ನವದೆಹಲಿ; 2014 ಮತ್ತು 2022 ರ ನಡುವೆ ಆಮ್ ಆದ್ಮಿ ಪಕ್ಷವು ಖಲಿಸ್ತಾನಿ ಗುಂಪುಗಳಿಂದ 16 ಮಿಲಿಯನ್ ಡಾಲರ್ (ಅಂದಾಜು 133.54 ಕೋಟಿ ರೂ.) ಹಣ ಪಡೆದಿದೆ ಎಂದು ಖಲಿಸ್ತಾನಿ ಭಯೋತ್ಪಾದಕ ಗುರ್ಪತ್ವಂತ್ ಸಿಂಗ್ ಪನ್ನುನ್ ಆರೋಪಿಸಿದ್ದಾನೆ.
ಅಮೆರಿಕ ಮತ್ತು ಕೆನಡಾದ ಉಭಯ ಪೌರತ್ವವನ್ನು ಹೊಂದಿರುವ ಭಾರತೀಯ ಮೂಲದ ಪನ್ನುನ್, ಸೋಮವಾರ ಸಾಮಾನಿಕ ಮಾಧ್ಯಮದ ಮೂಲಕ ವೀಡಿಯೊ ಮೆಸೇಜ್ ನಲ್ಲಿ ಈ ರೀತಿ ಹೇಳಿಕೊಂಡಿದ್ದಾನೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಆರ್ಥಿಕ ಸಹಾಯ ಮಾಡಿದರೆ 2014 ರಲ್ಲಿ ಶಿಕ್ಷೆಗಳಗಾದ ಭಯೋತ್ಪಾದಕ ದೇವಿಂದರ ಪಾಲ್ ಸಿಂಗ್ ಭುಲ್ಲರ್ ಎಂಬಾತನನ್ನು ಬಿಡುಗಡೆ ಮಾಡುವ ಆಘಾತಕಾರಿ ಪ್ರಸ್ತಾಪ ಮಾಡಿದ್ದರು ಎಂದು ಈತ ಹೇಳಿಕೊಂಡಿದ್ದಾನೆ. ಭುಲ್ಲರ್ 1993 ರ ದೆಹಲಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದ, ಈ ಘಟನೆಯಲ್ಲಿ ಒಂಬತ್ತು ಜನರು ಸಾವಿಗೀಡಾಗಿದ್ದರು ಮತ್ತು 31 ಜನರು ಗಾಯಗೊಂಡಿದ್ದರು.
ಕೇಜ್ರಿವಾಲ್ ಮತ್ತು ಖಲಿಸ್ತಾನ್ ಪರ ಸಿಖ್ಖರು 2014 ರಲ್ಲಿ ನ್ಯೂಯಾರ್ಕಿನ ರಿಚ್ಮಂಡ್ ಹಿಲ್ ನಲ್ಲಿರುವ ಗುರುದ್ವಾರದಲ್ಲಿ ಭೇಟಿಯಾದರು. ಆರ್ಥಿಕ ಸಹಾಯದ ಬದಲಿಗೆ ಕೇಜ್ರಿವಾಲ್ ಭಯೋತ್ಪಾದಕ ಭುಲ್ಲರ್ ನನ್ನು ಬಿಡುಗಡೆ ಮಾಡುವ ವಾಗ್ದಾನ ಮಾಡಿದ್ದರು ಎಂದು ಸಿಖ್ಸ್ ಫಾರ್ ಜಸ್ಟಿಸ್ ನಾಯಕ ಪನ್ನುನ್ ಆರೋಪಿಸಿದ್ದಾನೆ.
ಕೇಜ್ರಿವಾಲ್ ಮತ್ತು ಅವರ ಪಕ್ಷವು ಖಲಿಸ್ತಾನಿ ಗುಂಪುಗಳಿಂದ ಹಣವನ್ನು ಪಡೆಯುತ್ತಿದೆ ಎಂದು ಪನ್ನುನ್ ಆರೋಪಿಸಿದ್ದು ಇದೇ ಮೊದಲಲ್ಲ. ಜನವರಿಯಲ್ಲಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರು ಅಮೆರಿಕ ಮತ್ತು ಕೆನಡಾದಲ್ಲಿನ ಖಲಿಸ್ತಾನ್ ಬೆಂಬಲಿಗರಿಂದ $ 6 ಮಿಲಿಯನ್ ದೇಣಿಗೆ ಪಡೆದ್ದರು ಎಂದು ಆತ ಹೇಳಿಕೊಂಡಿದ್ದ. ಫೆಬ್ರವರಿಯೊಳಗೆ ಸಿಖ್ ಫಾರ್ ಜಸ್ಟೀಸ್ ನಾಯಕನ ಸಹವರ್ತಿಗಳನ್ನು ಬಿಡುಗಡೆ ಮಾಡದಿದ್ದರೆ ಸಂಭಾವ್ಯ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆ ಸಮಯದಲ್ಲಿ ಕೇಜ್ರಿವಾಲ್ ಮತ್ತು ಮಾನ್ ಅವರಿಗೆ ಪನ್ನುನ್ ಎಚ್ಚರಿಕೆ ಸಹ ನೀಡಿದ್ದ.
ರಾಜಪುರದ ನಿವಾಸಿಗಳಾದ ಪಂಜಾಬ್ ಪೊಲೀಸ್ನ ರಾಜ್ಯ ವಿಶೇಷ ಕಾರ್ಯಾಚರಣೆ ಕೋಶದಿಂದ ಜಗದೀಶ್ ಸಿಂಗ್, ಮಂಜೀತ್ ಸಿಂಗ್ ಮತ್ತು ದೇವಿಂದರ್ ಸಿಂಗ್ ಅವರನ್ನು ಬಂಧಿಸಿದ ನಂತರ ಆತ ಈ ಎಚ್ಚರಿಕೆ ನೀಡಿದ್ದ. ಫೆಬ್ರವರಿಯೊಳಗೆ ಸಿಖ್ ಫಾರ್ ಜಸ್ಟೀಸ್ ನಾಯಕನ ಸಹಾಯಕರನ್ನು ಬಿಡುಗಡೆ ಮಾಡದಿದ್ದರೆ “ರಾಜಕೀಯ ಸಾವು” ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದ.
ಕೇಜ್ರಿವಾಲ್ ಅವರು ದೆಹಲಿಯ ಅಬಕಾರಿ ಮದ್ಯ ಹಗರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ದ ಬಂಧನಕ್ಕೊಳಗಾಗಿದ್ದಾರೆ. ಅವರನ್ನು ಮಾರ್ಚ್ 28 ರವರೆಗೆ ಇಡಿ ಕಸ್ಟಡಿಗೆ ನೀಡಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ