ದೇಶದ ಉತ್ತರದ ಗಡಿ ತಿರುಚಲು ಯತ್ನ : ಎಫ್‌ಐಆರ್‌ನಲ್ಲಿ ನ್ಯೂಸ್‌ಕ್ಲಿಕ್‌ ಸಂಸ್ಥಾಪಕರ ವಿರುದ್ಧ ಆರೋಪ

ನವದೆಹಲಿ: ನ್ಯೂಸ್‌ಕ್ಲಿಕ್‌ ಸಂಸ್ಥಾಪಕ ಪ್ರಬೀರ್‌ ಪುರಕಾಯಸ್ಥ ಮತ್ತು ಪೋರ್ಟಲ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್‌ ಚಕ್ರವರ್ತಿ ಅವರು ವಿದೇಶಿ ನಿಧಿಯ ಮೂಲಕ ಕೋಟ್ಯಂತರ ರೂಪಾಯಿ ಸ್ವೀಕರಿಸಿದ್ದಾರೆ. ಹಾಗೂ ಅದನ್ನು ಭಾರತದ ಸಮಗ್ರತೆ ಮತ್ತು ಭದ್ರತೆಗೆ ಹಾನಿ ಮಾಡಲು ಬಳಕೆ ಮಾಡಿದ್ದಾರೆ ಎಂದು ದೆಹಲಿ ಪೊಲೀಸ್‌ ವಿಶೇಷ ಘಟಕ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದೆ.
ಎಫ್‌ಐಆರ್‌ನಲ್ಲಿ ಪ್ರಬೀರ್‌, ಚಕ್ರವರ್ತಿ ಸೇರಿ ಇತರರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಭಾರತದಲ್ಲಿರುವ ಮತ್ತು ವಿದೇಶಿ ಸಂಸ್ಥೆಗಳ ಮೂಲಕ ಅಕ್ರಮವಾಗಿ ಭಾರತಕ್ಕೆ ಹಣವನ್ನು ಹರಿಸಲಾಗಿದೆ ಎಂದು ಗುಪ್ತಚರ ಮಾಹಿತಿ ಲಭ್ಯವಾಗಿದೆ. ಈ ನಿಧಿಯು ಕೋಟ್ಯಂತರ ರೂಪಾಯಿಯಷ್ಟಿದ್ದು, ನ್ಯೂಸ್‌ಕ್ಲಿಕ್‌ ಐದು ವರ್ಷಗಳ ಅವಧಿಯಲ್ಲಿ ಅದನ್ನು ಸ್ವೀಕರಿಸಿದೆ ಎಂದು ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಅಲ್ಲದೆ, ಭಾರತದ ಉತ್ತರದ ಗಡಿಯನ್ನು ತಿರುಚಿ, ಅರುಣಾಚಲ ಮತ್ತು ಜಮ್ಮು –ಕಾಶ್ಮೀರ ಭಾರತದ ಭಾಗವಲ್ಲ ಎಂದು ತಿಳಿಸುವ ಯತ್ನವನ್ನು ಆರೋಪಿಗಳು ನಡೆಸಿದ್ದಾರೆ ಎಂದು ಹೇಳಲಾಗಿದೆ.
ಪ್ರಬೀರ್‌ ಮತ್ತು ಇತರರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಮತ್ತು ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಪ್ರಬೀರ್‌ ಪುರ್ಕಾಯಸ್ಥ ಅಮಿತ್‌ ಚಕ್ರವರ್ತಿ ಸೇರಿದಂತೆ ಹಲವರನ್ನು ಎಫ್ಐಆರ್‌ನಲ್ಲಿ ಆರೋಪಿಗಳನ್ನಾಗಿಸಲಾಗಿದೆ.
ನ್ಯೂಸ್‌ಕ್ಲಿಕ್‌ ಷೇರುದಾರರಾದ ನವಲಾಖ ಅವರು ನಿಷೇಧಿತ ನಕ್ಸಲ್‌ ಸಂಘಟನೆಗಳು, ಪಾಕಿಸ್ತಾನದ ಐಎಸ್‌ಐ ಜೊತೆ ಸಂಬಂಧ ಹೊಂದಿರುವವರ ಜೊತೆ ಸಂಪರ್ಕ ಹೊಂದಿದ್ದಾರೆ ಮತ್ತು ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಹೇಳಲಾಗಿದೆ.
ಚೀನಾದ ಕಮ್ಯುನಿಸ್ಟ್‌ ಪಕ್ಷದ ಪ್ರಚಾರ ಇಲಾಖೆಯ ಸಕ್ರಿಯ ಸದಸ್ಯರಾದ ಸಿಂಘಮ್‌ ಮೂಲಕ ವಿವಿಧ ಸಂಸ್ಥೆಗಳ ಜಾಲವನ್ನು ಬಳಸಿ ವಿದೇಶಿ ಮೂಲದಿಂದ ಹಣವನ್ನು ಒಳಹರಿವು ಮಾಡಲಾಗಿದೆ. ಹೀಗೆ ತರಲಾದ ಹಣವನ್ನು ಅಕ್ರಮವಾಗಿ ಬೇರೆ ಮಾರ್ಗಗಳಿಗೆ ಹರಿಸಲಾಗಿದೆ ಎಂದು ಹೇಳಲಾಗಿದೆ.
ಅಲ್ಲದೆ, ಎಫ್‌ಐಆರ್‌ನಲ್ಲಿ ಚೀನಾದ ಕಂಪೆನಿಗಳಾದ ಶಓಮಿ ಮತ್ತು ವಿವೊ ಅಕ್ರಮ ಹಣ ವರ್ಗಾವಣೆ ಕಾಯಿದೆ, ವಿದೇಶಿ ವಿನಿಮಯ ಕಾಯಿದೆಯನ್ನು ಉಲ್ಲಂಘಿಸಿ ಸಾವಿರಾರು ಷೆಲ್‌ ಕಂಪೆನಿಗಳನ್ನು ಸೃಷ್ಟಿಸಿವೆ ಎಂದೂ ಆರೋಪಿಸಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ | ಜನವರಿಯಲ್ಲಿ ಉದ್ಘಾಟನೆಯಾದ ನಂತರ ಅಯೋಧ್ಯೆ ರಾಮಮಂದಿರದಲ್ಲಿ ಇದೇ ಮೊದಲ ಬಾರಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ

ಎಫ್‌ಐಆರ್‌ನಲ್ಲಿರುವ ಕೆಲವು ಅಂಶಗಳು…
ಭಾರತದ ಉತ್ತರದ ಗಡಿಯನ್ನು ತಿರುಚಿ, ಅರುಣಾಚಲ ಮತ್ತು ಜಮ್ಮು –ಕಾಶ್ಮೀರ ಭಾರತದ ಭಾಗವಲ್ಲ ಎಂದು ತಿಳಿಸುವ ಯತ್ನವನ್ನು ಆರೋಪಿಗಳು ನಡೆಸಿದ್ದಾರೆ.
ಅಲ್ಲದೆ, ದೇಶದೊಳಗಿನ ಸೇವೆಗಳು ಹಾಗೂ ಪೂರೈಕೆ ಜಾಲಗಳಲ್ಲಿ ಸಮಸ್ಯೆ ಉಂಟು ಮಾಡಲು ಯತ್ನ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ರೈತರ ಹೋರಾಟಕ್ಕೆ ಬೆಂಬಲಿಸಲು ವಿದೇಶಿ ನಿಧಿ ಪಡೆದಿರುವುದು. ಆಂತರಿಕವಾಗಿ ಕಾನೂನು ಸುವ್ಯವಸ್ಥೆ ಇತರೆ ಸಮಸ್ಯೆಗಳ ಸೃಷ್ಟಿಗೆ ಯತ್ನಿಸಲಾಗಿದೆ. ಕೋವಿಡ್‌ ನಿಯಂತ್ರಿಸಲು ಭಾರತ ಸರ್ಕಾರ ವಿಫಲವಾಗಿದೆ ಎಂದು ನಕಲಿ ಕಥನದ ಸೃಷ್ಟಿ ಮಾಡಲು ಪ್ರಯತ್ನ ನಡೆಸಲಾಗಿದೆ. ಹಾಗೂ ಚೀನಾದಿಂದ ಹಣ ಪಡೆದು ಆಂತರಿಕ ವಿಚಾರಗಳ ಕುರಿತು ಕಾಸಿಗಾಗಿ ಸುದ್ದಿ ಪ್ರಕಟ ಮಾಡಲಾಗಿದೆ ಎಂದು ಎಫ್‌ಐಆರ್‌ ನಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಜನರ ಒಕ್ಕೂಟ (ಪಿಎಡಿಎಸ್‌) ಜೊತೆಗೂಡಿ ಪ್ರಬೀರ್‌ ಪುರ್ಕಾಯಸ್ಥ ಅವರು 2019ರ ಲೋಕಸಭಾ ಚುನಾವಣಾ ಪ್ರಕ್ರಿಯೆಯನ್ನು ದಿಕ್ಕುತಪ್ಪಿಸಲು ಪಿತೂರಿ ನಡೆಸಿದ್ದರು ಎಂದೂ ಆರೋಪಿಸಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement