ಚಿಕಿತ್ಸೆಗೆಂದು ಭಾರತಕ್ಕೆ ಬಂದಿದ್ದ ಬಾಂಗ್ಲಾದೇಶ ಸಂಸದ ಅನ್ವರುಲ್ ಅಜೀಂ ಶವವಾಗಿ ಪತ್ತೆ

ಕೋಲ್ಕತ್ತಾ : ಈ ತಿಂಗಳ ಆರಂಭದಲ್ಲಿ ವೈದ್ಯಕೀಯ ಚಿಕಿತ್ಸೆಗೆಂದು ಭಾರತಕ್ಕೆ ಬಂದಿದ್ದ ಬಾಂಗ್ಲಾದೇಶ(Bangladesh) ಸಂಸದ ಅನ್ವರುಲ್ ಅಜೀಂ ಅನಾರ್ ಅವರು ಕೋಲ್ಕತ್ತಾದ ನ್ಯೂಟೌನ್ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರು ಬಾಂಗ್ಲಾದೇಶದ ಪ್ರಧಾನಿ ಶೇಖ್​ ಹಸೀನಾ ಅವರ ಪಕ್ಷದ ಸಂಸದರು. ವೈದ್ಯಕೀಯ ಚಿಕಿತ್ಸೆಗೆಂದು ಅವರು ಮೇ 12ರಂದು ಕೋಲ್ಕತ್ತಾಗೆ ಬಂದಿದ್ದರು.
ಅನ್ವರುಲ್ ಅಜೀಂ ಕೆಲ ದಿನಗಳಿಂದ ನಾಪತ್ತೆಯಾಗಿದ್ದರು, ಅವರ ಪತ್ತೆಗೆ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಕೋಲ್ಕತ್ತಾದಲ್ಲಿರುವ ಬಾಂಗ್ಲಾದೇಶದ ಡೆಪ್ಯುಟಿ ಹೈಕಮಿಷನ್​ನ ಹಿರಿಯ ಅಧಿಕಾರಿಗಳ ಪ್ರಕಾರ, ಮೂರು ಬಾರಿ ಸಂಸದರಾಗಿದ್ದ ಅನಾರ್ ವೈದ್ಯಕೀಯ ಚಿಕಿತ್ಸೆಗೆಂದು ಕೋಲ್ಕತ್ತಾಗೆ ಬಂದಿದ್ದ ಒಂದು ದಿನದ ನಂತರ ನಾಪತ್ತೆಯಾಗಿದ್ದರು.
ನಗರದ ಬಾರಾನಗರದಲ್ಲಿರುವ ಸ್ನೇಹಿತ ಗೋಪಾಲ​ ಬಿಸ್ವಾಸ್ ಅವರ ಮನೆಯಲ್ಲಿ ಉಳಿದುಕೊಂಡಿದ್ದ ಅವರು, ಮೇ 13ರಂದು ಯಾರನ್ನೋ ಭೇಟಿಯಾಗಲು ಹೋಗುತ್ತಿದ್ದೇನೆಂದು ಹೊರಟವರು ವಾಪಸ್‌ ಬಂದಿರಲಿಲ್ಲ.

ಕೊಲೆಯ ಉದ್ದೇಶ ಇನ್ನಷ್ಟೇ ಗೊತ್ತಾಗಬೇಕಿದೆ. ಅನ್ವರುಲ್ ಅಜೀಂ ಮೇ 12 ರಂದು ಕೋಲ್ಕತ್ತಾಕ್ಕೆ ಬಂದಿದ್ದು, ಮೇ 13 ರಂದು ಮಧ್ಯಾಹ್ನ ಅವರು ವೈದ್ಯಕೀಯ ತಪಾಸಣೆಗಾಗಿ ಕೋಲ್ಕತ್ತಾ ಬಳಿಯ ಬಿಧಾನನಗರದ ಮನೆಗೆ ಸ್ನೇಹಿತರ ಜೊತೆ ಹೋದಾಗ ಕೊನೆಯದಾಗಿ ಕಂಡಿದ್ದರು. ಕೋಲ್ಕತ್ತಾದ ಬಿಧಾನನಗರದಲ್ಲಿರುವ ಕುಟುಂಬದ ಸ್ನೇಹಿತರೊಬ್ಬರ ಪ್ರಕಾರ, ಸಂಸದರು ದೆಹಲಿಗೆ ಪ್ರಯಾಣಿಸುವುದಾಗಿ ತಿಳಿಸಿದ್ದಾರೆ, ಆದರೆ ಮೇ 13 ರಿಂದ ಅವರೊಂದಿಗೆ ಯಾವುದೇ ನೇರ ಸಂಪರ್ಕವಿಲ್ಲ.ಸಂವಹನದ ಕೊರತೆ ಮತ್ತು ಅವರ ಹಠಾತ್ ನಾಪತ್ತೆಯಿಂದ ಕಳವಳಗೊಂಡ ಸಂಸದರ ಸ್ನೇಹಿತ ಗೋಪಾಲ ವಿಶ್ವಾಸ ಅವರು, ಕೋಲ್ಕತ್ತಾದ ಬಿಧಾನನಗರದ ಬಾರಾನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಸಂಸದ ಅನ್ವರುಲ್ ಅಜೀಂ ಅವರು ಚಿನ್ನದ ಆಮದು ಹಾಗೂ ರಫ್ತು ವ್ಯವಹಾರವನ್ನು ಹೊಂದಿದ್ದರು, ಅವರ ಹತ್ಯೆಯಲ್ಲಿ ಅಂತಾರಾಷ್ಟ್ರೀಯ ಕ್ರಿಮಿನಲ್​ಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಪ್ರಾಥಮಿಕ ತನಿಖೆಯಲ್ಲಿ ನಂತರ ಪೊಲೀಸರು ಮಹಿಳೆ ಸೇರಿದಂತೆ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳನ್ನು ಆರೋಪಿಗಳು ಎಂದು ಗುರುತಿಸಿದ್ದಾರೆ. ಅವರಲ್ಲಿ ಒಬ್ಬರನ್ನು ಬಂಧಿಸಲಾಗಿದೆ.ಸಂಸದರ ಹತ್ಯೆಯ ನಂತರ ಅವರು ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದಾರೆ ಎಂಬುದನ್ನು ಗುಪ್ತಚರ ವರದಿಗಳು ದೃಢಪಡಿಸಿವೆ. 56 ವರ್ಷದ ಸಂಸದ ಕಳೆದ ಎಂಟು ದಿನಗಳಿಂದನಾಪತ್ತೆಯಾಗಿದ್ದರೂ, ಇವರ ಮೊಬೈಲ್​ನಿಂದ ತಾನು ದೆಹಲಿಗೆ ತೆರಳುತ್ತಿದ್ದೇನೆ ಎಂಬ ಸಂದೇಶ ಅವರ ಕುಟುಂಬದವರಿಗೆ ಹೋಗಿತ್ತು.

ಪ್ರಮುಖ ಸುದ್ದಿ :-   ವೀಡಿಯೊ...| ವಂದೇ ಭಾರತ ರೈಲಿನಲ್ಲಿ ಬಿಜೆಪಿ ಶಾಸಕನ ಜೊತೆ ತನ್ನ ಸೀಟು ಬದಲಾಯಿಸಿಕೊಳ್ಳಲು ಒಪ್ಪದ ಪ್ರಯಾಣಿಕನ ಮೇಲೆ ಹಲ್ಲೆ

ಇತ್ತೀಚಿನ ಬೆಳವಣಿಗೆಯ ಪ್ರಕಾರ, ಈಗ, ಕೇಂದ್ರೀಯ ತನಿಖಾ ಬ್ಯೂರೋ‌ ಬಾಂಗ್ಲಾದೇಶದ ನಾಯಕನ ಹತ್ಯೆ ಪ್ರಕರಣದ ತನಿಖೆ ನಡೆಸಲಿದೆ.
ವರದಿಗಳ ಪ್ರಕಾರ, ನ್ಯೂ ಟೌನ್ ಕಟ್ಟಡದಲ್ಲಿ ಹಲವಾರು ರಕ್ತದ ಕಲೆಗಳು ಕಂಡುಬಂದಿವೆ, ಅಲ್ಲಿ ಅನ್ವರುಲ್ ಅಜೀಂ ಅವರನ್ನು ಕೊಲೆ ಮಾಡಲಾಗಿದೆ ಎಂದು ನಂಬಲಾಗಿದೆ ಮತ್ತು ಪ್ರಸ್ತುತ ವಿಧಿವಿಜ್ಞಾನದವರು ತನಿಖೆ ನಡೆಸುತ್ತಿದ್ದಾರೆ. ಅವರನ್ನು ಕೊಲೆ ಮಾಡಿ ಶವವನ್ನು ಈ ಪ್ರದೇಶದಲ್ಲಿ ಬಿಸಾಡಿರುವ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.
ಬಾಂಗ್ಲಾದೇಶದ ಗೃಹ ಸಚಿವ ಅಸಾದುಝಮಾನ್ ಖಾನ್ ಅವರು ಢಾಕಾದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕೋಲ್ಕತ್ತಾದಲ್ಲಿ ಸಂಸದರನ್ನು ಕೊಲ್ಲಲಾಯಿತು. ಅನ್ವರುಲ್ ಅಜೀಂ ಹತ್ಯೆಗೆ ಸಂಬಂಧಿಸಿದಂತೆ ಬಾಂಗ್ಲಾದೇಶ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. “ಇಲ್ಲಿಯವರೆಗೆ, ಭಾಗಿಯಾಗಿರುವ ಎಲ್ಲಾ ಹಂತಕರು ಬಾಂಗ್ಲಾದೇಶೀಯರು ಎಂದು ನಾವು ತಿಳಿದುಕೊಂಡಿದ್ದೇವೆ. ಇದು ಯೋಜಿತ ಕೊಲೆಯಾಗಿದೆ” ಎಂದು ಖಾನ್ ಹೇಳಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement