ನವದೆಹಲಿ: ಉತ್ತರ ಪ್ರದೇಶದ ಅಮೇಥಿ ಮತ್ತು ರಾಯ್ಬರೇಲಿಯಲ್ಲಿ ರಾಹುಲ್ ಗಾಂಧಿಯವರ ಭಾರತ ಜೋಡೋ ನ್ಯಾಯ ಯಾತ್ರೆಯಲ್ಲಿ ಸಮಾಜವಾದಿ ಪಕ್ಷದ (ಎಸ್ಪಿ) ಮುಖ್ಯಸ್ಥ ಅಖಿಲೇಶ ಯಾದವ್ ಭಾಗವಹಿಸುವ ಬಗ್ಗೆ ಇನ್ನೂ ಅನಿಶ್ಚಿತತೆ ಮುಂದುವರಿದಿದೆ.
ಕಾಂಗ್ರೆಸ್ ಜೊತೆ ಸೀಟು ಹಂಚಿಕೆ ಅಂತಿಮ ಆಗುವವರೆಗೆ ರಾಹುಲ್ ಗಾಂಧಿ ಅವರ ಭಾರತ ಜೋಡೋ ನ್ಯಾಯ ಯಾತ್ರೆಯಲ್ಲಿ ಸಮಾಜವಾದಿ ಪಕ್ಷವು ಭಾಗವಹಿಸುವುದಿಲ್ಲ ಎಂದು ಅಖಿಲೇಶ ಯಾದವ್ ಹೇಳಿದ್ದಾರೆ.
“ಚರ್ಚೆಗಳು ನಡೆಯುತ್ತಿವೆ. ಎರಡೂ ಕಡೆಯಿಂದ ಪಟ್ಟಿಗಳು ಬರುತ್ತಿವೆ. ಸೀಟು ಹಂಚಿಕೆ ಅಂತಿಮಗೊಂಡ ನಂತರ ಸಮಾಜವಾದಿ ಪಕ್ಷವು ಕಾಂಗ್ರೆಸ್ನ ನ್ಯಾಯ ಯಾತ್ರೆಯಲ್ಲಿ ಭಾಗವಹಿಸುತ್ತದೆ” ಎಂದು ಅಖಿಲೇಶ ಯಾದವ್ ಹೇಳಿದ್ದಾರೆ.
ಯಾತ್ರೆ ಸೋಮವಾರ ಅಮೇಥಿ ಮೂಲಕ ಸಾಗಿ ನಂತರ ಸಮಾಜವಾದಿ ಪಕ್ಷದ ಮುಖ್ಯಸ್ಥರು ಸೇರುವುದಾಗಿ ಹೇಳಿದ್ದ ರಾಯ್ಬರೇಲಿಗೆ ಪ್ರವೇಶಿಸಲಿದೆ.
ಅಖಿಲೇಶ ಯಾದವ್, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ನಡುವೆ ಮಾತುಕತೆ ನಡೆದಿದೆ, ಆದರೆ ಸೀಟುಗಳ ಬಗ್ಗೆ ಇನ್ನೂ ಅಂತಿಮವಾಗಿಲ್ಲ.
ಈ ತಿಂಗಳ ಆರಂಭದಲ್ಲಿ ಅಖಿಲೇಶ ಯಾದವ್ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಹ್ವಾನವನ್ನು ಸ್ವೀಕರಿಸಿದ್ದರು ಮತ್ತು ಅಮೇಥಿ ಅಥವಾ ರಾಯ್ಬರೇಲಿಯಲ್ಲಿ ಯಾತ್ರೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದರು.
ಮುಂಬರುವ ಲೋಕಸಭಾ ಚುನಾವಣೆಗೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಗೆ 11 ಸ್ಥಾನಗಳನ್ನು ಎಸ್ಪಿ ಇತ್ತೀಚೆಗೆ ನೀಡಿತ್ತು. ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ವಿರೋಧ ಪಕ್ಷದ ಮೈತ್ರಿಕೂಟವಾದ ಇಂಡಿಯಾ ಬ್ಲಾಕ್ನಲ್ಲಿವೆ.
ನಿಮ್ಮ ಕಾಮೆಂಟ್ ಬರೆಯಿರಿ