ಬೆಂಗಳೂರು: ಬೆಂಗಳೂರು ಉತ್ತರ ಕ್ಷೇತ್ರದ ಲೋಕಸಭಾ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ಕಾರಿಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಇಂದು, ಸೋಮವಾರ ನಡೆದಿದೆ ಎಂದು ವರದಿಯಾಗಿದೆ.
ಕೆ.ಆರ್. ಪುರದ ಗಣೇಶ ದೇವಸ್ಥಾನದ ಬಳಿ ಈ ಘಟನೆ ನಡೆದಿದ್ದು, ಮೃತನನ್ನು ಪ್ರಕಾಶ (35) ಎಂದು ಗುರುತಿಸಲಾಗಿದೆ.
ನಿಂತಿದ್ದ ಕಾರಿನ ಡೋರ್ ಒಪನ್ ಮಾಡುತ್ತಿದ್ದಾಗ ಬೈಕ್ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಸವಾರ ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಕೆಆರ್ ಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ, ನಮ್ಮ ಪಕ್ಷದ ರ್ಯಾಲಿ ಇತ್ತು. ಎಲ್ಲರೂ ರ್ಯಾಲಿ ಮುಗಿಸಿಕೊಂಡು ಬರುವಾಗ ಕೆಆರ್ ಪುರಂ ಸರ್ಕಲ್ ಬಳಿ ಕಾರು ನಿಲ್ಲಿಸಿದ್ದ ಕಾರಿನ ಡೋರ್ ಓಪನ್ ಮಾಡುವಾಗ ನಮ್ಮ ಕಾರ್ಯಕರ್ತ ಬೈಕ್ನಲ್ಲಿ ಹಿಂದಿನಿಂದ ಬಂದು ಗುದ್ದಿದ್ದಾರೆ. ಈ ವೇಳೆ ಬೈಕ್ನಿಂದ ಬಿದ್ದಾಗ ಅವರ ಮೇಲೆ ಬಸ್ ಹರಿದಿದೆ ಎಂದು ಹೇಳಿದ್ದಾರೆ.
ಪೋಸ್ಟ್ ಮಾರ್ಟಮ್ ವರದಿ ಬಂದ ನಂತರ ಎಲ್ಲವೂ ತಿಳಿಯಲಿದೆ. ಪ್ರಕಾಶ ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಈ ಘಟನೆ ನಿಜಕ್ಕೂ ದುರ್ದೈವ. ಅವರ ಕುಟುಂಬದ ಜೊತೆಗೆ ನಾವೀದ್ದೇವೆ. ಅವರ ಕುಟುಂಬಕ್ಕೆ ಏನು ಸಹಾಯ ಮಾಡಬೇಕೋ ಮಾಡುತ್ತೇವೆ ಎಂದು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ