ತಮಿಳುನಾಡು ಸಾರಾಯಿ ದುರಂತ: ಅಕ್ರಮ ಮದ್ಯ ಸೇವಿಸಿ 33 ಮಂದಿ ಸಾವು

ಚೆನ್ನೈ: ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ಅಕ್ರಮ ಮದ್ಯ ಸೇವಿಸಿ 33 ಮಂದಿ ಸಾವಿಗೀಡಾಗಿದ್ದು, ಇತರ 15 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಹಾಗೂ 109 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಸಂತ್ರಸ್ತರು ಕಲ್ಲಕುರಿಚಿ ಸರ್ಕಾರಿ ವೈದ್ಯಕೀಯ ಕಾಲೇಜು, ಜಿಪ್ಮರ್ ಪುದುಚೇರಿ ಮತ್ತು ಸೇಲಂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮಿಳುನಾಡು ಸರ್ಕಾರ ಪ್ರಕರಣದ ತನಿಖೆಯನ್ನು ಸಿಬಿ-ಸಿಐಡಿಗೆ ವರ್ಗಾಯಿಸಲಾಗಿದೆ.
ದುರಂತದ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ಇ ಪಳನಿಸ್ವಾಮಿ ಅವರು ಕಲ್ಲಾಕುರಿಚಿಯಲ್ಲಿ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಲು ಮುಂದಾಗಿದ್ದಾರೆ.
ಈ ನಡುವೆ ಪ್ರಕರಣ ಸಂಬಂಧ ಓರ್ವನನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಕನ್ನುಕುಟ್ಟಿ (49) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮದ್ಯ ಮಾರಾಟ ಮಾಡುತ್ತಿದ್ದ ಆರೋಪ ಈತನ ಮೇಲಿದೆ. ಆತನ ಬಳಿಯಿದ್ದ 200 ಲೀಟರ್ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕನ್ನುಕುಟ್ಟಿ ದೇಶೀ ಮದ್ಯದಲ್ಲಿ ಮೆಥನಾಲ್ ಬೆರೆಸಿ ಪ್ಯಾಕೆಟ್ ಗಳಲ್ಲಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕಲ್ಲಕುರಿಚಿ ಜಿಲ್ಲಾಧಿಕಾರಿ ಶ್ರವಣಕುಮಾರ ಜಾತಾವತ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅವರನ್ನು ಅಮಾನತುಗೊಳಿಸಲಾಗಿದೆ.
ಬಿಕ್ಕಟ್ಟು ನಿಭಾಯಿಸಲು ಆಸ್ಪತ್ರೆಗಳು ಸಜ್ಜಾಗಿವೆ ಎಂದು ನೂತನವಾಗಿ ನೇಮಕಗೊಂಡ ಕಲ್ಲಕುರಿಚಿ ಜಿಲ್ಲಾಧಿಕಾರಿ ಎಂ.ಎಸ್.ಪ್ರಶಾಂತ ಹೇಳಿದ್ದಾರೆ. ಆಡಳಿತವು ಸಾಕಷ್ಟು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದೆ. ಸಹಾಯಕ್ಕಾಗಿ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳನ್ನು ಸಹ ಕರೆಯಲಾಗಿದೆ ಎಂದು ಅವರು ಹೇಳಿದರು.
ವರದಿಗಳ ಪ್ರಕಾರ, ಕಲ್ಲಕುರಿಚಿ ಪಟ್ಟಣ ಮತ್ತು ಅಕ್ಕಪಕ್ಕದ ಪ್ರದೇಶಗಳ ಹತ್ತಾರು ಜನರು ಮಂಗಳವಾರ ರಾತ್ರಿ ಕರುಣಾಪುರಂನಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡಿದ ಅಕ್ರಮ ಮದ್ಯವನ್ನು ಸೇವಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಛತ್ತೀಸ್‌ಗಡದಲ್ಲಿ 3 ತಿಂಗಳ ಪಡಿತರ ಒಂದೇ ಬಾರಿಗೆ ವಿತರಣೆ ; ಗೇಟ್‌ ಮುರಿದು ಒಳ ನುಗ್ಗಿದ ಜನ ಸಮೂಹ...!

ಮನೆಗೆ ಹಿಂದಿರುಗಿದ ನಂತರ, ಅವರು ತಲೆತಿರುಗುವಿಕೆ, ತಲೆನೋವು, ವಾಂತಿ, ವಾಕರಿಕೆ, ಹೊಟ್ಟೆ ನೋವು ಮೊದಲಾದ ತೀವ್ರ ರೋಗಲಕ್ಷಣಗಳನ್ನು ಅನುಭವಿಸಿದರು. ಕುಟುಂಬ ಸದಸ್ಯರು ಸಂತ್ರಸ್ತರನ್ನು ಖಾಸಗಿ ಆಸ್ಪತ್ರೆ ಮತ್ತು ಕಲ್ಲಕುರಿಚಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಿದ್ದಾರೆ, ಅಲ್ಲಿ ಹತ್ತು ಜನರು ಮೃತಪಟ್ಟಿದ್ದಾರೆ ಎಂದು ಆರಂಭದಲ್ಲಿ ವರದಿಯಾಗಿತ್ತು.
ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ದುರಂತ ಘಟನೆಯ ಬಗ್ಗೆ ತಮ್ಮ ಆಘಾತವನ್ನು ವ್ಯಕ್ತಪಡಿಸಿದ್ದಾರೆ. “ಕಲ್ಲಾಕುರಿಚಿಯಲ್ಲಿ ಕಲಬೆರಕೆ ಮದ್ಯ ಸೇವಿಸಿದ ಜನರ ಸಾವಿನ ಸುದ್ದಿ ಕೇಳಿ ನನಗೆ ಆಘಾತ ಮತ್ತು ದುಃಖವಾಯಿತು. ಈ ಪ್ರಕರಣದಲ್ಲಿ ಅಪರಾಧದಲ್ಲಿ ಭಾಗಿಯಾದವರನ್ನು ಬಂಧಿಸಲಾಗುತ್ತದೆ. ತಡೆಯುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಇಂತಹ ಅಪರಾಧಗಳಲ್ಲಿ ಭಾಗಿಯಾದವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement