ಭುವನೇಶ್ವರ: ‘ಪುರಿ ಜಗನ್ನಾಥ ದೇವರು ಮೋದಿಯ ಭಕ್ತ’ ಎಂಬ ಹೇಳಿಕೆ ಕುರಿತಂತೆ ದೇವರಲ್ಲಿ ಕ್ಷಮೆಯಾಚಿಸಿರುವ ಪುರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಬಿತ್ ಪಾತ್ರಾ, ತಮ್ಮ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಮುಂದಿನ ಮೂರು ದಿನಗಳು ಉಪವಾಸ ಮಾಡುವುದಾಗಿ ತಿಳಿಸಿದ್ದಾರೆ.
ಲೋಕಸಭೆ ಚುನಾವಣಾ ಪ್ರಚಾರದ ವೇಳೆ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡುತ್ತಿರುವ ವೇಳೆ, ‘ಪುರಿ ಜಗನ್ನಾಥ ದೇವರು ಪ್ರಧಾನಿ ಮೋದಿಯ ಭಕ್ತ’ ಎಂದು ಸಂಬಿತ್ ಪಾತ್ರಾ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾದ ನಂತರ ಬಾಯಿತಪ್ಪಿ ಹೇಳಿದ್ದಾಗಿ ಅವರು ತಮ್ಮ ಹೇಳಿಕೆಗೆ ವಿಷಾದಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಜಗನ್ನಾಥನ ಉತ್ಕಟ ‘ಭಕ್ತ’ (ಭಕ್ತ) ಎಂದು ಹೇಳುವ ಬದಲು ಬಾಯಿತಪ್ಪಿನಿಂದ ಹೀಗಾಗಿದೆ ಎಂದು ಕ್ಷಮೆಯಾಚಿಸಿದ್ದರು.
ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಪಾತ್ರಾ, “ಈ ತಪ್ಪಿಗೆ ನಾನು ಭಗವಾನ್ ಶ್ರೀ ಜಗನ್ನಾಥನ ಪಾದಕ್ಕೆ ಬಿದ್ದು ಕ್ಷಮೆಯಾಚಿಸುತ್ತೇನೆ. ಈ ತಪ್ಪಿಗೆ ಪ್ರಾಯಶ್ಚಿತ್ತಕ್ಕಾಗಿ ಮುಂದಿನ ಮೂರು ದಿನಗಳ ಕಾಲ ಉಪವಾಸ ಮಾಡುತ್ತೇನೆ” ಎಂದು X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸೋಮವಾರ, ಪುರಿಯಲ್ಲಿ ಮೋದಿಯವರ ರೋಡ್ಶೋ ಸಂದರ್ಭದಲ್ಲಿ ಅವರು ಅನೇಕ ಮಾಧ್ಯಮಗಳೊಂದಿಗೆ ಸಂವಾದ ನಡೆಸಿರುವುದಾಗಿ ಪಾತ್ರಾ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡುವಾಗ ‘ಮಹಾ ಪ್ರಭು ಶ್ರೀ ಜಗನ್ನಾಥನ ಭಕ್ತ ಪ್ರಧಾನಿ ಮೋದಿ’ ಎಂದು ಹೇಳುವ ಬದಲು ‘ಮೋದಿ ಭಕ್ತ ಜಗನ್ನಾಥ’ ಎಂದು ತಪ್ಪಾಗಿ ಹೇಳಿದ್ದರು.
https://twitter.com/i/status/1792636303030272340
ಸಂಬಿತ ಪಾತ್ರಾ ಮಾತುಗಳು ಆಕ್ರೋಶಕ್ಕೆ ಕಾರಣವಾಯಿತು. ಒಡಿಶಾ ಮುಖ್ಯಮಂತ್ರಿ ನವೀನ ಪಟ್ನಾಯಕ್ ಅವರು ಸಂಬಿತ ಪಾತ್ರಾ ಹೇಳಿಕೆಯನ್ನು ಖಂಡಿಸಿದರು, ಭಗವಾನ್ ಜಗನ್ನಾಥನನ್ನು ದೇಶದಲ್ಲಿ ರಾಜಕೀಯ ಭಾಷಣದಿಂದ ದೂರವಿಡಿ ಎಂದು ಬಿಜೆಪಿಗೆ ಮನವಿ ಮಾಡಿದರು.
“ಮಹಾಪ್ರಭು ಶ್ರೀ ಜಗನ್ನಾಥ ಬ್ರಹ್ಮಾಂಡದ ಪ್ರಭು. ಮಹಾಪ್ರಭುವನ್ನು ಇನ್ನೊಬ್ಬ ಮಾನವನ ಭಕ್ತ ಎಂದು ಕರೆಯುವುದು ಭಗವಂತನಿಗೆ ಮಾಡಿದ ಅವಮಾನ… ಇದು ಸಂಪೂರ್ಣವಾಗಿ ಖಂಡನೀಯ. ಇದು ಪ್ರಪಂಚದಾದ್ಯಂತ ಇರುವ ಕೋಟ್ಯಂತರ ಜಗನ್ನಾಥ ಭಕ್ತರು ಮತ್ತು ಒಡಿಶಾ ಜನರ ಭಾವನೆಗಳನ್ನು ಘಾಸಿಗೊಳಿಸಿದೆ ಮತ್ತು ಅವಮಾನಿಸಿದೆ ಎಂದು ಎಕ್ಸ್ ಪೋಸ್ಟ್ನಲ್ಲಿ ಪಟ್ನಾಯಕ್ ಬರೆದಿದ್ದಾರೆ.
ಸಂಬಿತ್ ಪಾತ್ರಾ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಒಡಿಶಾ ಮುಖ್ಯಮಂತ್ರಿ ನವೀನ ಪಟ್ನಾಯಕ್ ಸೇರಿದಂತೆ ಹಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಸಂಬಿತ್ ಪಾತ್ರಾ ಹೇಳಿಕೆ ವ್ಯಾಪಕ ಟ್ರೋಲ್ ಕೂಡ ಆಗಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ