ಪ್ರಧಾನಿ ಮೋದಿ ಸಂಪುಟಕ್ಕೆ ಸುರೇಶ ಗೋಪಿ ರಾಜೀನಾಮೆ? ಕೇರಳ ಸಂಸದ ಹೇಳಿದ್ದೇನು..?

ನವದೆಹಲಿ: ಕೇಂದ್ರ ರಾಜ್ಯ ಸಚಿವರಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ ಕೇರಳದ ಏಕೈಕ ಬಿಜೆಪಿ ಸಂಸದ ಸುರೇಶ ಗೋಪಿ ಅವರು ತಾನು ಸಚಿವ ಸಂಪುಟಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಮಾಧ್ಯಮ ವರದಿಯಾಗಿದ್ದನ್ನು ತಳ್ಳಿಹಾಕಿದ್ದಾರೆ ಹಾಗೂ ಅದು ತಪ್ಪು ಸುದ್ದಿ ಎಂದು ಹೇಳಿದ್ದಾರೆ.
ಕೆಲ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ತಳ್ಳಿಹಾಕಿರುವ ಸುರೇಶ ಗೋಪಿ, ಸೋಮವಾರ ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ, ನಾನು ಸಚಿವ ಸಂಪುಟಕ್ಕೆ ರಾಜೀನಾಮೆ ನೀಡುವ ಸುದ್ದಿ “ಅತ್ಯಂತ ತಪ್ಪು ಸುದ್ದಿ” ಎಂದು ಹೇಳಿದ್ದಾರೆ.

“ಕೆಲವು ಮಾಧ್ಯಮ ವೇದಿಕೆಗಳು ನಾನು ಮೋದಿ ಸರ್ಕಾರದ ಮಂತ್ರಿ ಮಂಡಳಿಗೆ ರಾಜೀನಾಮೆ ನೀಡಲಿದ್ದೇನೆ ಎಂದು ತಪ್ಪು ಸುದ್ದಿಯನ್ನು ಹರಡುತ್ತಿವೆ. ಇದು ಸಂಪೂರ್ಣವಾಗಿ ತಪ್ಪು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಾವು ಕೇರಳದ ಅಭಿವೃದ್ಧಿ ಮತ್ತು ಸಮೃದ್ಧಿಗೆ ಬದ್ಧರಾಗಿದ್ದೇವೆ” ಸುರೇಶ ಗೋಪಿ ಬರೆದಿದ್ದಾರೆ.
ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳ ನಂತರ ಸುರೇಶ್ ಗೋಪಿ ಅವರು ತಮ್ಮ ಕ್ಷೇತ್ರವಾದ ತ್ರಿಶೂರ್‌ನ ಜನರಿಗಾಗಿ ಕೆಲಸ ಮಾಡಲು ತಮ್ಮನ್ನು ಹುದ್ದೆಯಿಂದ ಮುಕ್ತಗೊಳಿಸುವಂತೆ ಮನವಿ ಮಾಡಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು.

ಪ್ರಮುಖ ಸುದ್ದಿ :-   ಸೋನಂ ವಾಂಗ್ಚುಕ್ ಉಪವಾಸ ಅಂತ್ಯಗೊಳಿಸಲು ಸಿದ್ಧ ಎಂದ ಪತ್ನಿ ; ಆದರೆ ಅದಕ್ಕೆ ಎರಡು ಷರತ್ತುಗಳು...

ಸುರೇಶ ಗೋಪಿ ಅವರ ಸಿನಿಮಾ ಕಮಿಟ್‌ಮೆಂಟ್‌ಗಳ ಕಾರಣದಿಂದ ಸಚಿವ ಸಂಪುಟದಿಂದ ತಮ್ಮನ್ನು ಬಿಡುಗಡೆ ಮಾಡುವಂತೆ ಅವರು ಮನವಿ ಮಾಡಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿದ್ದವು.
ಮಲಯಾಳಂ ಚಿತ್ರರಂಗದ ಪ್ರಮುಖ ನಟರಾದ ಸುರೇಶ ಗೋಪಿ ಅವರು ಈಗಷ್ಟೇ ಮುಗಿದ ಲೋಕಸಭೆ ಚುನಾವಣೆಯಲ್ಲಿ ಕೇರಳದಿಂದ ಚುನಾಯಿತರಾದ ಮೊದಲ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದರಾಗುವ ಮೂಲಕ ಇತಿಹಾಸವನ್ನು ಬರೆದಿದ್ದಾರೆ. ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಸುರೇಶ್ ಗೋಪಿ 74,686 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಪ್ರಮುಖ ಸುದ್ದಿ :-   ತೃಣಮೂಲ ಬಂಡಾಯ ಸಂಸದರನ್ನು ಯಾಕೆ ಆಹ್ವಾನಿಸಿದ್ದೀರಿ ? : ಸರ್ವಪಕ್ಷ ಸಭೆಗೆ ಕೆಲಕಾಲ ಬಹಿಷ್ಕರಿಸಿದ ವಿಪಕ್ಷಗಳು

5 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement