ಅಯೋಧ್ಯೆ: ಜನವರಿ 22 ರಂದು ಸಾರ್ವಜನಿಕ ದರ್ಶನಕ್ಕೆ ಉದ್ಘಾಟನೆಗೊಂಡ ನಂತರ, ಮೊದಲ ಭಾರಿ ಮಳೆಗೆ ಅಯೋಧ್ಯೆ ರಾಮ ಮಂದಿರದ ದೇವಾಲಯದ ಗರ್ಭಗುಡಿಯ ಮೇಲ್ಛಾವಣಿಯಿಂದ ನೀರು ಸೋರಿಕೆಯಾಗುತ್ತಿದೆ ಎಂದು ದೇಗುಲದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ.
ದೇವಸ್ಥಾನದ ಆವರಣದಿಂದ ಮಳೆ ನೀರು ಹರಿದು ಹೋಗಲು ಯಾವುದೇ ವ್ಯವಸ್ಥೆ ಇಲ್ಲದಿರುವುದರಿಂದ ಸೋರಿಕೆಯಾಗಿದೆ. ದೇವಸ್ಥಾನದ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ದೇವಾಲಯದ ಟ್ರಸ್ಟ್ ಮೂಲಗಳ ಪ್ರಕಾರ, ದೇವಾಲಯದ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ನೃಪೇಂದ್ರ ಮಿಶ್ರಾ ಅವರು ದೇವಾಲಯಕ್ಕೆ ಆಗಮಿಸಿ ಮೇಲ್ಛಾವಣಿಯನ್ನು ಸರಿಪಡಿಸಲು ಮತ್ತು ಜಲನಿರೋಧಕ ಅಳವಡಿಸಲು ಸೂಚನೆಗಳನ್ನು ನೀಡಿದ್ದಾರೆ. ಕಟ್ಟಡ ಕಾಮಗಾರಿ ನಡೆಯುತ್ತಿರುವುದರಿಂದ ಮಳೆ ನೀರು ಸೋರಿಕೆಯಾಗುತ್ತಿದೆ ಎಂದು ಹೇಳಲಾಗಿದೆ.
ಡಿಸೆಂಬರ್ ವೇಳೆಗೆ ನಿರ್ಮಾಣ ಕಾರ್ಯ ಪೂರ್ಣ
ಮಂದಿರ ನಿರ್ಮಾಣದ ಪ್ರಗತಿಯ ಕುರಿತು ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ನೃಪೇಂದ್ರ ಮಿಶ್ರಾ ಅವರು, ಮೊದಲ ಅಂತಸ್ತಿನ ಕಾಮಗಾರಿ ನಡೆಯುತ್ತಿದ್ದು, ಈ ವರ್ಷ ಜುಲೈ ವೇಳೆಗೆ ಪೂರ್ಣಗೊಳ್ಳಲಿದೆ. ಡಿಸೆಂಬರ್ ವೇಳೆಗೆ ಮಂದಿರ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಆಚಾರ್ಯ ಸತ್ಯೇಂದ್ರ ದಾಸ್ ಸುದ್ದಿಗಾರರೊಂದಿಗೆ ಮಾತನಾಡಿ, ರಾಮ್ ಲಲ್ಲಾನ ವಿಗ್ರಹದ ಮುಂದೆ ಅರ್ಚಕರು ಕುಳಿತುಕೊಳ್ಳುವ ಸ್ಥಳ ಮತ್ತು ವಿಐಪಿ ದರ್ಶನಕ್ಕೆ ಜನರು ಬರುವ ಸ್ಥಳದ ಮೇಲಿನ ಛಾವಣಿಯಿಂದ ಮಳೆ ನೀರು ಸೋರಿಕೆಯಾಗುತ್ತಿದೆ ಎಂದು ಅವರು ಹೇಳಿದರು.
ಶನಿವಾರ ಮಧ್ಯರಾತ್ರಿ ಸುರಿದ ಮಳೆಯ ನಂತರ ದೇವಾಲಯದ ಆವರಣದಿಂದ ಮಳೆ ನೀರು ಹರಿದು ಹೋಗಲು ಯಾವುದೇ ವ್ಯವಸ್ಥೆ ಇಲ್ಲವಾದ್ದರಿಂದ ನೀರು ನಿಂತಿದೆ. ಈ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ದೇವಸ್ಥಾನದ ಅಧಿಕಾರಿಗಳನ್ನು ಒತ್ತಾಯಿಸಿದರು.
ಶನಿವಾರ ರಾತ್ರಿ ಸುರಿದ ಮಳೆಯಿಂದಾಗಿ ಇಲ್ಲಿನ ರಾಮಪಥ ರಸ್ತೆ ಮತ್ತು ಅದರ ಪಕ್ಕದ ಲೇನ್ಗಳು ಜಲಾವೃತವಾಗಿದ್ದವು. ಈ ಪ್ರದೇಶದ ಮನೆಗಳಿಗೆ ಚರಂಡಿ ನೀರು ನುಗ್ಗಿದೆ, ಅಯೋಧ್ಯೆಯಲ್ಲಿ ರಾಮಮಥ ರಸ್ತೆ ಮತ್ತು ಇತರ ಹೊಸದಾಗಿ ನಿರ್ಮಿಸಲಾದ ರಸ್ತೆಗಳು ಕೆಲವು ಸ್ಥಳಗಳಲ್ಲಿ ಕುಸಿದವು.
ನಿಮ್ಮ ಕಾಮೆಂಟ್ ಬರೆಯಿರಿ