
ಬೆಂಗಳೂರು: ಬೆಂಗಳೂರಿನ ಹೋಪ್ ಫಾರ್ಮ್ ಬಳಿಯ ಪಾದಾಚಾರಿ ಮಾರ್ಗದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ 23 ವರ್ಷದ ಮಹಿಳೆ ಮತ್ತು ಆಕೆಯ ಒಂಬತ್ತು ತಿಂಗಳ ಮಗಳು ದಾರುಣವಾಗಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮೃತರನ್ನು ಎಕೆಜಿ ಕಾಲೋನಿ ನಿವಾಸಿಗಳಾದ ಸೌಂದರ್ಯ ಮತ್ತು ಸುವೀಕ್ಷಾ ಎಂದು ಗುರುತಿಸಲಾಗಿದೆ. ಭಾನುವಾರ ಮುಂಜಾನೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ, ಸೌಂದರ್ಯ ಮತ್ತು ಅವರ ಒಂಬತ್ತು ತಿಂಗಳ ಮಗಳು ಸುವೀಕ್ಷಾ ತಮಿಳುನಾಡಿನಿಂದ ಮರಳಿದ ನಂತರ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ.

ತಮಿಳುನಾಡಿನಿಂದ ಬೆಂಗಳೂರಿಗೆ ಬಂದಿದ್ದ ತಾಯಿ ಹಾಗೂ ಮಗಳು, ವೈಟ್ ಫೀಲ್ಡ್ ನ ಕಾಡುಗೋಡಿಯಲ್ಲಿ ಬಸ್ ಇಳಿದು ನಡೆದುಕೊಂಡು ಮನೆಗೆ ತೆರಳುತ್ತಿದ್ದರು. ಈ ವೇಳೆ ರಸ್ತೆ ಮೇಲೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದಿದ್ದಾರೆ. ಕ್ಷಣಾರ್ಧದಲ್ಲಿ ವಿದ್ಯುತ್ ಪ್ರವಹಿಸಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೌಂದರ್ಯ ಪತಿ ಪ್ರಯತ್ನ ಪಟ್ಟರೂ ಅವರಿಬ್ಬರನ್ನು ಪಾರು ಮಾಡಲು ಸಾಧ್ಯವಾಗಲಿಲ್ಲ, ಅವರಿಗೆ ವಿದ್ಯುತ್ ಸ್ಪರ್ಶದಿಂದ ಗಾಯವಾಗಿದೆ ಎಂದು ಹೇಳಲಾಗಿದೆ. ಘಟನಾ ಸ್ಥಳದಲ್ಲಿ ಅವರ ಲಗೇಜ್, ಟ್ರಾಲಿ ಬ್ಯಾಗ್ ಮತ್ತು ವೈಯಕ್ತಿಕ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಎಂದು ಮೂಲಗಳು ತಿಳಿಸಿವೆ.
ನಿರ್ಲಕ್ಷ್ಯದ ಪ್ರಕರಣ ದಾಖಲು..
ಕಾಡುಗೋಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಮುಂದಿನ ಕ್ರಮಕ್ಕಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯದ ಪ್ರಕರಣ ದಾಖಲಿಸಲಾಗಿದೆ.
‘ಎಕ್ಸ್’ ಪೋಸ್ಟ್ನಲ್ಲಿ, ಬೆಂಗಳೂರು ಸೆಂಟ್ರಲ್ನ ಸಂಸದ ಪಿ.ಸಿ. ಮೋಹನ ಅವರು, “ಹೋಪ್ ಫಾರ್ಮ್ ಜಂಕ್ಷನ್ನಲ್ಲಿ ಯುವತಿಯೊಬ್ಬರು ವಿದ್ಯುತ್ ಆಘಾತದಿಂದ ಮೃತಪಟ್ಟ ಘಟನೆ ಹೃದಯ ವಿದ್ರಾವಕವಾಗಿದೆ ಮತ್ತು ಬೆಸ್ಕಾಂ ತಡೆಗಟ್ಟುವ ಕ್ರಮಗಳನ್ನು ಅನುಸರಿಸಬೇಕಾದ ತುರ್ತುಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಇಂತಹ ಘಟನೆಗಳನ್ನು ತಪ್ಪಿಸಲು ಮತ್ತು ಸುರಕ್ಷಿತ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ಬೆಸ್ಕಾಂನ ಜವಾಬ್ದಾರಿಯು ನಿರ್ಣಾಯಕವಾಗಿದೆ ಎಂದು ಹೇಳಿದ್ದಾರೆ.
ವೈಟ್ಫೀಲ್ಡ್ ರೈಸಿಂಗ್ ಸಂಘಟನೆ ಈ ಬಗ್ಗೆ ಟ್ವೀಟ್ ಮಾಡಿ, ಕಾಲು ದಾರಿಯಲ್ಲಿ ಲೈವ್ ವೈರ್ ಬಂದಿದ್ದಾರದೂ ಹೇಗೆ? ಬಸ್ ನಿಲ್ದಾಣದ ಪಕ್ಕದಲ್ಲಿರುವ ಈ ಪಾದಾಚಾರಿ ಮಾರ್ಗದಲ್ಲಿ ಸಾವಿರಾರು ಜನ ಸಂಚರಿಸುತ್ತಾರೆ. ಮೆಟ್ರೋ ನಿಲ್ದಾಣ ಸ್ವಲ್ಪ ದೂರದಲ್ಲಿಯೇ ಇದೆ. ಈ ನಿರ್ಲಕ್ಷ್ಯವು ಕ್ರಿಮಿನಲ್ ಪ್ರಕರಣಕ್ಕೆ ಸಮಾನವಾದದ್ದು ಎಂದು ಹೇಳಿದೆ.


ನಿಮ್ಮ ಕಾಮೆಂಟ್ ಬರೆಯಿರಿ