ಬೆಳಗಾವಿ : ಬೆಳಗಾವಿ ಪ್ರವೇಶಿಸುವ ಕೋಟೆ ಕೆರೆಯ ದಡದಲ್ಲಿ ಕುಳಿತಿದ್ದವರನ್ನು ಶೆಡ್ ನೊಳಗೆ ಕೂಡಿಹಾಕಿ ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಗಾಂಜಾ ನಶೆಯಲ್ಲಿ ಏಳು ಜನ ಅನ್ಯಕೋಮಿನ ಯುವಕರು ಸೇರಿ ಕೃತ್ಯ ಎಸಗಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಹೊರವಲಯದ ಯಮನಪುರದ ಸಚಿನ್ ಲಮಾಣಿ (22), ಮುಸ್ಕಾನ್ ಪಟೇಲ್ (23) ಹಲ್ಲೆಗೊಳಗಾದವರು.
ಮುಸ್ಕಾನ್ ರಾಜ್ಯ ಸರ್ಕಾರದ ಯುವ ನಿಧಿ ಯೋಜನೆಯ ಅರ್ಜಿ ಸಲ್ಲಿಸಲು ಸಹೋದರನ ಜೊತೆಗೆ ಬೆಳಗಾವಿಗೆ ಆಗಮಿಸಿದ್ದರು. ಸರ್ವರ್ ಸಮಸ್ಯೆ ಇದೆ ಮಧ್ಯಾಹ್ನ 3 ಗಂಟೆಗೆ ಬನ್ನಿ ಎಂದು ಸೇವಾ ಕೇಂದ್ರದ ಸಿಬ್ಬಂದಿ ಹೇಳಿದ್ದಾರೆ. ಇದೇ ಕಾರಣಕ್ಕೆ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಕೋಟೆ ಕೆರೆ ದಡದಲ್ಲಿ ಕುಳಿತಿದ್ದ ಇವರನ್ನು ಅನ್ಯಕೋಮಿನ ಯುವಕರು ಥಳಿಸಿದ್ದಾರೆ. ಮುಸ್ಲಿಂ ಹುಡುಗಿ ಜೊತೆ ಏಕೆ ಕುಳಿತಿದ್ದಿಯಾ ಎಂದು ಯುವಕನ ಜೊತೆ ಜಗಳ ತೆಗದಿರುವ ಯುವಕರು ಮನಬಂದಂತೆ ಥಳಿಸಿದ್ದಾರೆ. ಆಗ ಅವರು ನಾವು ಪ್ರೇಮಿಗಳಲ್ಲ ಅಕ್ಕ-ತಮ್ಮ ಎಂದು ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ. ಆದರೂ ಅವರು ಕೇಳಲಿಲ್ಲ ಎಂದು ಹೇಳಿದ್ದಾರೆ. ನಂತರ ಸಚಿನ್ ತನ್ನ ಚಿಕ್ಕಪ್ಪನಿಗೆ ಫೋನ್ ಮಾಡಿದ್ದಾನೆ. ಅಲ್ಲದೇ ಅವರ ಚಿಕ್ಕಪ್ಪನಿಗೆ ಫೋನ್ ಮಾಡಿ ಮನವರಿಕೆ ಮಾಡಲು ಯತ್ನಿಸಿದ್ದಾರೆ. ಆದರೆ ದುಷ್ಕರ್ಮಿಗಳು ಸಚಿನ್ನ ಫೋನ್ ಕಸಿದುಕೊಂಡು ಸ್ವಿಚ್ ಆಫ್ ಮಾಡಿ ಕೋಟೆ ಕೆರೆ ಪಕ್ಕದಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ್ದಾರೆ.
ಕೆಲ ಹೊತ್ತಿನ ಬಳಿಕ ಸಚಿನ್ ಚಿಕ್ಕಪ್ಪ ಸಚಿನ್ನ ಮೊಬೈಲ್ಗೆ ಮತ್ತೆ ಫೋನ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮೊಬೈಲ್ ಸ್ವಿಚ್ ಆಗಿದ್ದು ತಕ್ಷಣವೇ ಸಚಿನ್ ಪೋಷಕರು ಎಪಿಎಂಸಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಮತ್ತೊಂದೆಡೆ ಕೋಟೆಕೆರೆ ಸುತ್ತಲೂ ಸಚಿನ್ -ಮುಸ್ಕಾನ್ ಗಾಗಿ ಸಚಿನ್ ಅವರ ಚಿಕ್ಕಪ್ಪ ವಾಲಪ್ಪ ಲಮಾಣಿ ಹುಡುಕಾಟ ನಡೆಸಿದ್ದಾರೆ. ಆಗ ಕಿರುಚಾಟದ ಶಬ್ದ ಕೇಳಿ ಸಚಿನ್ ಚಿಕ್ಕಪ್ಪ ಅಲ್ಲಿಗೆ ನುಗ್ಗಿದ್ದಾರೆ. ಅಲ್ಲಿ ದೃಶ್ಯ ಬೆಳಕಿಗೆ ಬಂದಿದೆ. ವಾಲಪ್ಪ ಅವರು ಇಬ್ಬರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ವಾಲಪ್ಪ ಲಮಾಣಿ ಅವರು ಮಾರ್ಕೆಟ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಬೆಳಗಾವಿ ಮಾರ್ಕೆಟ್ ಪೊಲೀಸರು ಆರೋಪಿಗಳಿಗೆ ಶೋಧಕಾರ್ಯ ನಡೆಸಿದ್ದಾರೆ. ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ