ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್ನ ಕಾಲೇಜೊಂದರ ನೂತನ ವಿದ್ಯಾರ್ಥಿಗಳ ಪ್ರವೇಶ ಸಮಾರಂಭದಲ್ಲಿ ‘ಜೈ ಶ್ರೀರಾಮ’ ಎಂದು ವೇದಿಕೆಯಲ್ಲಿ ಹೇಳಿದ್ದ ವಿದ್ಯಾರ್ಥಿಯನ್ನು ಅಲ್ಲಿಂದ ನಿರ್ಗಮಿಸುವಂತೆ ಸೂಚಿಸಿದ ವಿವಾದದ ಪ್ರಕರಣದಲ್ಲಿ ಇಬ್ಬರು ಪ್ರಾಧ್ಯಾಪಕಿಯರನ್ನು ಅಮಾನತು ಮಾಡಲಾಗಿದೆ.
ಎಬಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಪ್ರಕರಣದ ಸಂಬಂಧ ನೇಮಿಸಲಾಗಿದ್ದ, ತನಿಖಾ ಸಮಿತಿ ಸಲ್ಲಿಸಿದ ವರದಿ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಎಬಿಇಎಸ್ ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಸಂಜಯಕುಮಾರ ಸಿಂಗ್ ವೀಡಿಯೊ ಹೇಳಿಕೆಯಲ್ಲಿ ದೃಢಪಡಿಸಿದ್ದಾರೆ. ಮಮತಾ ಗೌತಮ ಮತ್ತು ಶ್ವೇತಾ ಶರ್ಮಾ ಎಂಬ ಇಬ್ಬರು ಪ್ರಾಧ್ಯಾಪಕಿಯರನ್ನು ಅಮಾನತು ಮಾಡಲಾಗಿದೆ.
“ವೀಡಿಯೊ ನಿನ್ನೆ ನನ್ನ ಗಮನಕ್ಕೆ ಬಂದಿತ್ತು. ಅದರ ನಂತರ ತನಿಖಾ ಸಮಿತಿಯನ್ನು ರಚಿಸಿ ವರದಿ ಸಲ್ಲಿಸುವಂತೆ ಅದಕ್ಕೆ ಸೂಚಿಸಲಾಗಿತ್ತು. ವರದಿ ಆಧಾರದಲ್ಲಿಆಧಾರದಲ್ಲಿ ಇಬ್ಬರು ಬೋಧಕ ಸಿಬ್ಬಂದಿಯನ್ನು ತಕ್ಷಣದಿಂದಲೇ ಜಾರಿಯಾಗುವಂತೆ ಅಮಾನತು ಮಾಡಲಾಗಿದೆ” ಎಂದು ಅವರು ತಿಳಿಸಿದ್ದಾರೆ.
ಗಾಜಿಯಾಬಾದ್ನ ಎಬಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಉತ್ಸವ ವೇಳೆ ವೇದಿಕೆಯಲ್ಲಿ ‘ಜೈ ಶ್ರೀರಾಮ’ ಎಂದು ಹೇಳಿದ್ದಕ್ಕೆ ವಿದ್ಯಾರ್ಥಿಯನ್ನು ಪ್ರಶ್ನಿಸಿದ್ದ ಪ್ರೊಫೆಸರ್ ಒಬ್ಬರು, ಆತನ ಪ್ರದರ್ಶನ ನೀಡುವ ಮುನ್ನವೇ ವೇದಿಕೆಯಿಂದ ನಿರ್ಗಮಿಸುವಂತೆ ಸೂಚಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೊದಲ್ಲಿ ಕಂಡುಬಂದಿತ್ತು.
ಇದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿತ್ತು. ಕೂಡಲೇ ಎಚ್ಚೆತ್ತ ಪೊಲೀಸರು ಕಾಲೇಜಿನಲ್ಲಿ ಭಾರಿ ಭದ್ರತೆ ನಿಯೋಜಿಸಿದ್ದರು. ಕಾಲೇಜು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಗಳು ಕೇಳಿಬಂದಿದ್ದವು. ಈ ವಿಷಯದ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಸೂಕ್ತ ಕ್ರಮ ಜರುಗಿಸುವುದಾಗಿ ಪೊಲೀಸರು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ