ನವದೆಹಲಿ : ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ ಅವರು ನ್ಯಾಯಾಲಯ ಉದ್ದೇಶಿಸಿ ಆಡಿದ್ದ ಮಾತುಗಳ ವೀಡಿಯೊ ರೆಕಾರ್ಡಿಂಗ್ಗಳನ್ನು ಸಾಮಾಜಿಕ ಜಾಲತಾಣ ವೇದಿಕೆಗಳಿಂದ ತೆಗೆದು ಹಾಕುವಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಅವರ ಪತ್ನಿ ಹಾಗೂ ಇತರೆ ಐವರಿಗೆ ದೆಹಲಿ ಹೈಕೋರ್ಟ್ ಶನಿವಾರ ಆದೇಶಿಸಿದೆ.
.ಅಲ್ಲದೆ, ಈ ವಿಚಾರಣೆಯ ವೀಡಿಯೊಗಳಿರುವ ಇತರೆ ಪೋಸ್ಟ್ಗಳು ಹಾಗೂ ರೀಪೋಸ್ಟ್ಗಳನ್ನು ಕೂಡ ಅಳಿಸಿ ಹಾಕುವಂತೆ ಎಕ್ಸ್ (ಟ್ವಿಟರ್), ಫೇಸ್ಬುಕ್, ಇನ್ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ರೀತಿಯ ಸಾಮಾಜಿಕ ಮಾಧ್ಯಮ ಕಂಪನಿಗಳಿಗೂ ನ್ಯಾಯಮೂರ್ತಿಗಳಾದ ನೀನಾ ಬನ್ಸಾಲ್ ಕೃಷ್ಣ ಮತ್ತು ಅಮಿತ ಶರ್ಮಾ ಅವರ ವಿಭಾಗೀಯ ಪೀಠ ವೀಡಿಯೊವನ್ನು ತೆಗೆದು ಹಾಕಲು ಆದೇಶಿಸಿದೆ.
ವಕೀಲ ವೈಭವ ಸಿಂಗ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಆಲಿಸಿದ ನ್ಯಾಯಾಲಯ ವಿಡಿಯೋ ಪ್ರಸಾರ ಮಾಡಿದ್ದ ಸುನೀತಾ ಕೇಜ್ರಿವಾಲ್, ಸಾಮಾಜಿಕ ಮಾಧ್ಯಮ ವೇದಿಕೆಗಳು ಹಾಗೂ ಸಾಮಾಜಿಕ ಮಾಧ್ಯಮ ಖಾತೆದಾರರಿಗೆ ನೋಟಿಸ್ ನೀಡಿದೆ.
ಸುನೀತಾ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಮತ್ತಿತರ ವಿರೋಧ ಪಕ್ಷಗಳಿಗೆ ಸಂಬಂಧಿಸಿದ ಹಲವರು ಸಾಮಾಜಿಕ ಮಾಧ್ಯಮ ಖಾತೆಗಳು ನ್ಯಾಯಾಲಯದ ಕಲಾಪಗಳ ವೀಡಿಯೊ/ಆಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿವೆ ಎಂದು ಸಿಂಗ್ ದೂರಿದ್ದರು.
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕೇಜ್ರಿವಾಲ ಅವರನ್ನು ಬಂಧಿಸಿ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಕಾವೇರಿ ಬವೇಜಾ ಅವರೆದುರು ಹಾಜರುಪಡಿಸಿದ್ದ ವೇಳೆ ಕೇಜ್ರಿವಾಲ ನ್ಯಾಯಾಲಯ ಉದ್ದೇಶಿಸಿ ಖುದ್ದು ಮಾತನಾಡಿದ್ದರು.
ನ್ಯಾಯಾಲಯಗಳ ವೀಡಿಯೋ ಕಾನ್ಫರೆನ್ಸಿಂಗ್ ದೆಹಲಿಯ ಹೈಕೋರ್ಟ್ ನಿಯಮಾವಳಿ 2021ರ ಪ್ರಕಾರ ನ್ಯಾಯಾಲಯದ ವಿಚಾರಣೆ ರೆಕಾರ್ಡ್ ಮಾಡುವುದನ್ನು ನಿಷೇಧಿಸಲಾಗಿದ್ದು ಈ ವೀಡಿಯೊಗಳನ್ನು ವೈರಲ್ ಮಾಡುವುದು ನ್ಯಾಯಾಂಗ ಮತ್ತು ನ್ಯಾಯಾಧೀಶರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಯತ್ನವಾಗಿದೆ ಎಂದು ವಕೀಲ ವೈಭವ ಸಿಂಗ್ ಅವರು ದೂರಿದ್ದರು. ಘಟನೆಯ ಬಗ್ಗೆ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ನಡೆಸಬೇಕು ಎಂದು ಅವರು ಕೋರಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ