ನವದೆಹಲಿ : ಶಾಖದ ಅಲೆಯಿಂದಾಗಿ ಭಾರತದ ಹಲವು ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ನಿಂದ 46 ಡಿಗ್ರಿ ಸೆಲ್ಸಿಯಸ್ ವರೆಗೆ ತಲುಪಿದೆ. ತೀವ್ರವಾದ ಶಾಖದ ನಡುವೆ, ಟಿವಿ ಆಂಕರ್ ಇತ್ತೀಚೆಗೆ ಶಾಖದ ಅಲೆಯ ಬಗ್ಗೆ ಟಿವಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಅಪ್ಡೇಟ್ಗಳನ್ನು ನೀಡುತ್ತಿದ್ದಾಗ ಮೂರ್ಛೆ ಹೋದ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಮಹಿಳಾ ಟಿವಿ ಆಂಕರ್ ರಕ್ತದೊತ್ತಡ (blood pressure) ಇದ್ದಕ್ಕಿದ್ದಂತೆ ಕುಸಿದಿದೆ. ದೂರದರ್ಶನದ ಕೋಲ್ಕತ್ತಾ ಶಾಖೆಯ ನಿರೂಪಕಿ ಲೋಪಾಮುದ್ರ ಸಿನ್ಹಾ ಅವರುಶಾಖದ ಅಲೆಯ ಬಗ್ಗೆ ಮಾಹಿತಿ ಓದುತ್ತಿದ್ದಾಗ ಇದು ಸಂಭವಿಸಿದೆ. “ಟೆಲಿಪ್ರಾಂಪ್ಟರ್ ಮರೆಯಾಯಿತು ಮತ್ತು ನಾನು ನನ್ನ ಕುರ್ಚಿಯ ಮೇಲೆ ಕುಸಿದೆ” ಎಂದು ಅವರು ತಮ್ಮ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಹೇಳಿದ್ದಾರೆ.
ಸಿನ್ಹಾ ಅವರು ತಾವು “ತೀವ್ರವಾದ ತಾಪಮಾನ ಹೆಚ್ಚಳ ಮತ್ತು ತಮ್ಮ ರಕ್ತದೊತ್ತಡ ಇದ್ದಕ್ಕಿದ್ದಂತೆ ಕುಸಿದ ಕಾರಣ” ಮೂರ್ಛೆ ಹೋದೆ ಎಂದು ಹೇಳಿದ್ದಾರೆ. ಕೂಲಿಂಗ್ ವ್ಯವಸ್ಥೆಯಲ್ಲಿನ ಕೆಲವು ತೊಂದರೆಯಿಂದಾಗಿ, ಸ್ಟುಡಿಯೊದಲ್ಲಿ ತಾಪಮಾನ ವಿಪರೀತ ಹೆಚ್ಚಿತ್ತು ಎಂದು ನಿರೂಪಕಿ ಹೇಳಿದ್ದಾರೆ.
ಗುರುವಾರ ಬೆಳಗಿನ ಪ್ರಸಾರದ ಮೊದಲು ತಾನು ಅಸ್ವಸ್ಥಳಾಗಿದ್ದೆ ಎಂದು ಅವರು ಹೇಳಿದರು. “ನಾನು ಎಂದಿಗೂ ನನ್ನೊಂದಿಗೆ ನೀರಿನ ಬಾಟಲಿಯನ್ನು ಇಟ್ಟುಕೊಳ್ಳುವುದಿಲ್ಲ. ಅದು ಹದಿನೈದು ನಿಮಿಷಗಳ ಅಥವಾ ಅರ್ಧ ಘಂಟೆಯ ಪ್ರಸಾರವಾಗಿರಲಿ, ನನ್ನ 21 ವರ್ಷಗಳ ವೃತ್ತಿಜೀವನದಲ್ಲಿ ಪ್ರಸಾರದ ಸಮಯದಲ್ಲಿ ನೀರು ಕುಡಿಯುವ ಅಗತ್ಯವನ್ನು ನಾನು ಎಂದಿಗೂ ಅನುಭವಿಸಲಿಲ್ಲ. ಆದರೆ, ಮೊದಲ ಬಾರಿಗೆ 15 ನಿಮಿಷಗಳಲ್ಲೇ ಗಂಟಲು ಶುಷ್ಕವಾಗಿ ನೀರಡಿಕೆಯಾಯಿತು. ಟಿವಿಯಲ್ಲಿ ನನ್ನ ಮುಖದ ಬದಲು ಬೇರೆ ದೃಶ್ಯಗಳನ್ನು ತೋರಿಸುತ್ತಿದ್ದಾಗ ನಾನು ಫ್ಲೋರ್ ಮ್ಯಾನೇಜರ್ ಬಳಿ ನೀರಿನ ಬಾಟಲಿಯನ್ನು ಕೇಳಿದೆ ಎಂದು ಲೋಪಾಮುದ್ರ ಸಿನ್ಹಾ ಹೇಳಿದ್ದಾರೆ.
ಯಾವುದೇ ಬೈಟ್ಗಳಿಲ್ಲದೆ ಸಾಮಾನ್ಯ ವರದಿಗಳು ಮಾತ್ರ ಪ್ರಸಾರವಾಗುತ್ತಿದ್ದ ಕಾರಣ ಸ್ವಲ್ಪ ನೀರು ಕುಡಿಯಲು ನನಗೆ ಅವಕಾಶ ಸಿಗುತ್ತಿಲ್ಲ ಎಂದು ಸಿನ್ಹಾ ಹೇಳಿದ್ದಾರೆ. “(ಬುಲೆಟಿನ್ನ) ಕೊನೆಯಲ್ಲಿ, ಒಂದು ಬೈಟ್ ಬಂದಿತು ಮತ್ತು ನನಗೆ ಸ್ವಲ್ಪ ನೀರು ಕುಡಿಯಲು ಸಿಕ್ಕ ಅವಕಾಶವನ್ನು ಬಳಸಿಕೊಂಡೆ ಎಂದು ಅವರು ಹೇಳಿದ್ದಾರೆ.
ನೀರು ಕುಡಿದ ನಂತರ, ತಾನು ಮೂರ್ಛೆ ಹೋದಾಗ ಇನ್ನೂ ಎರಡು ವಿಷಯ ಓದುವುದು ಬಾಕಿ ಇರುವಾಗ ತಾನು ಹೇಗೋ ಎರಡು ವರದಿ ಓದುವುದನ್ನು ಪೂರ್ಣಗೊಳಿಸಿದೆ. ಶಾಖದ ಅಲೆಯ ಬಗೆಗಿನ ವರದಿ ಓದುವಾಗ, ನನ್ನ ಮಾತು ಮಂದವಾಗತೊಡಗಿತು. ನಾನು ನನ್ನ ಪ್ರಸ್ತುತಿಯನ್ನು ಪೂರ್ಣಗೊಳಿಸಲು ಪ್ರಯತ್ನಿಸಿದೆ. ಟೆಲಿಪ್ರಾಂಪ್ಟರ್ ಮರೆಯಾಯಿತು ಮತ್ತು ನನಗೆ ಕಣ್ಣು ಕತ್ತಲೆ ಆಗಿತ್ತು. ಅದೃಷ್ಟವಶಾತ್, ದೂರದರ್ಶನದಲ್ಲಿ 30 ರಿಂದ 40 ಸೆಕೆಂಡುಗಳ ಅನಿಮೇಷನ್ ಪ್ಲೇ ಆಗುತ್ತಿದ್ದಾಗ ಿದು ಸಂಭವಿಸಿದೆ, ನಾನು ನನ್ನ ಕುರ್ಚಿಯ ಮೇಲೆ ಕುಸಿದೆ ಎಂದು ಲೋಪಾಮುದ್ರ ಸಿನ್ಹಾ ತಿಳಿಸಿದ್ದಾರೆ.
ಆಕೆ ಪ್ರಜ್ಞೆ ತಪ್ಪಿ ಬಿದ್ದಾಗ ಕೆಲವು ಪುರುಷರು ಆಕೆಯ ಸಹಾಯಕ್ಕೆ ಧಾವಿಸಿ ಮುಖಕ್ಕೆ ನೀರು ಚಿಮುಕಿಸಿದ್ದು ಕಂಡುಬಂದಿದೆ. ಲೋಪಾಮುದ್ರ ಸಿನ್ಹಾ ಅವರು ತಮ್ಮ ಚಾನೆಲ್ ಬಳಿ ಈ ದುರ್ಘಟನೆಗಾಗಿ ಕ್ಷಮೆಯಾಚಿಸಿದರು ಮತ್ತು ಅವರು ಮೂರ್ಛೆ ಹೋದ ನಂತರ ಪ್ರಸಾರವನ್ನು ನಿರ್ವಹಿಸಿದ್ದಕ್ಕಾಗಿ ನಿರ್ಮಾಪಕರಿಗೆ ಧನ್ಯವಾದ ಹೇಳಿದರು. ಈ ರೀತಿಯಾಗಬಹುದು ಎಂದು ನಾನು ಕನಸಿನಲ್ಲಿಯೂ ಯೋಚಿಸಿರಲಿಲ್ಲ ಎಂದು ಅವರು ಹೇಳಿದರು. ಬಿಸಿಲಿನ ತಾಪದಲ್ಲಿ ವೀಕ್ಷಕರು ತಮ್ಮ ಕಾಳಜಿ ವಹಿಸುವಂತೆಯೂ ಅವರು ಸಲಹೆ ನೀಡಿದರು.
ಒಡಿಶಾ, ಜಾರ್ಖಂಡ್ ಮತ್ತು ಗಂಗಾನದಿ ಪಶ್ಚಿಮ ಬಂಗಾಳದ ಭಾಗಗಳ ಮೇಲೆ ಪರಿಣಾಮ ಬೀರುತ್ತಿರುವ ಶಾಖದ ಅಲೆಯು ಈ ತಿಂಗಳ ಎರಡನೇ ಶಾಖದ ಅಲೆಯಾಗಿದೆ. ಮೊದಲ ಶಾಖದ ಅಲೆಯು ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಗುಜರಾತ್ನ ಭಾಗಗಳಲ್ಲಿ ತಾಪಮಾನ ಹೆಚ್ಚಳಕ್ಕೆ ಕಾರಣವಾಗಿತ್ತು.
ಶನಿವಾರ, ಕೆಲವು ಸ್ಥಳಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಏಳರಿಂದ ಎಂಟು ಡಿಗ್ರಿಗಳಷ್ಟು ಹೆಚ್ಚು ದಾಖಲಾಗಿದೆ. ಪಶ್ಚಿಮ ಬಂಗಾಳದ ಮಿಡ್ನಾಪುರ ಮತ್ತು ಬಂಕುರಾದಲ್ಲಿ ಕ್ರಮವಾಗಿ 44.5 ಡಿಗ್ರಿ ಸೆಲ್ಸಿಯಸ್ ಮತ್ತು 44.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ