ಗುರುದಾಸಪುರ: ಜಾತ್ರೆಯಲ್ಲಿ ಏರ್ಪಡಿಸಿದ್ದ ಗ್ರಾಮೀಣ ಸ್ಪರ್ಧೆಯಲ್ಲಿ ತನ್ನ ಟ್ರ್ಯಾಕ್ಟರ್ ಬಳಸಿಕೊಂಡು ಸಾಹಸ ಪ್ರದರ್ಶಿಸುತ್ತಿದ್ದ 29 ವರ್ಷದ ವ್ಯಕ್ತಿಯೊಬ್ಬ ಆಯತಪ್ಪಿ ವಾಹನ ಚಕ್ರದಡಿಗೆ ಸಿಲುಕಿ ಮೃತಪಟ್ಟ ಘಟನೆ ಪಂಜಾಬ್ನ ಗುರುದಾಸಪುರದ ಬಟಾಲಾದಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ.
ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಸುಖಮನ್ದೀಪ್ ಸಿಂಗ್ ಎಂದು ಗುರುತಿಸಲಾಗಿದ್ದು, ಜಾತ್ರೆಯಲ್ಲಿ ತಮ್ಮ ಟ್ರ್ಯಾಕ್ಟರ್ ಬಳಸಿಕೊಂಡು ಮಾಡುತ್ತಿದ್ದ ಸಾಹಸ ಪ್ರದರ್ಶನದ ವೇಳೆ ಈ ದುರಂತ ಸಂಭವಿಸಿದೆ. ಈ ದುರ್ಘಟನೆಯ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ.
ಗುರುದಾಸಪುರದ ಬಟಾಲಾದ ಸರಚೂರು ಗ್ರಾಮದ ಕ್ರೀಡಾ ಮೈದಾನದಲ್ಲಿ ನಡೆಯುತ್ತಿದ್ದ ಜಾತ್ರೆಯಲ್ಲಿ ಸಾಹಸ ಪ್ರದರ್ಶಿಸಲು ಬಂದಿದ್ದ ಸುಖಮನ್ದೀಪ್ ಸಿಂಗ್ ತಮ್ಮ ಟ್ರ್ಯಾಕ್ಟರ್ನೊಂದಿಗೆ ಸ್ಟಂಟ್ ಮಾಡುತ್ತಿದ್ದಾಗ ಟ್ರಾಕ್ಟರ್ನ ಮುಂಭಾಗದ ಚಕ್ರಗಳನ್ನು ಮೇಲಕ್ಕೆತ್ತಿ, ಹಿಂಬದಿಯ ಟೈರ್ಗಳನ್ನು ನೆಲದ ಮೇಲೆ ಒತ್ತಿದ್ದಾರೆ. ತದನಂತರ ಟ್ರ್ಯಾಕ್ಟರ್ ಜತೆಗೆ ಓಡಿದ್ದಾರೆ. ಈ ಸಾಹಸ ಮಾಡುವಾಗ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಜನರತ್ತ ಚಲಿಸಲು ಮುಂದಾಗಿದೆ. ಆಗ ಸುಖಮನ್ದೀಪ್ ಅದನ್ನು ನಿಯಂತ್ರಣಕ್ಕೆ ತರಲು ಟ್ರ್ಯಾಕ್ಟರ್ ಬಳಿ ಬಂದಾಗ, ಆಯತಪ್ಪಿ ಚಕ್ರದ ಕೆಳಗೆ ಸಿಲುಕಿಕೊಂಡಿದ್ದಾರೆ.
ಸಮೀಪದಲ್ಲೇ ಇದ್ದ ಇಬ್ಬರು ಟ್ರ್ಯಾಕ್ಟರ್ ಅಡಿಯಲ್ಲಿ ಸಿಲುಕಿದ್ದ ಸುಖಮನ್ದೀಪ್ ಸಿಂಗ್ ಅವರನ್ನು ಬಚಾವ್ ಮಾಡುವಷ್ಟರಲ್ಲಿಯೇ ಅವರು ಮೃತಪಟ್ಟಿದ್ದರು.
ಈ ದುರಂತ ಸಂಭವಿಸಿದ ಕೂಡಲೇ ಜಾತ್ರೆ ಆಯೋಜಿಸಿದ್ದ ಆಡಳಿತವು ಮೇಳವನ್ನು ಅಂತ್ಯಗೊಳಿಸುವುದಾಗಿ ಘೋಷಿಸಿತು. ಫತೇಘರ್ ಚುರಿಯನ್ ನಿವಾಸಿಯಾದ ಸುಖಮನ್ದೀಪ್ ಸಿಂಗ್, ಅವರ ಪೋಷಕರ ಏಕೈಕ ಪುತ್ರರಾಗಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ