ನವದೆಹಲಿ: ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ತಂಬಾಕು ವಿರೋಧಿ ಎಚ್ಚರಿಕೆ ಸಂದೇಶ ಪ್ರದರ್ಶಿಸುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ವಕೀಲರೊಬ್ಬರನ್ನು ದೆಹಲಿ ಹೈಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿದ್ದು ಎರಡು ದಿನಗಳಲ್ಲಿ ವಿಷಾದ ಸೂಚಿಸಿ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿದೆ.
ಎರಡು ದಿನಗಳಲ್ಲಿ, ಕ್ಷಮೆಯಾಚಿಸಿರುವ ಪ್ರಮಾಣಪತ್ರ ಸಲ್ಲಿಸುವಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರಿದ್ದ ಪೀಠ ಸೂಚಿಸಿತು ಎಂದು ಬಾರ್ & ಬೆಂಚ್ ವರದಿ ಮಾಡಿದೆ.
“ನಡೆದಿರುವುದಕ್ಕೆ ಅವರು ವಿಷಾದ ಸೂಚಕ ಅಫಿಡವಿಟ್ ಸಲ್ಲಿಸಬೇಕು ತದನಂತರ ನಾವು ಈ ಅವಲೋಕನಗಳನ್ನು ತೆಗೆದುಹಾಕುತ್ತೇವೆ ಎಂದು ನ್ಯಾಯಾಲಯ ಹೇಳಿದೆ.
ಈ ಹಿಂದೆ ತಮ್ಮ ಅರ್ಜಿ ವಜಾಗೊಳಿಸಿದ್ದ ಏಕಸದಸ್ಯ ಪೀಠದ ಅಭಿಪ್ರಾಯ ಪ್ರಶ್ನಿಸಿ ವಕೀಲ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
“ಈ ವ್ಯಕ್ತಿ ತಿದ್ದಿಕೊಳ್ಳುವ ಅಗತ್ಯವಿದೆ. ಏಕ ಸದಸ್ಯ ಪೀಠ ಹೇಳಿರುವುದು ಸಂಪೂರ್ಣ ಸರಿಯಾಗಿದೆ. ಈ ಅರ್ಜಿಯನ್ನು ಸಲ್ಲಿಸಲೇಬಾರದಿತ್ತು” ಎಂದು ವಿಭಾಗೀಯ ಪೀಠ ಹೇಳಿದೆ.
ವಿಚಾರಣೆ ವೇಳೆ ತಂಬಾಕು ಉದ್ಯಮಕ್ಕೆ ಸಹಾಯ ಮಾಡಲು ಅರ್ಜಿ ಸಲ್ಲಿಸಲಾಗಿದೆ ಎಂದು ವಿಭಾಗೀಯ ಪೀಠ ಟೀಕಿಸಿದಾಗ ವಕೀಲರು ಅದು ನಿಜವಲ್ಲ ಎಂದು ಸಮರ್ಥಿಸಿಕೊಂಡರು. ಆಗ ನ್ಯಾಯಾಲಯ “ಪ್ರತಿಯೊಬ್ಬರಿಗೂ ಸ್ವಲ್ಪ ಬುದ್ಧಿಮತ್ತೆ ಇರುತ್ತದೆ. ಮತ್ತೊಬ್ಬರಿಗೆ ಏನೂ ಅರ್ಥವಾಗುವುದಿಲ್ಲ ಎಂಬ ತಪ್ಪು ಕಲ್ಪನೆಯಲ್ಲಿರಬಾರದು ಎಂದು ಹೇಳಿತು. ಕ್ಯಾನ್ಸರ್ ಹರಡುತ್ತಿದೆ ಮತ್ತು ಕ್ಯಾನ್ಸರ್ ಹೇಗೆ ಹರಡುತ್ತಿದೆ ಎಂಬುದರ ಬಗ್ಗೆ ಜನರಿಗೆ ಅರಿವು ಮೂಡಿಸದಿದ್ದರೆ, ಯುವ ಪೀಳಿಗೆ ಅದರ ಬಗ್ಗೆ ತಿಳಿವಳಿಕೆ ಹೊಂದುವುದಿಲ್ಲ ಎಂದು ನ್ಯಾಯಾಲಯ ಹೇಳಿತು.
“ಜಾಹೀರಾತಿನಲ್ಲಿ ಅವರು ತೋರಿಸುತ್ತಿರುವುದು ನೈಜ ವಾಸ್ತವ” ಎಂದು ನ್ಯಾಯಮೂರ್ತಿ ಮನಮೋಹನ್ ಹೇಳಿದರು. ಅರ್ಜಿ ಸಲ್ಲಿಸಿದ್ದಕ್ಕಾಗಿ ವಿಷಾದದ ಅಫಿಡವಿಟ್ ಸಲ್ಲಿಸುವುದಾಗಿ ಮೇಲ್ಮನವಿದಾರನನ್ನು ಪ್ರತಿನಿಧಿಸಿದ ವಕೀಲರು ಹೇಳಿದರು. ಈ ಹಿನ್ನೆಲೆಯಲ್ಲಿ ಪೀಠ ಪ್ರಕರಣದ ವಿಚಾರಣೆಯನ್ನು ಪೀಠ ಡಿ. 7ಕ್ಕೆ ನಿಗದಿಪಡಿಸಿತು.
ವಕೀಲರ ಅರ್ಜಿ ವಜಾಗೊಳಿಸಿದ್ದ ಏಕಸದಸ್ಯ ಪೀಠವು ತಂಬಾಕಿನ ವಿರುದ್ಧ ಸರ್ಕಾರ ಮೂಡಿಸುವ ಜಾಗೃತಿ ತಡೆಯಲು ಬಯಸುವ ಅರ್ಜಿಯು ತಂಬಾಕು ಉದ್ಯಮದ ಲಾಬಿಯಿಂದ ಬೆಂಬಲಿತವಾಗಿದೆ ಎಂದು ಹೇಳಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ