ತಿರುವನಂತಪುರ: ಕ್ಯಾಥೋಲಿಕ್ ಪಾದ್ರಿಯೊಬ್ಬರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡ ಕೆಲವೇ ಗಂಟೆಗಳಲ್ಲಿ ಅವರನ್ನು ಕ್ಯಾಥೋಲಿಕ್ ಚರ್ಚ್ ನ ವಿಕಾರ್ ಹುದ್ದೆಯಿಂದ ವಜಾಗೊಳಿಸಿರುವ ಘಟನೆ ಇಡುಕ್ಕಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಸೋಮವಾರ (ಅಕ್ಟೋಬರ್ 2) ಇಡುಕ್ಕಿಯ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್.ಅಜಿ ಅವರಿಂದ ಫಾ. ಕುರಿಯಕೋಸೆ ಮಟ್ಟಂ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಸ್ವೀಕರಿಸಿದ್ದರು. ಈ ವಿಷಯ ತಿಳಿದ ಕೂಡಲೇ ಕ್ಯಾಥೋಲಿಕ್ ಧರ್ಮಪ್ರಾಂತ್ಯವು ಫಾ. ಕುರಿಯಕೋಸೆ ಅವರ ವಿರುದ್ಧ ಕ್ರಮ ತೆಗೆದುಕೊಂಡಿದೆ ಎಂದು ವರದಿಯಾಗಿದೆ.
ಆದಿಮಲಿ ಸಮೀಪದ ಮಂಕುವಾ ಸೈಂಟ್ ಥಾಮಸ್ ಚರ್ಚ್ ನಲ್ಲಿ ಫಾದರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಫಾ. ಕುರಿಯಕೋಸೆ ಅವರನ್ನು ತಾತ್ಕಾಲಿಕವಾಗಿ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ ಎಂದು ಚರ್ಚ್ ತಿಳಿಸಿದೆ.
ಚರ್ಚ್ ಪಾದ್ರಿಯಾದವರು ಯಾವುದೇ ರಾಜಕೀಯ ಪಕ್ಷವನ್ನು ಸೇರುವುದಾಗಲಿ ಅಥವಾ ಸಕ್ರಿಯವಾಗಿ ಪಾಲ್ಗೊಳ್ಳುವುದು ಕಾನೂನು ಬಾಹಿರ. ಈ ಹಿನ್ನೆಲೆಯಲ್ಲಿ ಕ್ಯಾನೊನ್ ಕಾನೂನು ಪ್ರಕಾರ ಕುರಿಯಕೋಸೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಚರ್ಚ್ ವಕ್ತಾರರೊಬ್ಬರು ತಿಳಿಸಿದ್ದಾರೆ.
ಮಣಿಪುರ ಹಿಂಸಾಚಾರದ ಬಗ್ಗೆ ಕ್ಯಾಥೋಲಿಕ್ ಚರ್ಚ್ ಬಿಜೆಪಿ ಪಕ್ಷದ ಮೇಲೆ ವಾಗ್ದಾಳಿ ನಡೆಸುತ್ತಿದ್ದ ಸಮಯದಲ್ಲಿ ಪಾದ್ರಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಫೇಸ್ಬುಕ್ ಪೋಸ್ಟ್ನಲ್ಲಿ, ಅಜಿ ಅವರು ಪಾದ್ರಿಯ ಬಿಜೆಪಿ ಸೇರ್ಪಡೆ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಮತ್ತು ದೇಶದಲ್ಲಿ “ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದ” ನಂತರ ಫಾ. ಮಟ್ಟಂ ಬಿಜೆಪಿಗೆ ಸೇರಿದ್ದಾರೆ ಎಂದು ಹೇಳಿದರು.
ಬಿಜೆಪಿ ಸೇರದಿರಲು ಯಾವುದೇ ಕಾರಣ ಸಿಗುತ್ತಿಲ್ಲ ಎಂದು ಪಾದ್ರಿಯವರು ವಿಡಿಯೋದಲ್ಲಿ ಹೇಳಿದ್ದಾರೆ. “ನಾನು ಸಮಕಾಲೀನ ವಿಷಯಗಳನ್ನು ಅನುಸರಿಸುತ್ತೇನೆ. ಬಿಜೆಪಿಗೆ ಸೇರದಿರಲು ನನಗೆ ಯಾವುದೇ ಕಾರಣವಿಲ್ಲ. ನಾನು ಅನೇಕ ಬಿಜೆಪಿ ಕಾರ್ಯಕರ್ತರೊಂದಿಗೆ ಸ್ನೇಹ ಹೊಂದಿದ್ದೇನೆ. ಇಂದು ನಾನು ಸದಸ್ಯತ್ವ ಪಡೆದಿದ್ದೇನೆ. ನಾನು ಪತ್ರಿಕೆಗಳಿಂದ ಓದಿದ್ದೇನೆ ಮತ್ತು ದೇಶದಲ್ಲಿ ಬಿಜೆಪಿಯ ಬಗ್ಗೆ ತಿಳುವಳಿಕೆ ಹೊಂದಿದ್ದೇನೆ ಎಂದು ಪಾದ್ರಿ ಪಟ್ಟಂ ಹೇಳಿದ್ದಾರೆ.
ಮಣಿಪುರ ವಿಚಾರವಾಗಿ ಪಕ್ಷವನ್ನು ಟೀಕಿಸುವವರಿಗೆ ಕ್ರಿಶ್ಚಿಯನ್ ಪಾದ್ರಿಯ ಬಿಜೆಪಿ ಪ್ರವೇಶ ಪ್ರತ್ಯುತ್ತರವಾಗಿದೆ ಎಂದು ಅಜಿ ಹೇಳಿದ್ದಾರೆ
ನಿಮ್ಮ ಕಾಮೆಂಟ್ ಬರೆಯಿರಿ