ಬೆಂಗಳೂರು: ಮನೆ ಮುಂದೆ ಆಟವಾಡುತ್ತಿದ್ದ ಮಗುವೊಂದು ಆಕಸ್ಮಾತ್ ಆಗಿ ನೀರಿನ ಸಂಪ್ಗೆ ಬಿದ್ದು ಮೃತಪಟ್ಟ ಘಟನೆ ನಗರದ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮೃತ ಮಗುವನ್ನು ಬಾಗಲಗುಂಟೆಯ ಬಾಗಲಗುಂಟೆಯ ಸೈಯದ್ ಹುಸೇನ್ ಪುತ್ರಿ ಸಾಯಿದಾ(5) ಎಂದು ಗುರುತಿಸಲಾಗಿದೆ. ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಮನೆ ಎದುರು ಆಟವಾಡುತ್ತಿದ್ದಾಗ ಬಾಗಿಲು ತೆರೆದಿದ್ದ ಸಂಪ್ಗೆ ಬಿದ್ದು ನೀರಿನಲ್ಲಿ ಮುಳುಗಿ ತೀವ್ರವಾಗಿ ಅಸ್ವಸ್ಥಗೊಂಡಿತ್ತು, ತಕ್ಷಣವೇ ಮಗುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ತಡರಾತ್ರಿ ಮಗು ಮೃತಪಟ್ಟಿದೆ ಎಂದು ಹೇಳಲಾಗಿದೆ.
ಚಿತ್ರದುರ್ಗ ಮೂಲದ ಗಾರೆ ಕೆಲಸ ಮಾಡುವ ಸೈಯದ್ ಕೆಲ ವರ್ಷಗಳಿಂದ ಕುಟುಂಬದ ಜತೆ ಬಾಗಲಗುಂಟೆಯಲ್ಲಿ ವಾಸವಾಗಿದ್ದಾರೆ. ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಕುಟುಂಬದ ಸದಸ್ಯರು ಮನೆಯಲ್ಲಿ ಊಟ ಮಾಡುತ್ತಿದ್ದಾಗ ಮಗು ಆಟವಾಡಲು ಮನೆಯಿಂದ ಹೊರಗೆ ಬಂದಿದ್ದಾಳೆ. ಈ ವೇಳೆ ಮನೆ ಎದುರಿನ ಸಂಪ್ ಬಾಗಿಲು ತೆರೆದಿತ್ತು. ಆಟವಾಡುತ್ತ ಬಂದ ಮಗು ಬಿದ್ದು ಮುಳುಗಿದೆ.
ಆಕೆಯ ತಾತ ಮನೆಯಿಂದ ಹೊರಗೆ ಬಂದಿದ್ದು, ಸಾಯಿದಾ ಕಾಣಿಸದ್ದಕ್ಕೆ ಹುಡುಕಾಡಿದ್ದಾರೆ. ಬಳಿಕ ಸಂಪ್ ಬಳಿ ಬಂದು ನೋಡಿದಾಗ ಸಾಯಿದಾ ನೀರಿನಲ್ಲಿ ಬಿದ್ದಿರುವುದು ಗೊತ್ತಾಗಿದೆ.. ತಕ್ಷಣವೇ ಮಗುವನ್ನು ಮೇಲಕ್ಕೆತ್ತಿ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಸಾಯಿದಾ ಮೃತಪಟ್ಟಿದ್ದಾಳೆ ಎಂದು ಹೇಳಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ