ಬೀದರ : ಎಮ್ಮೆ ಕದ್ದು ಪರಾರಿಯಾಗಿದ್ದ ಆರೋಪಿ ಬರೋಬ್ಬರಿ 58 ವರ್ಷಗಳ ನಂತರ ಸಿಕ್ಕಿಬಿದ್ದ….!

ಬೀದರ: ಬರೋಬ್ಬರಿ 58 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಎಮ್ಮೆ ಕಳವು ಪ್ರಕರಣದ ಆರೋಪಿಯನ್ನು ಪೊಲೀಸರು ಕೊನೆಗು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
58 ವರ್ಷಗಳ ಹಿಂದೆ ಎಮ್ಮೆ ಕಳುವು ಮಾಡಿದ್ದ ಆರೋಪಿ ಗಣಪತಿ ವಿಠ್ಠಲ ವಾಗ್ದಾರೆ(77) ಎಂಬಾತನನ್ನು ಮೆಹಕರ್‌ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
1965ರ ಏಪ್ರಿಲ್ 25ರಂದು ಬೀದರಿನ ಮೆಹಕರ್‌ ಪೊಲೀಸ್‌ ಠಾಣೆಯಲ್ಲಿ 2 ಎಮ್ಮೆ 1 ಕರು ಕಳುವಾದ ಬಗ್ಗೆ ಮುರಳೀಧರರಾವ್ ಮಾಣಿಕರಾವ್ ಕುಲಕರ್ಣಿ ಎಂಬವರು ದೂರು ಸಲ್ಲಿಸಿದ್ದರು. ಮಹಾರಾಷ್ಟ್ರದ ಉದಗೀರ್ ಮೂಲದ ಕಿಶನ್ ಚಂದರ್ (30) ಹಾಗೂ ಗಣಪತಿ ವಿಠ್ಠಲ ವಾಗ್ದಾರೆ (20) ಎಂಬವರು ಕಳ್ಳತನ ಮಾಡಿದ್ದರು. ಇವರನ್ನು 1965ರಲ್ಲೇ ಬಂಧಿಸಲಾಗಿತ್ತು. ಆದರೆ ಜಾಮೀನು ಪಡೆದ ಬಳಿಕ ಈ ಆರೋಪಿಗಳು ಕೋರ್ಟ್‌ಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದರು. ಸಮನ್ಸ್ ವಾರಂಟ್ ಜಾರಿ ಮಾಡಿದ್ದರೂ ತಲೆತಪ್ಪಿಸಿಕೊಂಡಿದ್ದರು. ಈ ಪೈಕಿ ಮೊದಲ ಆರೋಪಿ ಕಿಶನ್ ಚಂದರ್‌ 2006 ಏಪ್ರಿಲ್ 11ರಂದು ಮೃತಪಟ್ಟಿದ್ದರಿಂದ ಆತನ ವಿರುದ್ಧವಿದ್ದ ಪ್ರಕರಣ ರದ್ದುಗೊಳಿಸಲಾಗಿತ್ತು.
ಇನ್ನೊಬ್ಬ ಆರೋಪಿ ಗಣಪತಿ ಎಂಬಾತ ತಲೆಮರೆಸಿಕೊಂಡಿದ್ದ. ಆತನ ಹೆಸರು, ಲಾಂಗ್ ಪೆಂಡಿಂಗ್ ರಿಪೋರ್ಟ್‌ಗೆ (ಎಲ್‌ಪಿಆರ್) ಸೇರಿ ಹೋಗಿತ್ತು. ಬೀದರ ಎಸ್‌ಪಿ ಚನ್ನಬಸವಣ್ಣ ಎಸ್.ಎಲ್. ಬಾಕಿ ಇರುವ ಪ್ರಕರಣಗಳ ಕಡತ ಪರಿಶೀಲಿಸಿ ಈ ಪ್ರಕರಣಗಳನ್ನು ಬೇಧಿಸುವಂತೆ ಸೂಚನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ತಂಡ ಕಾರ್ಯಪ್ರವೃತ್ತರಾಗಿ 1965 ರಲ್ಲಿ ನಡೆದ ಕಳ್ಳತನ ಪ್ರಕರಣವನ್ನು 2023ರಲ್ಲಿ ಸುಮಾರು 58 ವರ್ಷಗಳ ಬಳಿಕ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಮೆಹಕರ ಠಾಣೆ ಪಿಎಸ್‌ಐಗಳಾದ ಶಿವಕುಮಾರ ಮತ್ತು ಚಂದ್ರಶೇಖರ, ಎಎಸ್‌ಐ ಅಂಬಾದಾಸ್ಅವರು ಆರೋಪಿಯನ್ನು ಮಹಾರಾಷ್ಟ್ರದ ಲಾತೂರ ಜಿಲ್ಲೆಯ ಲೋಹಾ ತಾಲ್ಲೂಕಿನ ಟಾಕಳಗಾಂವ ಗ್ರಾಮದಲ್ಲಿ ಪತ್ತೆ ಮಾಡಿದ್ದು, ಈಗ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿ ಪತ್ತೆಗೆ ಶ್ರಮಿಸಿದ ಅಧಿಕಾರಿ, ಸಿಬ್ಬಂದಿಗೆ ಪ್ರಶಂಸನಾ ಪತ್ರ ಹಾಗೂ ಬಹುಮಾನ ನೀಡಲಾಗಿದೆ.

ಪ್ರಮುಖ ಸುದ್ದಿ :-   ಎಚ್.ಡಿ ರೇವಣ್ಣ ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲು

 

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement