ನವದೆಹಲಿ: ರಾಜಕೀಯ ನಿಧಿಗಾಗಿ ಚುನಾವಣಾ ಬಾಂಡ್ ಯೋಜನೆಯು ನಾಗರಿಕರ ಮಾಹಿತಿಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಪರಿಗಣಿಸಿರುವ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪಿನಲ್ಲಿ ರಾಜಕೀಯ ಪಕ್ಷಗಳಿಗೆ ಅನಾಮಧೇಯ ದೇಣಿಗೆಗಳನ್ನು ನೀಡಲು ಅನುಮತಿಸುವ ಚುನಾವಣಾ ಬಾಂಡ್ ಯೋಜನೆಯನ್ನು ಗುರುವಾರ ರದ್ದುಗೊಳಿಸಿದೆ.
ಯೋಜನೆ ಜಾರಿಗೆ ತರಲೆಂದು ಆದಾಯ ತೆರಿಗೆ ಕಾಯಿದೆ ಮತ್ತು ಜನ ಪ್ರತಿನಿಧಿ ಕಾಯಿದೆಗೆ ಮಾಡಿದ ತಿದ್ದುಪಡಿಗಳನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ, ನ್ಯಾಯಮೂರ್ತಿಗಳಾದ ಸಂಜೀವ ಖನ್ನಾ, ಬಿ.ಆರ್. ಗವಾಯಿ, ಜೆ.ಬಿ.ಪರ್ದಿವಾಲಾ ಹಾಗೂ ಮನೋಜ ಮಿಶ್ರಾ ಅವರನ್ನೊಳಗೊಂಡ ಐವರು ಸದಸ್ಯರ ಸಾಂವಿಧಾನಿಕ ಪೀಠ ಸರ್ವಾನುಮತದಿಂದ ರದ್ದುಗೊಳಿಸಿತು.
ಚುನಾವಣಾ ಬಾಂಡ್ ಯೋಜನೆಯು ತನ್ನ ಅನಾಮಧೇಯ ಸ್ವರೂಪದಿಂದಾಗಿ ಮಾಹಿತಿ ಹಕ್ಕಿನ ಉಲ್ಲಂಘನೆಯಾಗಿದ್ದು ಸಂವಿಧಾನದ 19 (1) (ಎ) ವಿಧಿಯಡಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 139 ಮತ್ತು ಹಣಕಾಸು ಕಾಯಿದೆಯ 2017ರ ಸೆಕ್ಷನ್ 13 (ಬಿ) ಗೆ ತಿದ್ದುಪಡಿ ಮಾಡಿ ಸೆಕ್ಷನ್ 29 (1) (ಸಿ) ಗೆ ಚುನಾವಣಾ ಬಾಂಡ್ ಯೋಜನೆ ಅವಕಾಶ ನೀಡುತ್ತದೆ. ಇದು ಯೋಜನೆ ಸಂವಿಧಾನದ 19 (1) (ಎ) ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ತೀರ್ಪು ಹೇಳಿದೆ.
ಚುನಾವಣಾ ಬಾಂಡ್ ಯೋಜನೆಯು ರಾಜಕೀಯದಲ್ಲಿ ಕಪ್ಪುಹಣ ನಿಗ್ರಹಿಸಲು ಸಹಾಯ ಮಾಡುತ್ತದೆ ಎಂದು ಹೇಳುವ ಮೂಲಕ ಅದನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ದಾನಿಗಳ ಗೌಪ್ಯತೆ ಮುಖ್ಯವಾಗಿದ್ದರೂ, ಸಂಪೂರ್ಣ ವಿನಾಯಿತಿ ನೀಡುವ ಮೂಲಕ ರಾಜಕೀಯ ನಿಧಿಗೆ ಸಂಬಂಧಿಸಿದಂತೆ ಪಾರದರ್ಶಕತೆಯನ್ನು ಸಾಧಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಬಾಂಡ್ಗಳ ವಿತರಣೆಯನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಈ ವಿಧಾನದ ಮೂಲಕ ನೀಡಿದ ದೇಣಿಗೆಗಳ ವಿವರಗಳನ್ನು ಭಾರತೀಯ ಚುನಾವಣಾ ಆಯೋಗಕ್ಕೆ ಒದಗಿಸಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಹೇಳಿದರು. ಮಾರ್ಚ್ 13 ರೊಳಗೆ ಈ ಮಾಹಿತಿಯನ್ನು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಲು ಚುನಾವಣಾ ಸಂಸ್ಥೆಗೆ ಸೂಚಿಸಲಾಗಿದೆ.
ಚುನಾವಣಾ ಬಾಂಡ್ಗಳನ್ನು ವಿತರಿಸುವ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚುನಾವಣಾ ಬಾಂಡ್ಗಳನ್ನು ಸ್ವೀಕರಿಸಿದ ರಾಜಕೀಯ ಪಕ್ಷಗಳ ವಿವರಗಳನ್ನು ಮತ್ತು ಸ್ವೀಕರಿಸಲಾದ ಎಲ್ಲಾ ವಿವರಗಳನ್ನು ಮಾರ್ಚ್ 6 ರೊಳಗೆ ಭಾರತದ ಚುನಾವಣಾ ಆಯೋಗಕ್ಕೆ (ಇಸಿಐ) ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
15 ದಿನಗಳ ಸಿಂಧುತ್ವದ ಅವಧಿಯೊಳಗೆ ಇರುವ ಆದರೆ ರಾಜಕೀಯ ಪಕ್ಷಗಳು ಇನ್ನೂ ನಗದೀಕರಿಸದೆ ಇರುವ ಬಾಂಡ್ಗಳನ್ನು ರಾಜಕೀಯ ಪಕ್ಷಗಳು ಅದನ್ನು ಖರೀದಿಸಿದವರಿಗೆ ಹಿಂತಿರುಗಿಸಬೇಕು. ಬಾಂಡ್ ಹಿಂಪಡೆದ ಬಳಿಕ ಬಾಂಡ್ ವಿತರಿಸಿದ್ದ ಬ್ಯಾಂಕ್ ಖರೀದಿದಾರರ ಖಾತೆಗೆ ಹಣ ಹಿಂತಿರುಗಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ರಾಜಕೀಯ ವ್ಯವಸ್ಥೆಗೆ ಕಪ್ಪುಹಣ ಪ್ರವೇಶಿಸದಂತೆ ತಡೆಯುವ ಉದ್ದೇಶದಿಂದ 2018 ರಲ್ಲಿ ಚುನಾವಣಾ ಬಾಂಡ್ಗಳ ಯೋಜನೆಯನ್ನು ತರಲಾಯಿತು.
ಈ ಯೋಜನೆ ಜಾರಿಯಾದ ಕೂಡಲೇ ಬಹು ಪಕ್ಷಗಳು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದವು. ಇವುಗಳಲ್ಲಿ ಸಿಪಿಎಂ, ಕಾಂಗ್ರೆಸ್ ನಾಯಕ ಜಯಾ ಠಾಕೂರ್ ಮತ್ತು ಲಾಭರಹಿತ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸೇರಿದ್ದವು. ಗೌಪ್ಯತೆಯ ಷರತ್ತು ನಾಗರಿಕರ ಮಾಹಿತಿ ಹಕ್ಕಿಗೆ ತೊಡಕಾಗಲಿದೆ ಎಂದು ಅವರು ವಾದಿಸಲಾಗಿತ್ತು.
ಎಡಿಆರ್ ಪರ ಹಾಜರಾದ ಹಿರಿಯ ವಕೀಲ ಪ್ರಶಾಂತ ಭೂಷಣ ಅವರು, ಬಾಂಡ್ಗಳು ಅಪಾರದರ್ಶಕ ಮತ್ತು ಅನಾಮಧೇಯವಾಗಿರುವುದರಿಂದ ಭ್ರಷ್ಟಾಚಾರವನ್ನು ಉತ್ತೇಜಿಸುತ್ತವೆ ಎಂದು ವಾದಿಸಿದ್ದರು. ಈ ಯೋಜನೆಯನ್ನು ಪರಿಚಯಿಸಿದಾಗಿನಿಂದ, ಈ ದೇಣಿಗೆ ವಿಧಾನದ ಮೂಲಕ ನೀಡಿದ ಕೊಡುಗೆಗಳು ಇತರ ಎಲ್ಲ ವಿಧಾನಗಳನ್ನು ಮೀರಿದೆ ಎಂದು ಅವರು ಹೇಳಿದ್ದರು.
ಚುನಾವಣಾ ಆಯೋಗವು ಕೂಡ ಈ ಯೋಜನೆಯನ್ನು ತಂದಾಗ ವಿರೋಧಿಸಿತ್ತು, ರಾಜಕೀಯ ನಿಧಿಯಲ್ಲಿ ಪಾರದರ್ಶಕತೆಗೆ ಸಂಬಂಧಿಸಿದಂತೆ ಇದು “ಹಿಮ್ಮುಖ ಹೆಜ್ಜೆ” ಎಂದು ಕರೆದಿತ್ತು.
ಈ ಯೋಜನೆಯಡಿ ಸೆಪ್ಟೆಂಬರ್ 30, 2023ರವರೆಗೆ ಮಾರಾಟವಾದ ಚುನಾವಣಾ ಬಾಂಡ್ಗಳ ಮಾಹಿತಿ ನೀಡುವಂತೆ ತೀರ್ಪು ಕಾಯ್ದಿರಿಸುವ ವೇಳೆ ಸುಪ್ರೀಂ ಕೋರ್ಟ್ ಭಾರತದ ಚುನಾವಣಾ ಆಯೋಗಕ್ಕೆ (ಇಸಿಐ) ಸೂಚಿಸಿತ್ತು.
ಚುನಾವಣಾ ಬಾಂಡ್ ಯೋಜನೆಯು ದಾನಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ (ಎಸ್ಬಿಐ) ಬಾಂಡ್ಗಳನ್ನು ಖರೀದಿಸಿ ಅನಾಮಧೇಯವಾಗಿ ರಾಜಕೀಯ ಪಕ್ಷಕ್ಕೆ ಹಣ ಕಳುಹಿಸಲು ಅನುವು ಮಾಡಿಕೊಡುತ್ತಿತ್ತು.
ಚುನಾವಣಾ ಬಾಂಡ್ ಎಂಬುದು ಭರವಸೆಯ ಪತ್ರದ ರೂಪದಲ್ಲಿದ್ದು, ಅದನ್ನು ಯಾವುದೇ ವ್ಯಕ್ತಿ, ಕಂಪನಿ, ಸಂಸ್ಥೆ ಅಥವಾ ಸಂಘಟನೆಯ ವ್ಯಕ್ತಿಗಳು ಖರೀದಿಸಬಹುದಾಗಿದೆ. ಆ ವ್ಯಕ್ತಿ ಅಥವಾ ಸಂಸ್ಥೆಯು ಭಾರತೀಯತೆಯನ್ನು ಹೊಂದಿರಬೇಕು. ಚುನಾವಣಾ ಬಾಂಡ್ ವಿಭಿನ್ನ ಬಗೆಯಲ್ಲಿದ್ದು, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ನಿರ್ದಿಷ್ಟ ಉದ್ದೇಶಕ್ಕಾಗಿ ಅವುಗಳನ್ನು ನೀಡಲು ಯೋಜಿಸಲಾಗಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ