ತಿರುವನಂತಪುರಂ: ಕ್ರೀಡಾ ಅಕಾಡೆಮಿಯಲ್ಲಿ ಪಾಲುದಾರನಾಗುವುದಾಗಿ ಭರವಸೆ ನೀಡಿ ವ್ಯಕ್ತಿಯೊಬ್ಬರಿಂದ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಮಾಜಿ ಕ್ರಿಕೆಟಿಗ ಶ್ರೀಶಾಂತ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.
ರೆಸಾರ್ಟ್ನಲ್ಲಿ ದೂರುದಾರರ ಹೆಸರಿನಲ್ಲಿ ಕಟ್ಟಡ ನಿರ್ಮಿಸುವುದಾಗಿ ಹೇಳಿ ಉಡುಪಿ ಮೂಲದ ರಾಜೀವಕುಮಾರ ಮತ್ತು ಕೆ ವೆಂಕಟೇಶ ಕಿಣಿ ಎಂಬವರು 18.70 ಲಕ್ಷ ರೂ.ಗಳನ್ನು ಪಡೆದು ಮೋಸ ಮಾಡಿದ್ದಾರೆ ಎಂದು ಕಣ್ಣೂರು ಮೂಲದ ಸರಿಘ್ ಬಾಲಗೋಪಾಲನ್ ಎಂಬವರು ಸಲ್ಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ. ದೂರಿನಲ್ಲಿ ಆರೋಪಿಗಳು ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿ ಕ್ರೀಡಾ ಅಕಾಡೆಮಿ ನಿರ್ಮಾಣ ಮಾಡುವುದಾಗಿ ಹೇಳಿಕೊಂಡು 2019 ರಿಂದ ವಿವಿಧ ದಿನಾಂಕಗಳಲ್ಲಿ ಹಣ ಪಡೆದಿದ್ದಾರೆ. ಇದುವರೆಗೆ ಸುಮಾರು 18.70 ಲಕ್ಷ ರೂ. ಹಣ ಪಡೆದಿದ್ದಾರೆ.
ಕ್ರಿಕೆಟರ್ ಶ್ರೀಶಾಂತ್, ರಾಜೀವಕುಮಾರ ಮತ್ತು ವೆಂಕಟೇಶ್ ಕಿಣಿ ಅವರ ವಿರುದ್ಧ ಐಪಿಸಿ ಸೆಕ್ಷನ್ 420 ಅಡಿಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ವಂಚನೆ ಪ್ರಕರಣದಲ್ಲಿ ಶ್ರೀಶಾಂತ್ ಅವರನ್ನು ಮೂರನೇ ಆರೋಪಿ ಎಂದು ಉಲ್ಲೇಖಿಸಲಾಗಿದೆ. ಶ್ರೀಶಾಂತ್ ಮತ್ತು ಇತರ ಇಬ್ಬರು ಕ್ರೀಡಾ ಅಕಾಡೆಮಿಯ ಕಟ್ಟಡದ ನಿರ್ಮಾಣವನ್ನು ಪ್ರಾರಂಭಿಸಲಿಲ್ಲ ಅಥವಾ ಹಣವನ್ನು ಹಿಂದಿರುಗಿಸಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆಗೆ ಪ್ರೇರೇಪಿಸಿದಕ್ಕಾಗಿ ಐಪಿಸಿ ಸೆಕ್ಷನ್ 420 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಕ್ಟೋಬರ್ 2005 ರಲ್ಲಿ ಏಕದಿನದ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಎಸ್. ಶ್ರೀಶಾಂತ್ 53 ಏಕದಿನದ ಪಂದ್ಯಗಳನ್ನು ಆಡಿದರು ಮತ್ತು 75 ವಿಕೆಟ್ ಗಳನ್ನು ಪಡೆದಿದ್ದಾರೆ. ಅವರು ಮಾರ್ಚ್ 2006 ರಲ್ಲಿ ಟೆಸ್ಟ್ಗೆ ಪಾದಾರ್ಪಣೆ ಮಾಡಿದರು ಮತ್ತು 27 ಪಂದ್ಯಗಳಲ್ಲಿ 87 ವಿಕೆಟ್ಗಳನ್ನು ಪಡೆದಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ