ಸೋಮವಾರ ನಡೆದ ತಮ್ಮ ವಿವಾಹದ ವೇಳೆ ವರನೊಬ್ಬ ತನ್ನ ವಧುವಿಗೆ ಸಾರ್ವಜನಿಕವಾಗಿ ಚುಂಬಿಸಿದ್ದು ಎರಡು ಕುಟುಂಬಗಳ ನಡುವೆ ಹೊಡೆದಾಟಕ್ಕೆ ಕಾರಣವಾದ ಘಟನೆ ಉತ್ತರ ಪ್ರದೇಶದ ಹಾಪುರದಲ್ಲಿ ನಡೆದಿದೆ.
ವರಮಾಲಾ ಸಮಾರಂಭದಲ್ಲಿ ನವವಿವಾಹಿತರು ಚುಂಬನ ವಿನಿಮಯ ಮಾಡಿಕೊಂಡ ನಂತರ ವಧುವಿನ ಕುಟುಂಬವು ವರನ ಸಂಬಂಧಿಕರನ್ನು ವೇದಿಕೆಯಲ್ಲಿ ಥಳಿಸಿತು. ಹಾಗೂ ನಂತರ ಉತ್ತರ ಪ್ರದೇಶದ ಹಾಪುರದ ಅಶೋಕ್ ನಗರದಲ್ಲಿನ ಮದುವೆಯ ಸ್ಥಳವು ರಣರಂಗವಾಗಿ ಮಾರ್ಪಟ್ಟಿದೆ.
ವಧುವನ್ನು ಚುಂಬಿಸಿದ ವರನ ಕೃತ್ಯದಿಂದ ಕುಪಿತಗೊಂಡ ವಧುವಿನ ಕಡೆಯುವರು ಹಾಗೂ ವರನ ಕಡೆಯವರ ನಡುವೆ ವಾಗ್ವಾದ ನಡೆಯಿತು. ಇದಾದ ಬಳಿಕ ವಧುವಿನ ಕುಟುಂಬಸ್ಥರು ದೊಣ್ಣೆ ಹಿಡಿದು ಮಧುವೆ ಮಂಟಪವನ್ನು ಏರಿ ವರನ ಮನೆಯವರಿಗೆ ಥಳಿಸಿದ್ದಾರೆ. ಹೊಡೆದಾಟದಲ್ಲಿ ವಧುವಿನ ತಂದೆ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ.
ನಂತರ ಪೊಲೀಸರನ್ನು ಕರೆಸಲಾಯಿತು ಮತ್ತು ಎರಡೂ ಕುಟುಂಬಗಳ ಏಳು ಜನರನ್ನು ಬಂಧಿಸಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ಸೋಮವಾರ ರಾತ್ರಿ ವಧುವಿನ ತಂದೆ ತಮ್ಮ ಇಬ್ಬರು ಹೆಣ್ಣುಮಕ್ಕಳ ಮದುವೆಯನ್ನು ಏರ್ಪಡಿಸಿದ್ದರು. ಮೊದಲ ಮದುವೆ ಯಾವುದೇ ತೊಂದರೆಯಿಲ್ಲದೆ ಮುಕ್ತಾಯವಾಯಿತು, ಆದರೆ ಎರಡನೇ ಮದುವೆ ಸಮಾರಂಭದ ವೇಳೆ ಘಷರ್ಣೆ ನಡೆಯಿತು.
ವಧುವಿನ ಕುಟುಂಬವು ವರನು ವೇದಿಕೆಯ ಮೇಲೆ ಮದುಮಗಳಿಗೆ ಬಲವಂತವಾಗಿ ಚುಂಬಿಸಿದ್ದಾನೆ ಎಂದು ಆರೋಪಿಸಿದೆ, ಆದರೆ ವರಮಾಲಾ ಸಮಾರಂಭದ ನಂತರ ಚುಂಬಿಸುವಂತೆ ವಧುವೇ ಹೇಳಿದ್ದಳು ಎಂದು ವರ ಹೇಳಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಲಿಖಿತ ದೂರು ಬಂದಿಲ್ಲ. ದೂರು ಸ್ವೀಕರಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಹಾಪುರ ಹಿರಿಯ ಪೊಲೀಸ್ ಅಧಿಕಾರಿ ರಾಜಕುಮಾರ ಅಗರ್ವಾಲ್ ಹೇಳಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 151 ರ ಅಡಿಯಲ್ಲಿ ಸಾರ್ವಜನಿಕ ಶಾಂತಿ ಕದಡುವ ಆರೋಪದಡಿ ಆರು ಜನರ ಮೇಲೆ ಆರೋಪ ಹೊರಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ