ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ : ಸ್ವಾತಿ ಮಲಿವಾಲ್ ಹೊಸ ವೀಡಿಯೊ ಬಿಡುಗಡೆ ಮಾಡಿದ ಎಎಪಿ : ನಿಜವಾಗಿ ನಡೆದದ್ದು ಏನು..?

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸದ ಹೊಸ ವೀಡಿಯೊ ಹೊರಬಿದ್ದಿದ್ದು, ಸ್ವಾತಿ ಮಲಿವಾಲ್ ಅವರನ್ನು ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಹೊರಕ್ಕೆ ಕರೆದೊಯ್ದಿರುವುದು ಕಂಡುಬಂದಿದೆ. ಇದು ಸೋಮವಾರ ನಡೆದಿದ್ದು, ಅದೇ ದಿನ ಎಎಪಿ ಸಂಸದೆ ಸ್ವಾತಿ ಮಲಿವಾಲ್‌ ತಮ್ಮ ಮೇಲೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಆಪ್ತ ಸಹಾಯಕ ಸಹಾಯಕ ವಿಭವಕುಮಾರ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸ್ವಾತಿ ಮಲಿವಾಲ್ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರ ಆಪ್ತ ಸಹಾಯಕ ವಿಭವಕುಮಾರ ಅವರನ್ನು ಶನಿವಾರ ಬಂಧಿಸಿದ ಬೆನ್ನಲ್ಲೇ ಆಪ್ ಈ ವಿಡಿಯೋ ಬಿಡುಗಡೆ ಮಾಡಿದೆ. ಸ್ವಾತಿ ಮಲಿವಾಲ್ ಅವರನ್ನು ಮಹಿಳಾ ಭದ್ರತಾ ಸಿಬ್ಬಂದಿ ಅರವಿಂದ್ ಕೇಜ್ರಿವಾಲ್ ಅವರ ಮನೆಯಿಂದ ಹೊರಗೆ ಕರೆದೊಯ್ಯುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

ತಮ್ಮ ಎಫ್‌ಐಆರ್‌ನಲ್ಲಿ, ಮುಖ್ಯಮಂತ್ರಿ ನಿವಾಸಕ್ಕೆ ಹೋದಾಗ ವಿಭವಕುಮಾರ ತನ್ನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ ಎಂದು ಮಲಿವಾಲ್ ಆರೋಪಿಸಿದ್ದಾರೆ. ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿಯಾಗಿರುವ ವಿಭವಕುಮಾರ ತನಗೆ ಒದ್ದಿದ್ದಾನೆ, ಹೊಡೆದಿದ್ದಾನೆ ಮತ್ತು ನಿಂದಿಸಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. 39ರ ಹರೆಯದ ಸ್ವಾತಿ ಮಲಿವಾಲ್‌ ತನ್ನ ಬಟ್ಟೆ ಹರಿದಿದೆ ಮತ್ತು ಹಲ್ಲೆಯ ಸಮಯದಲ್ಲಿ ತನ್ನ ತಲೆ ಮತ್ತು ಕಾಲಿಗೆ ತೀವ್ರ ಗಾಯಗಳಾಗಿವೆ ಎಂದು ಹೇಳಿದ್ದಾರೆ.
ಹೊಸ ಸಿಸಿಟಿವಿ ಫೂಟೇಜ್‌ನಲ್ಲಿ ಸ್ವಾತಿ ಮಲಿವಾಲ್‌ ಮಹಿಳಾ ಪೊಲೀಸ್ ಹಿಡಿತದಿಂದ ತನ್ನನ್ನು ತಾನು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಸಹ ಕಾಣಬಹುದು. ಎಎಪಿ ನಾಯಕ ಅತಿಶಿ ಅವರು ಸ್ವಾತಿ ಮಲಿವಾಲ್ ಅವರು ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಪಕ್ಷದ ಹೆಸರು ಕೆಡಿಸಲು ಬಿಜೆಪಿ ಜೊತೆಗೆ ಸೇರಿಕೊಂಡಿದ್ದಾರೆ ಎಂದು ಆರೋಪಿಸಿದರು.
“ಅರವಿಂದ ಕೇಜ್ರಿವಾಲ್ ಅವರ ನಿವಾಸದ ಗೇಟ್‌ನಿಂದ ಸಿಸಿಟಿವಿ ದೃಶ್ಯಾವಳಿಗಳು ಮಲಿವಾಲ್ ಸರಿಯಾಗಿ ನಡೆಯುತ್ತಿರುವುದನ್ನು ತೋರಿಸುತ್ತವೆ ಮತ್ತು ಮಹಿಳಾ ಪೊಲೀಸ್ ಅಧಿಕಾರಿಯನ್ನು ಅವರು ದೂರ ತಳ್ಳುವುದನ್ನು  ತೋರಿಸುತ್ತದೆ. ಸ್ವಾತಿ ಮಲಿವಾಲ್ ಸರಿಯಾಗಿ ನಡೆಯುವುದನ್ನು ನೋಡಬಹುದು. ಆಕೆಯ ಬಟ್ಟೆ ಹರಿದಿಲ್ಲ ಮತ್ತು ಅವರು ಕುಂಟುತ್ತಿಲ್ಲ” ಎಂದು ಅತಿಶಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ನೆಲಮಂಗಲ ಬಳಿ ರಸ್ತೆ ಜಗಳ-ಹಲ್ಲೆ ಆರೋಪ: ಮಾಜಿ ಸಂಸದ ಅನಂತಕುಮಾರ ಹೆಗಡೆ ಸೇರಿ ಮೂವರ ವಿರುದ್ಧ ಎಫ್‌ಐಆರ್‌

ಈ ಘಟನೆ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಘಟನೆ ಬಗ್ಗೆ ಕೇಜ್ರಿವಾಲ್ ಅವರ ಮೌನವಾಗಿ ಇರುವುದಕ್ಕೆ ಬಿಜೆಪಿ ತೀವ್ರವಾಗಿ ಟೀಕಿಸಿದೆ.
ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ ಯಾದವ್ ಮತ್ತು ಎಎಪಿ ಸಂಸದ ಸಂಜಯ ಸಿಂಗ್ ಅವರೊಂದಿಗೆ ಶುಕ್ರವಾರ ಲಕ್ನೋದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕೇಜ್ರಿವಾಲ್ ಘಟನೆಯ ಕುರಿತು ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. ಇದಕ್ಕೂ ಮೊದಲು ಸಂಜಯ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ, ವಿಭವಕುಮಾರ ಅವರ ದುಷ್ಕೃತ್ಯವನ್ನು ಒಪ್ಪಿಕೊಂಡಿದ್ದರು. ಹಾಗೂ ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಸ್ವಾತಿ ಮಲಿವಾಲ್ ಮಾಡಿರುವ ತನ್ನ ಮೇಲಿನ ಹಲ್ಲೆಗೆ ಸಂಬಂಧಿಸಿದ ಆರೋಪದ ಕುರಿತು ಎಎಪಿ ಬಿಡುಗಡೆ ಮಾಡಿರುವ ಎರಡನೇ ವಿಡಿಯೋ ಇದಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement