ನವದೆಹಲಿ : ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ಬಣದ ನಾಯಕರು ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ, ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದೆ ಎಂದು ವರದಿಯಾಗಿದೆ.
ಎರಡೂ ಪಕ್ಷಗಳ ಕಾರ್ಯಕರ್ತರು ಹೊಡೆದಾಡಿಕೊಂಡರು ಮತ್ತು ಪರಸ್ಪರರ ಮೇಲೆ ಕುರ್ಚಿಗಳು ಮತ್ತು ದೊಣ್ಣೆಗಳಿಂದ ಬಡಿದಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಭದ್ರತಾ ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಆದರೆ ಅವರು ತಲುಪುವಷ್ಟರಲ್ಲಿಯೇ ಕೆಲವರು ಗಾಯಗೊಂಡಿದ್ದರು.
ರ್ಯಾಲಿಯಲ್ಲಿ ಹಠಾತ್ ಹಿಂಸಾಚಾರವು ಭೀತಿ ಮತ್ತು ಗೊಂದಲವನ್ನು ಸೃಷ್ಟಿಸಿತು ಮತ್ತು ಕೆಲವರು ಸ್ಥಳದಿಂದ ‘ಪಲಾಯನ’ ಮಾಡಲು ಪ್ರಾರಂಭಿಸಿದರು. ಇದರಿಂದ ಕೆಲವರು ನೆಲಕ್ಕೆ ಬಿದ್ದು ಗಾಯಗೊಂಡಿದ್ದಾರೆ.
ವರದಿಗಳ ಪ್ರಕಾರ, ಆರ್ಜೆಡಿ ಬೆಂಬಲಿಗರು ಮತ್ತು ಛಾತ್ರಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್. ತ್ರಿಪಾಠಿ ಬೆಂಬಲಿಗರ ನಡುವೆ ಹೊಡೆದಾಟ ನಡೆದಿದೆ.
ಮಾತಿನ ಚಕಮಕಿ ನಂತರ ಘರ್ಷಣೆಗೆ ತಿರುಗಿದ್ದು, ಛಾತ್ರಾ ಕ್ಷೇತ್ರದ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಕೆ.ಎನ್. ತ್ರಿಪಾಠಿ ಅವರ ಸಹೋದರ ಗೋಪಾಲ್ ತ್ರಿಪಾಠಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಕೆ.ಎನ್. ತ್ರಿಪಾಠಿ ಅವರು ಜಾರ್ಖಂಡ್ ಸಂಪುಟದಲ್ಲಿ ಸಚಿವರಾಗಿದ್ದರು.
ಟಿಕೆಟ್ ಹಂಚಿಕೆ ವಿಚಾರದಲ್ಲಿ ಆರ್ಜೆಡಿ ಕಾರ್ಯಕರ್ತರು ಅಸಮಾಧಾನಗೊಂಡಿದ್ದು, ಆರ್ಜೆಡಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಸಂಘರ್ಷಕ್ಕೆ ಕಾರಣ ಎಂದು ತಿಳಿದು ಬಂದಿದೆ. ಇದರಿಂದ ಪರಸ್ಪರ ಹಲ್ಲೆಗೆ ಮುಂದಾಗಿದ್ದಾರೆ.
ಛಾತ್ರಾ ಕ್ಷೇತ್ರದಿಂದ ಕೆಎನ್ ತ್ರಿಪಾಠಿ ಸ್ಪರ್ಧಿಸುತ್ತಿರುವುದನ್ನ ಆರ್ಜೆಡಿ ಕಾರ್ಯಕರ್ತರು ವಿರೋಧಿಸಿದರು.
ಸಮಾವೇಶದಲ್ಲಿ ಅವ್ಯವಸ್ಥೆಯನ್ನು ಸೃಷ್ಟಿಸುವ ಉದ್ದೇಶದಿಂದ ಕನಿಷ್ಠ 10-15 ಹೊರಗಿನವರು ರ್ಯಾಲಿಯಲ್ಲಿ ನುಸುಳಿದ್ದಾರೆ ಎಂದು ಕೆ.ಎನ್. ತ್ರಿಪಾಠಿ ಹೇಳಿದ್ದಾರೆ.
ಆರ್ಜೆಡಿ ಮತ್ತು ಕಾಂಗ್ರೆಸ್ಗೆ ಸೇರಿದ ಎರಡು ಗುಂಪುಗಳ ನಡುವೆ ದೈಹಿಕ ಮಾರಾಮಾರಿ ನಡೆದಾಗ, ಇಂಡಿಯಾ ಮೈತ್ರಿಕೂಟದ ಪ್ರಮುಖ ನಾಯಕರು ವೇದಿಕೆಯಲ್ಲಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ