ನವದೆಹಲಿ: ಒಬ್ಬ ಸೈನಿಕನು ಮಾಡಬೇಕೆಂದು ನಿರೀಕ್ಷಿಸುವ ಎಲ್ಲವನ್ನೂ ನಾಯಿ ಮಾಡಿದೆ, ಭಯೋತ್ಪಾದಕ ಶೋಧದ ಕಾರ್ಯಾಚರಣೆ ವೇಳೆ ಕೆಂಟ್ ಎಂಬ ಹೆಸರಿನ ಆರು ವರ್ಷದ ಹೆಣ್ಣು ನಾಯಿ ಭಯೋತ್ಪಾದಕರ ಗುಂಡಿನ ದಾಳಿಯಿಂದ ತನ್ನ ಹ್ಯಾಂಡ್ಲರನನ್ನು ಪಾರು ಮಾಡಿ ತಾನು ಪ್ರಾಣ ಅರ್ಪಿಸಿದೆ…
ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ದೂರದ ಹಳ್ಳಿಯೊಂದರಲ್ಲಿ ಮಂಗಳವಾರ ನಡೆದ ಶೋಧ ಕಾರ್ಯಾಚರಣೆಯಲ್ಲಿ ಸೇನಾ ಯೋಧರು ಮತ್ತು ಶಂಕಿತ ಪಾಕಿಸ್ತಾನಿ ಭಯೋತ್ಪಾದಕರ ಗುಂಡಿನ ಚಕಮಕಿಯಲ್ಲಿ ನಾಯಿ ತನ್ನ ಮೇಲ್ವಿಚಾರಕನ ರಕ್ಷಿಸಿ ತಾನು ಪ್ರಾಣ ಬಿಟ್ಟಿದೆ. ಸ್ಥಳದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದ ಭಯೋತ್ಪಾದಕರ ಜಾಡು ಹಿಡಿದ ಸೈನಿಕರ ತಂಡವನ್ನು ಈ ಕೆಂಟ್ ನಾಯಿ ಮುನ್ನಡೆಸುತ್ತಿತ್ತು.
ಸೇನಾ ನಾಯಿ ಕೆಂಟ್ ‘ಆಪರೇಷನ್ ಸುಜಲಿಗಾಲ’ದ ಮುಂಚೂಣಿಯಲ್ಲಿತ್ತು. ಪಲಾಯನ ಮಾಡುತ್ತಿದ್ದ ಭಯೋತ್ಪಾದಕರ ಜಾಡು ಹಿಡಿದು ಹೊರಟ ಸೈನಿಕರ ತಂಡವನ್ನು ಈ ಹೆಣ್ಣು ನಾಯಿ ಮುನ್ನಡೆಸುತ್ತಿತ್ತು. ಆಗ ಭಯೋತ್ಪಾದಕರು ಭಾರೀ ಗುಂಡಿನ ದಾಳಿ ನಡೆಸಿದರು. ಸೇನೆಯ ತನ್ನ ಮೇಲ್ವಿಚಾರಕನನ್ನು ರಕ್ಷಿಸುವಾಗ ಕೆಂಟ್ ತನ್ನ ಪ್ರಾಣವನ್ನು ಅರ್ಪಿಸಿತು ಎಂದು ಸೇನೆಯ ಹೇಳಿಕೆ ತಿಳಿಸಿದೆ.
ನಾರ್ಲಾ ಗ್ರಾಮದಲ್ಲಿ ಶೋಧ ಕಾರ್ಯಾಚರಣೆ ವೇಳೆ ಭಯೋತ್ಪಾದಕರು ಮತ್ತು ಸೈನಿಕರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಜಮ್ಮು ವಲಯ) ಮುಖೇಶ್ ಸಿಂಗ್ ಹೇಳಿದ್ದಾರೆ.
ಗುಂಡಿನ ಚಕಮಕಿಯಲ್ಲಿ ಓರ್ವ ಭಯೋತ್ಪಾದಕ ಮತ್ತು ಓರ್ವ ಸೇನಾ ಯೋಧ ಮೃತಪಟ್ಟಿದ್ದಾರೆ, ಮೂವರು ಭದ್ರತಾ ಸಿಬ್ಬಂದಿ – ಇಬ್ಬರು ಸೇನಾ ಯೋಧರು ಮತ್ತು ಒಬ್ಬ ವಿಶೇಷ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ