೇಜಿಸುತ್ತಿದ್ದಾರೆ. ಭಾರತೀಯ ರಾಜತಾಂತ್ರಿಕರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾರೆ. ರಾಜತಾಂತ್ರಿಕ ಆವರಣಗಳನ್ನು ಹಾನಿಗೊಳಿಸುತ್ತಿದ್ದಾರೆ ಮತ್ತು ಕೆನಡಾದಲ್ಲಿರುವ ಭಾರತೀಯ ಸಮುದಾಯ ಮತ್ತು ಅವರ ಪೂಜಾ ಸ್ಥಳಗಳಿಗೆ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಎಂದು ಮೋದಿ ಹೇಳಿದ್ದರು.
ಪಿಎಂ ಮೋದಿ ಜೊತೆ ನಡೆದ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆನಡಾದ ಪ್ರಧಾನಿ ಟ್ರೂಡೊ ‘ಹಿಂಸಾಚಾರವನ್ನು ತಡೆಗಟ್ಟಲು ಮತ್ತು ದ್ವೇಷದ ಕೃತ್ಯಗಳನ್ನು ತಡೆಗಟ್ಟಲು ಕೆನಡಾ ಯಾವಾಗಲೂ ಸಿದ್ದವಾಗಿರುತ್ತದೆ’ ಎಂದು ಹೇಳಿದರು. ಕೆನಡಾವು ‘ಯಾವಾಗಲೂ ಅಭಿವ್ಯಕ್ತಿ ಸ್ವಾತಂತ್ರ್ಯ, ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಶಾಂತಿಯುತ ಪ್ರತಿಭಟನೆಯ ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ’ ಎಂದು ತಿಳಿಸಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ